
ಶಿವಮೊಗ್ಗ: ಕೈಹಿಡಿದ ಪತಿರಾಯ ತನ್ನ ಪತ್ನಿಯನ್ನು ಚೆನ್ನಾಗಿ ಓದಿಸಿ, ತಹಶೀಲ್ದಾರ್ ಅಧಿಕಾರಿಯನ್ನಾಗಿ ಮಾಡಿಸಿದ್ದರು. ಆದರೆ ಅದು ಕೊರೊನಾ ಮಾರಿಗೆ ಹೇಗೆ ಗೊತ್ತಾಗಬೇಕು… ಯಾವುದೋ ಮಾಯದಲ್ಲಿ ಬಂದು ಪತಿರಾಯನನ್ನು ಬಲಿ ತೆಗೆದುಕೊಂಡಿದೆ. ಸುಂದರ ಸಂಸಾರದಕ್ಕೆ ಕೊಳ್ಳಿಯಿಟ್ಟಿದೆ ದೆವ್ವ ಕೊರೊನಾ! ಕಳೆದ ಒಂದು ವಾರದಿಂದ ಕೊರೊನಾದಿಂದಾಗಿ ಪತಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಬೆಂಗಳೂರಿನಲ್ಲಿ ತಹಸೀಲ್ದಾರ್ ಆಗಿ ಆರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.
ಆತ ತಾನಂತೂ ಓದಿಲ್ಲ. ತನ್ನ ಹೆಂಡಿಯಾದರೂ ಓದಿ ಅಧಿಕಾರಿಯಾಗಲಿ ಎಂದು ಕನಸು ಕಂಡಿದ್ದ. ಆತನ ಆಸೆಯಂತೆ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿ ಮಾಡಿದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ತಾನು ಕಂಡಿದ್ದ ಕನಸು ನನಸಾದ ಖುಷಿಯಲ್ಲಿ ಬದುಕಿನ ಪಯಣ ನಡೆಸಬೇಕಿದ್ದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ.
ಹೌದು ಶಿವಮೊಗ್ಗದಲ್ಲಿ ಇಂತಹ ಒಂದು ಮನಕಲಕುವ ಘಟನೆ ನಡೆದಿದೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ನಿವಾಸಿ ಸೀನಾ ಎಂಬುವವರು ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿ. ಮೃತ ಸೀನಾ ತನ್ನ ಅಕ್ಕನ ಮಗಳಾದ ಅಶ್ವಿನಿಯನ್ನೇ ವಿವಾಹವಾಗಿದ್ದರು. ವಿವಾಹವಾದರೂ ಅಶ್ವಿನಿಗೆ ಓದಿನ ತುಡಿತ ಕಡಿಮೆ ಆಗಿರಲಿಲ್ಲ. ಹಾಗಾಗಿಯೇ ಸೀನಾ, ಒಳ್ಳೆಯ ತರಬೇತಿ ಕೇಂದ್ರವೊಂದರಲ್ಲಿ ಪತ್ನಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು.
ಸೀನಾ ಆಸೆಯಂತೆ ಪತ್ನಿ ಅಶ್ವಿನಿ ಕಳೆದ ವರ್ಷ ಕೆಎಎಸ್ ಪಾಸ್ ಮಾಡಿದ್ದರು. ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತನ್ನ ಆಸೆಯನ್ನು ಈಡೇರಿಸಿದ ಪತ್ನಿಯ ಜೊತೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದರು. ಆದರೆ ಕೊರೋನಾ ಬರಸಿಡಿಲಿನಂತೆ ಅಪ್ಪಳಿಸಿ ಆತನನ್ನೇ ಬಲಿ ತೆಗೆದುಕೊಂಡಿದೆ.
(husband of tahsildar died due to coronavirus in shivamogga)
Published On - 5:24 pm, Thu, 27 May 21