ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶ: ಆದೇಶದ ಪ್ರತಿಗೇ ಬೆಂಕಿ ಹಚ್ಚಿ ಹಾವೇರಿ ರೈತರ ಆಕ್ರೋಶ!

ಹಾವೇರಿಯಲ್ಲಿ ರೈತರ ಆಕ್ರೋಶ ಸ್ಫೋಟಗೊಂಡಿದೆ. ಟಯರ್​​ಗೆ ಬೆಂಕಿ ಹಚ್ಚಿದ್ದಾರೆ. ಜಾಥಾ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಬೆಂಕಿ ಉಗುಳಿದ್ದಾರೆ. ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಆದೇಶಿಸಿದ್ದು, ಇದರಿಂದಲೂ ರೈತರು ತೃಪ್ತಿಯಾಗಿಲ್ಲ. ಕಾರಣವೇನು? ಇಲ್ಲಿದೆ ಮಾಹಿತಿ.

ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶ: ಆದೇಶದ ಪ್ರತಿಗೇ ಬೆಂಕಿ ಹಚ್ಚಿ ಹಾವೇರಿ ರೈತರ ಆಕ್ರೋಶ!
ಹಾವೇರಿಯಲ್ಲಿ ರೈತರ ಪ್ರತಿಭಟನೆ

Updated on: Dec 02, 2025 | 7:04 AM

ಹಾವೇರಿ, ಡಿಸೆಂಬರ್ 2: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ನಡೆಯುತ್ತಿದ್ದ ಹೋರಾಟ ಇದೀಗ ಮಗ್ಗಲು ಬದಲಿಸಿದೆ. ರೈತರ ಪ್ರತಿಭಟನೆ (Farmers Protest) ತೀವ್ರಗೊಳ್ಳುತ್ತಿರುವುದರ ಮಧ್ಯೆಯೇ ಸರ್ಕಾರ ಒಬ್ಬ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶಿಸಿತ್ತು. ಆದರೆ ಇದೂ ಸಹ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಹಾವೇರಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಾವೇರಿ ಜಿಲ್ಲೆಯಲ್ಲಿ 12 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯಲಾಗಿದೆ. ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಆದೇಶಿಸಿದ್ದಾರೆ. ಹಾಗಾದರೆ ಉಳಿದ ಮೆಕ್ಕೆಜೋಳವನ್ನು ಏನು ಮಾಡುವುದು ಎಂದು ರೈತರು ಪ್ರಶ್ನಿಸಿದ್ದಾರೆ. ಅಲ್ಲದೆ, ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಹೋಗುವ ವೇಳೆ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕೊಪ್ಪಳ, ವಿಜಯನಗರದಲ್ಲೂ ಪ್ರತಿಭಟನೆ

ಈವರೆಗೂ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗದ ಹಿನ್ನೆಲೆ ಕೊಪ್ಪಳ ಮತ್ತು ವಿಜಯನಗರದಲ್ಲಿ ಬಿಜೆಪಿಯಿಂದಲೂ ಪ್ರತಿಭಟನೆ ನಡೆಸಲಾಯಿತು. ಕೊಪ್ಪಳದ ಅಶೋಕ ವೃತ್ತದಲ್ಲಿ ಎತ್ತಿನಬಂಡಿಗಳನ್ನು ತಂದು, ಮೆಕ್ಕೆಜೋಳ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಲಾಯಿತು. ವಿಜಯ ನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ನೇತ್ರತ್ವದಲ್ಲಿ ಹೋರಾಟ ನಡೆಯಿತು.

ಗದಗದಲ್ಲಿ ಖರೀದಿ ಕೇಂದ್ರ ಓಪನ್: ರೈತರ ಸಂಭ್ರಮ

ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ 17ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಗವಿಮಠದ ಕುಮಾರ ಮಹಾರಾಜ್ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಕೊನೆಗೂ ರೈತರ ಹೋರಾಟಕ್ಕೆ ಗದಗ ಜಿಲ್ಲಾಡಳಿತ ಮಣಿದಿದ್ದು ಖರೀದಿ ಕೇಂದ್ರ ಆರಂಭಿಸಿದೆ. ಸೋಮವಾರ ರಾತ್ರಿ 10ಗಂಟೆ ವೇಳೆಗೆ ಡಿಸಿ ಸಿ.ಎನ್ ಶ್ರೀಧರ್ ರೈತರ ಹೋರಾಟದ ವೇದಿಕೆಗೆ ಆಗಮಿಸಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡುತ್ತಿದ್ದಂತೆ ರೈತರು ಸಂಭ್ರಮಾಚರಣೆ ಮಾಡಿದರು.

ಮೆಕ್ಕೆಜೋಳ ಖರೀದಿ ಸಂಬಂಧ ಸಿಎಂ ಮತ್ತೊಮ್ಮೆ ಸಭೆ

ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೆ ಸೋಮವಾರ ಸಭೆ ನಡೆಸಿದ್ದಾರೆ. ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯ ಇಂಡೆಂಟ್ ನೀಡಿ 5ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ತಕ್ಷಣ ಪ್ರಾರಂಭಿಸಲು ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಕಿಚ್ಚು: ಸಿಡಿದೆದ್ದ ಅನ್ನದಾತರು, ರಾಜ್ಯಾದ್ಯಂತ ಪ್ರತಿಭಟನೆಯ ಸುಳಿವು

ಬೆಳಗಾವಿ ಅಧಿವೆಶನದ ವೇಳೆ ಭಾರಿ ಪ್ರತಿಭಟನೆಯ ಎಚ್ಚರಿಕೆ

ಮೆಕ್ಕೆಜೋಳ ಖರೀದಿ ಕೇಂದ್ರಗಳನೋ ಓಪನ್ ಆಗುತ್ತಿದೆ. ಆದರೆ, ಒಬ್ಬ ರೈತನಿಂದ 5 ಕ್ವಿಂಟಲ್ ಮಾತ್ರ ಖರೀದಿಗೆ ಸರ್ಕಾರ ಆದೇಶಿದೆ. ಇದು ರೈತರನ್ನು ಕೆರಳಿಸಿದ್ದು, ಆದೇಶ ಹಿಂಪಡೆಯದಿದ್ದರೆ ಬೆಳಗಾವಿ ಅಧಿವೆಶನದ ವೇಳೆ ಭಾರಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9, ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us