ಕಲಬುರಗಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಕಠಿಣ ವ್ರತ; ದೇಹದ ಮೇಲೆಯೇ ಘಟ ಸ್ಥಾಪನೆ, ಆಹಾರ, ನೀರು ಬಿಟ್ಟು ಮೌನ ವ್ರತ ಮಾಡುತ್ತಿರುವ ವ್ಯಕ್ತಿ

| Updated By: ಆಯೇಷಾ ಬಾನು

Updated on: Oct 13, 2024 | 9:21 AM

ನಾಡಿನೆಲ್ಲೆಡೆ ನವರಾತ್ರಿ ಸಡಗರ-ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಸೂಫಿ ಸಂತರ ನಾಡು, ಪವಾಡ ಪುರುಷರ ಬೀಡು ಕಲಬುರಗಿಯಲ್ಲಿ ತುಳಜಾಪುರದ ಅಂಬಾ ಭವಾನಿ ದೇವಿಯ ಹೆಸರಿನಲ್ಲಿ ಅತ್ಯಂತ ಭಯ ಭಕ್ತಿ ಕಠಿಣ ವ್ರತಗಳ ಮೂಲಕ ನವರಾತ್ರಿ ಹಬ್ಬ ಆಚರಿಸಲಾಗಿದೆ. ಅಂಬಾ ಭವಾನಿ ದೇವಿಯ ಪರಮಭಕ್ತನೋರ್ವ ಲೋಕ ಕಲ್ಯಾಣಕ್ಕಾಗಿ ದೇಹದ ಮೇಲೆಯೇ ಘಟ ಸ್ಥಾಪನೆ ಮಾಡಿಕೊಂಡು ನೀರು, ಆಹಾರ ಇಲ್ಲದೆ ಮೌನವಾಗಿ 9 ದಿನಗಳ ಕಾಲ ಕಠಿಣಾತಿ ಕಠಿಣ ವ್ರತ ಮಾಡುತ್ತಿದ್ದು, ದರ್ಶನಕ್ಕಾಗಿ ಜನರ ದಂಡು ಹರಿದು ಬರ್ತಿದೆ.

ಕಲಬುರಗಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಕಠಿಣ ವ್ರತ; ದೇಹದ ಮೇಲೆಯೇ ಘಟ ಸ್ಥಾಪನೆ, ಆಹಾರ, ನೀರು ಬಿಟ್ಟು ಮೌನ ವ್ರತ ಮಾಡುತ್ತಿರುವ ವ್ಯಕ್ತಿ
Follow us on

ಕಲಬುರಗಿ, ಅ.13: ವ್ಯಕ್ತಿಯೋರ್ವರು ಲೋಕ ಕಲ್ಯಾಣಕ್ಕಾಗಿ ದೇಹದ ಮೇಲೆಯೇ ಘಟ ಸ್ಥಾಪನೆ ಮಾಡಿರೊಂಡಿದ್ದು ಅವರನ್ನು ಕಂಡ ಜನ ಭಕ್ತಿಯಿಂದ ಕೈ ಮುಗಿದು ಆಶೀರ್ವಾದ ಪಡೆಯುತ್ತಿದ್ದಾರೆ. ಕಠಿಣ ವ್ರತ ಆಚರಣೆ ಕಂಡು ಜನ ಅಚ್ಚರಿಗೊಂಡಿದ್ದಾರೆ. ಕಲಬುರಗಿ (Kalaburagi) ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಲೋಕ ಕಲ್ಯಾಣಕ್ಕಾಗಿ ನವರಾತ್ರಿ ಹಬ್ಬದ ಪ್ರಯುಕ್ತ ಈ ಕಠಿಣ ವ್ರತ ಮಾಡಲಾಗ್ತಿದೆ. ಅಂದಹಾಗೆ ಮಲಗಿದ್ದಲ್ಲಿಯೇ ದೇಹದ ಮೇಲೆ ಘಟ ಸ್ಥಾಪನೆ ಮಾಡಿಕೊಂಡಿರುವ ಇವರ ಹೆಸರು ಅಂಬಣ್ಷಾ ಪೂಜಾರಿ. ಕಮಲಾಪುರ ನಿವಾಸಿ ಅಂಬಣ್ಣಾ ಪೂಜಾರಿ, ಲೋಕ ಕಲ್ಯಾಣಾರ್ಥವಾಗಿ ತಮ್ಮ ಮನೆಯ ದೇವರ ಮನೆಯಲ್ಲಿ ಮಲಗಿದಲ್ಲಿಯೇ ದೇಹದ ಮೇಲೆ ಘಟ ಸ್ಥಾಪನೆ ಮಾಡಿಕೊಂಡಿದ್ದಾರೆ.

