ಹಾಸನ, (ಮಾರ್ಚ್ 09): ಇವತ್ತು ಕರ್ನಾಟಕದಲ್ಲಿ ಕರಾಳ ಭಾನುವಾರ ಅಂತ ಹೇಳಬಹುದು. ಇಂದು (ಮಾರ್ಚ್ 09) ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಸಜೀವ ದಹನವಾಗಿದ್ದರೆ, ಮತ್ತೊಂದೆಡೆ ಚಿತ್ರದುರ್ಗದಲ್ಲಿ ಸಂಭವಿಸಿದ ಕಾರು-ಲಾರಿ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇದೀಗ ಹಾಸನದಲ್ಲಿ ಪಾಳು ಬಿದ್ದಿದ್ದ ಕಟ್ಟಡ ಕುಸಿದುಬಿದ್ದು ಮೂವರು ದುರಂತ ಅಂತ್ಯಕಂಡಿದ್ದಾರೆ. ಹೌದು.. ಪಾಳುಬಿದ್ದ ಕಟ್ಟಡ ಕುಸಿದುಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಹಣ್ಣು ಖರೀದಿಗೆ ಬಂದಿದ್ದ ನಜೀರ್ ಹಾಗೂ ಅಮರನಾಥ್ ಮೃತರು. ಇನ್ನು ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಸಹ ಗಂಭೀರಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಸತ್ಯನಾರಾಯಣ ಎಂಬುವರಿಗೆ ಸೇರಿದ್ದ ಎಂಟು ಮಳಿಗೆಗಳಿದ್ದ ಹಳೆಯ ಕಟ್ಟಡ ಇದಾಗಿದ್ದು, ಇದರಲ್ಲಿ ವ್ಯಾಪಾರ ನಡೆಯುತ್ತಿತ್ತು. ಹೀಗಾಗಿ ನಜೀರ್ ಹಾಗೂ ಅಮರನಾಥ್ ಹಣ್ಣು ಖರೀದಿ ಮಾಡಲು ಬಂದಿದ್ದಾರೆ. ಈ ವೇಳೆ ಕಟ್ಟಡದ ಸಬ್ಜಾ ಕುಸಿದುಬಿದ್ದಿದೆ. ಇನ್ನು ಘಟನೆಯಲ್ಲಿ ಇಬ್ಬರು ಮಹಿಳಾ ವ್ಯಾಪಾರಿಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇನ್ನು ಕಟ್ಟಡದ ಅವಶೇಷದಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೇಲೂರು ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಘಟನೆ ಸಂಬಂಧ ಟಿವಿ9ಗೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆ ಬೇಲೂರಿನಲ್ಲಿ ಹಳೆಯ ಕಟ್ಟಡದ ಸಜ್ಜಾ ಕುಸಿತದಲ್ಲಿ ನಜೀರ್, ಅಮರನಾಥ್ ಎಂಬುವವರು ಮೃತಪಟ್ಟಿದ್ದಾರೆ. ಚನ್ನಕೇಶವಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಖಾಸಗಿ ಕಟ್ಟಡದ ಸಜ್ಜಾ ಕುಸಿದು ಅನಾಹುತ ಸಂಭವಿಸಿದ್ದು, ಲೀಲಮ್ಮ, ಜ್ಯೋತಿ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಸಣ್ಣಪುಟ್ಟ ಗಾಯಗೊಂಡಿರುವ ಶಿಲ್ಪಾ ಎಂಬುವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು, ಗಾಯಾಳುಗಳು ರಸ್ತೆ ಬದಿ ವ್ಯಾಪಾರಿಗಳೆಂಬ ಮಾಹಿತಿ ಇದೆ ಎಂದು ತಿಳಿಸಿದರು.
ಇನ್ನು ಈ ದುರ್ಘಟನೆಯಿಂದ ಹೂ ವ್ಯಾಪಾರಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ, ಈಗ ಕುಸಿದು ಬಿದ್ದಿರುವ ಈ ಸಜ್ಜಾ ಕೆಳಗೆ ಸೋಮಶೇಖರ್ ಎನ್ನುವ ವ್ಯಕ್ತಿ ಹೂ ವ್ಯಾಪಾರ ಮಾಡುತ್ತಿದ್ದ. ಆದ್ರೆ, ನಿದ್ರೆ ಮಂಪರಿನಲ್ಲಿ ಅಂಗಡಿ ಬಿಟ್ಟು ಪಕ್ಕಕ್ಕೆ ಹೋಗಿದ್ದ. ಆ ವೇಳೆ ಸಜ್ಜಾ ಕುಸಿದುಬಿದ್ದಿದೆ. ಅದೃಷ್ಟವಶಾತ್ ಹೂ ವ್ಯಾಪಾರಿ ಸೋಮಶೇಖರ್ ಕೂದಲೆಳೆ ಅಂತರದಲ್ಲಿ ಪ್ರಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಈ ಬಗ್ಗೆ ಸೋಮಶೇಖರ್ ಟಿವಿ9 ಜೊತೆ ಮಾತನಾಡಿದ್ದು, ನೋಡ ನೋಡುತ್ತಲೇ ನಮ್ಮ ಜೊತೆಗಿದ್ದವರ ಸಾವಾಗಿದೆ. ಯಾವುದೋ ಜನ್ಮದ ಪುಣ್ಯ ನನ್ನ ಜೀವ ಉಳಿಸಿದೆ. ದೇವರೇ ನನ್ನ ಪಾರು ಮಾಡಿದ್ದಾನೆ. ಇಂದು ಭಾನುವಾರ ಹಾಗಾಗಿ ಹೆಚ್ಚಿನ ವ್ಯಾಪಾರಿಗಳು ಬಂದಿಲ್ಲ. ಬೇರೆ ದಿನ ಆಗಿದ್ದರೆ ದೊಡ್ಡ ದುರಂತ ಆಗುತ್ತಿತ್ತು ಎಂದು ಘಟನೆಯ ಭೀಕರತೆ ಬಿಚ್ಚಿಟ್ಟಿದ್ದಾರೆ.
Published On - 2:32 pm, Sun, 9 March 25