ಹಾನಗಲ್​​​ನಲ್ಲಿ ರಾತ್ರಿ ಹೈಡ್ರಾಮಾ: ಅತ್ಯಾಚಾರ ಸಂತ್ರಸ್ತೆಯ ಭೇಟಿಯಾಗುತ್ತಾರಾ ಸಿಎಂ ಸಿದ್ದರಾಮಯ್ಯ?

ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಆಗಮಿಸ್ತಿದ್ದಾರೆ. ಆದ್ರೆ, ಬೇರೆ ಕಾರ್ಯಕ್ರಮದ ನಿಮಿತ್ತ ಸಿಎಂ ಹಾವೇರಿಗೆ ಬರ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಬಾಯಿಗೆ ಬೀಗ ಹಾಕಲು ಸಿಎಂ ಸಂತ್ರಸ್ತೆಯನ್ನ ಭೇಟಿ ಮಾಡಿ, ಮಾನಸಿಕ ಸ್ಥೈರ್ಯ ತುಂಬುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಹಾನಗಲ್​​​ನಲ್ಲಿ ರಾತ್ರಿ ಹೈಡ್ರಾಮಾ: ಅತ್ಯಾಚಾರ ಸಂತ್ರಸ್ತೆಯ ಭೇಟಿಯಾಗುತ್ತಾರಾ ಸಿಎಂ ಸಿದ್ದರಾಮಯ್ಯ?
ಸಿಎಂ ಸಿದ್ದರಾಮಯ್ಯ
Edited By:

Updated on: Jan 15, 2024 | 7:28 AM

ಬೆಂಗಳೂರು, ಜನವರಿ 15: ಹಾವೇರಿಯ ಹಾನಗಲ್ ಗ್ಯಾಂಗ್​​ರೇಪ್ ಪ್ರಕರಣ (Hanagal Gan Rape) ರಾಜ್ಯವನ್ನ ಬೆಚ್ಚಿಬೀಳಿಸಿದೆ. ಇದೀಗ ಸರ್ಕಾರವೇ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದೆ ಎಂದು ವಿರೋಧ ಪಕ್ಷದ (Oppsition Leaders) ನಾಯಕರು ಆರೋಪ ಮಾಡುತ್ತಿದ್ದಾರೆ. ಈ ಆರೋಪದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಸಂತ್ರಸ್ತೆಯನ್ನು ಸಿಎಂ ಭೇಟಿ ಮಾಡುತ್ತಾರಾ ಎಂಬ ಕುತೂಹಲ ಮೂಡಿದೆ.

ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದಿದ್ದ ಗ್ಯಾಂಗ್‌ರೇಪ್‌ ಕೇಸ್‌ ಸಂಪೂರ್ಣ ರಾಜಕೀಯಕ್ಕೆ ತಿರುಗಿದೆ. ಘಟನೆ ಖಂಡಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಮಹಿಳಾ ಘಟಕ ಭಾನುವಾರ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಲು ಪ್ಲ್ಯಾನ್‌ ಮಾಡಿಕೊಂಡಿತ್ತು. ಆದ್ರೆ, ಶನಿವಾರ ರಾತ್ರಿಯೇ ಬ್ಯಾಡಗಿ ಕಾಂಗ್ರೆಸ್‌ ಶಾಸಕ ಬಸವರಾಜ ಶಿವಣ್ಣನವರ್‌ ನೇತೃತ್ವದಲ್ಲಿ ಸಾಂತ್ವನ ಕೇಂದ್ರಕ್ಕೆ ಹೋಗಿದ್ದ ಕಾಂಗ್ರೆಸ್ ನಾಯಕರು, ಸಂತ್ರಸ್ತೆಯನ್ನು ಸ್ಥಳಾಂತರ ಮಾಡಲು ಮುಂದಾಗಿದ್ದರು. ಆಗ ಹೈಡ್ರಾಮಾ ನಡೆದಿದ್ದರಿಂದ ಭಾನುವಾರ ಬೆಳಗ್ಗೆ ಸಂತ್ರಸ್ತೆಯನ್ನ ಶಿರಸಿಗೆ ಸ್ಥಳಾಂತರ ಮಾಡಿದ್ದಾರೆ.

ಇನ್ನು ಬಿಜೆಪಿ ನಿಯೋಗ ಹಾವೇರಿಯ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿತ್ತು. ಅತ್ತ ಸಂತ್ರಸ್ತೆಯನ್ನ ಸ್ಥಳಾಂತರ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು.

ಹಾವೇರಿ ಗ್ಯಾಂಗ್‌ರೇಪ್‌ ಕೇಸ್‌ನಲ್ಲಿ ಮತ್ತಿಬ್ಬರು ಅರೆಸ್ಟ್

ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ 7 ಮಂದಿ ವಿರುದ್ಧ ಕೇಸ್‌ ದಾಖಲಾಗಿದೆ. ಭಾನುವಾರ ಮತ್ತಿಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ. ಆರೋಪಿಗಳಿಗೆ ಸೂಪಿ ಪೋರಂ ಸಂಘಟನೆ ಲಿಂಕ್ ಇದೆ ಎನ್ನಲಾಗ್ತಿದೆ. ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ, ಸಂತ್ರಸ್ತೆಯ ವಿಚಾರಣೆ ಮುಗಿದಿದೆ. ಹೀಗಾಗಿ ಸಾಂತ್ವನ ಕೇಂದ್ರದಿಂದ ಶಿಫ್ಟ್‌ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ ಬಗ್ಗೆ ಸಿದ್ದರಾಮಯ್ಯ ಯಾಕೆ ಮೌನ: ಬಸವರಾಜ ಬೊಮ್ಮಾಯಿ ಪ್ರಶ್ನೆ

ಈ ಎಲ್ಲ ಆರೋಪದ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಆಗಮಿಸ್ತಿದ್ದಾರೆ. ಆದ್ರೆ, ಬೇರೆ ಕಾರ್ಯಕ್ರಮದ ನಿಮಿತ್ತ ಸಿಎಂ ಹಾವೇರಿಗೆ ಬರ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಬಾಯಿಗೆ ಬೀಗ ಹಾಕಲು ಸಿಎಂ ಸಂತ್ರಸ್ತೆಯನ್ನ ಭೇಟಿ ಮಾಡಿ, ಮಾನಸಿಕ ಸ್ಥೈರ್ಯ ತುಂಬುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಅಣ್ಣಪ್ಪ ಬಾರ್ಕಿ, ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Web contact

TV9 Kannada

Read More
Follow Us