ನವರಾತ್ರಿಯ 9 ದಿನಗಳ ಕಾಲ ಎದ್ದೇಳದೆ, ಆಹಾರ, ನೀರು ಸೇವಿಸದೆ ಮೌನವಾಗಿ ಮಲಗಿದ್ದಲ್ಲಿಯೇ ಈ ಕಠಿಣ ವ್ರತ ಮಾಡುತ್ತಿದ್ದಾರೆ. ಅಕ್ಟೋಬರ್ 3 ರಂದು ದೇಹದ ಮೇಲೆ ಘಟ ಸ್ಥಾಪನೆ ಮಾಡಿಕೊಂಡಿದ್ದು ಆರು ದಿನಗಳು ಆಹಾರ, ನೀರು, ಶೌಚ ಏನೂ ಇಲ್ಲದೆ ಗತಿಸಿವೆ. ಅಂಬಣ್ಣಾ ಪೂಜಾರಿಯ ಈ ಕಠಿಣಾತಿ ಕಠಿಣ ವ್ರತ ಜನರನ್ನ ಅಚ್ಚರಿಗೊಳಿಸಿದ್ದು, ಇದೂ ತುಳಜಾಪುರ ಅಂಬಾ ಭವಾನಿ ದೇವಿಯ ಪವಾಡ ಎನ್ನುತ್ತಿದ್ದಾರೆ.

34 ವರ್ಷದ ಅಂಬಣ್ಣಾ ಪೂಜಾರಿ, ಮಹಾರಾಷ್ಟ್ರದ ತುಳಜಾಪುರದ ಅಂಬಾ ಭವಾನಿ ದೇವಿಯ ಪರಮ ಭಕ್ತರು. ಚಿಕ್ಕಂದಿನಿಂದಲೇ ದೇವಿಯ ಆರಾಧಕರು. ಪ್ರತಿವರ್ಷ ನವರಾತ್ರಿ ಹಬ್ಬದ ವೇಳೆ ಮನೆಯ ದೇವರ ಜಗುಲಿ ಮೇಲೆ ಘಟ ಸ್ಥಾಪನೆ ಮಾಡಿ ಒಂಬತ್ತು ದಿನಗಳ ಕಾಲ ಉಪವಾಸ ವ್ರತ ಮಾಡ್ತಿದ್ದರು. ಆದ್ರೆ ಈ ವರ್ಷ ಪ್ರಥಮ ಬಾರಿಗೆ ಲೋಕ ಕಲ್ಯಾಣಕ್ಕಾಗಿ ದೇವಿಯ ದರ್ಶನ ಪಡೆದುಕೊಂಡು ಬಂದು ಅಕ್ಟೋಬರ್ 3 ರಂದು ಅಂಬಣ್ಣಾ ಪೂಜಾರಿ ತಮ್ಮ ದೇಹದ ಮೇಲೆಯೇ ಘಟ ಸ್ಥಾಪನೆ ಮಾಡಿಕೊಂಡಿದ್ದಾರೆ. 9 ದಿನಗಳು ಮಲಗಿದ್ದಲ್ಲಿಯೇ ಮಲಗಿಕೊಂಡು, ಆಹಾರ, ನೀರು ಸೇವಿಸದೆ, ಶೌಚ ಇಲ್ಲದೆ ಇಂತಹ ಕಠಿಣ ವ್ರತ ಮಾಡ್ತಿದ್ದಾರೆ.

ಇದನ್ನೂ ಓದಿ: “ಇಟ್ಟ ರಾಮನ ಬಾಣ ಹುಸಿಯಿಲ್ಲ” ಬೀರೂರು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ

ಸನ್ಯಾಸಿ ಆಗಿರುವ ಅಂಬಣ್ಣಾ ಪೂಜಾರಿ ಅಂಬಾ ಭವಾನಿ ದೇವಿಯ ವರಪುತ್ರರಂತೆ. ದೇವಿಯ ಭಕ್ತರಾಗಿರುವ ಅಂಬಣ್ಣಾ ಪೂಜಾರಿ ಹೇಳಿದ್ದೇ ಆಗುತ್ತಂತೆ.‌ ