AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೈಂ ರೌಂಡಪ್ : ಬೈಕ್ ಸವಾರರಿಬ್ಬರ ದುರ್ಮರಣ, ಟ್ರಾಕ್ಟರ್ ಮಗುಚಿ ವ್ಯಕ್ತಿ ಸಾವು, ಫೈನಾನ್ಸ್ ಕಿರುಕುಳಕ್ಕೆ ರೈತ ಬಲಿ

ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ.

ಕ್ರೈಂ ರೌಂಡಪ್ : ಬೈಕ್ ಸವಾರರಿಬ್ಬರ ದುರ್ಮರಣ, ಟ್ರಾಕ್ಟರ್ ಮಗುಚಿ ವ್ಯಕ್ತಿ ಸಾವು, ಫೈನಾನ್ಸ್ ಕಿರುಕುಳಕ್ಕೆ ರೈತ ಬಲಿ
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on:Oct 18, 2022 | 10:13 PM

Share

ಕಲಬುರಗಿ: ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ಇದೇ ತಾಲೂಕಿನ ಹರನೂರು ಗ್ರಾಮದ ಬಸವಲಿಂಗಯ್ಯ(33), ಮಹಾಂತಯ್ಯ(45) ಮೃತ ದುರ್ದೈವಿಗಳು. ಸರ್ಕಾರಿ ಬಸ್​ ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿತ್ತು. ಇದೇ ವೇಳೆ ಬೈಕ್ ಸವಾರರು ಜೇವರ್ಗಿಯಿಂದ ಹರನೂರು ಗ್ರಾಮಕ್ಕೆ ಹೊರಟಿದ್ದರು. ಮಾರ್ಗ ಮಧ್ಯ ಬೈಕ್​ಗೆ ಬಸ್​​ ಡಿಕ್ಕಿ ಹೊಡೆದಿದೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಯಲಹಂಕ ಫ್ಲೈ ಓವರ್ ಮೇಲೆ ಅಪಘಾತ: ಯುವತಿ ಸಾವು

ಬೆಂಗಳೂರು: ಯಲಹಂಕ ಫ್ಲೈ ಓವರ್​ ಮೇಲೆ ವೇಗವಾಗಿ ಹೋಗುತ್ತಿದ್ದ ಡ್ಯೂಕ್ ಬೈಕ್​​ವೊಂದು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್​ ಸವಾರಿ ಮಾಡುತ್ತಿದ್ದ ಯುವತಿ ತಲೆಗೆ ಗಂಭೀರ ಗಾಯವಾಗಿದ್ದು, ಯುವಕನ ಕೈ ಮುರಿದಿದೆ. ಕೂಡಲೆ ಅವರನ್ನು ಯಲಹಂಕ ಟ್ರಾಫಿಕ್​ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ 18 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಟ್ರಾಕ್ಟರ್ ಮಗುಚಿ ರೈತ ಸಾವು 

ಚಾಮರಾಜನಗರ: ಟ್ರಾಕ್ಟರ್ ಮಗುಚಿ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ಶಿವಕುಮಾರ್(32) ಮೃತ ವ್ಯಕ್ತಿ. ಶಿವಕುಮಾರ್ ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್ ಮಗುಚಿ ಬಿದ್ದಿದೆ. ಇದರಿಂದ ಶಿವಕುಮಾರ್  ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೈತ ಆತ್ಮಹತ್ಯೆ: ಖಾಸಗಿ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕು ನೇನೆಕಟ್ಟೆ ಗ್ರಾಮದಲ್ಲಿ  ನಡೆದಿದೆ. ಕೃಷ್ಣಯ್ಯ (65) ಆತ್ಮಹತ್ಯೆಗೆ ಶರಣಾದ ರೈತ. ಕೃಷ್ಣಯ್ಯ ಖಾಸಗಿ ಫೈನಾನ್ಸ್ ‌ನಿಂದ 7 ಲಕ್ಷ ರೂ ಟ್ರಾಕ್ಟರ್ ಸಾಲ ಪಡೆದಿದ್ದನು.

ರೈತ ಇಎಂಐ ಕಟ್ಟದ ಕಾರಣ ಕಂಪನಿ ಆರು ತಿಂಗಳ ಹಿಂದೆ ಟ್ರಾಕ್ಟರ್ ಸೀಜ್ ಮಾಡಿತ್ತು. ಇದೀಗ ಚೆಕ್ ಬೌನ್ಸ್ ಪ್ರಕರಣದ ಅವಮಾನ ತಾಳಲಾರದೆ ಕೃಷ್ಣಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಬಸ್ ಅಪಘಾತ; 6 ಜನ ಸಾವು

ಗುಜರಾತ್​ನ ವಡೋದರದ ಕಪುರೈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಮಂಗಳವಾರ) ಬಸ್ ಮತ್ತು ಟ್ರಕ್ ಡಿಕ್ಕಿಯಾದ ಪರಿಣಾಮ 6 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಐಷಾರಾಮಿ ಬಸ್​ವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಅಪಘಾತದಿಂದ ಬಸ್​ ಸಂಪೂರ್ಣ ಜಖಂ ಆಗಿದ್ದು, ಬಸ್​ನಲ್ಲಿ ಪ್ರಯಾಣಿಸುತ್ತಿದ್ದ 6 ಜನ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ವಡೋದರಾದ ಸಯಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಸ್ ರಾಜಸ್ಥಾನದ ಭಿಲ್ವಾರಾದಿಂದ ಮುಂಬೈಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಬಸ್​ ಚಾಲಕನ ವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದಾಗಿ ಅಪಘಾತಕ್ಕೀಡಾಗಿದೆ.

ಗೋಧಿ ತುಂಬಿದ್ದ ಟ್ರಕ್ ಅನ್ನು ಓವರ್​ಟೇಕ್ ಮಾಡಲು ಬಸ್ ಚಾಲಕ ಪ್ರಯತ್ನಿಸುತ್ತಿದ್ದಾಗ ಈ ಬಸ್ ಅಪಘಾತ ನಡೆದಿದೆ ಎನ್ನಲಾಗಿದೆ. ಮೃತಪಟ್ಟವರು ಯಾರು? ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Tue, 18 October 22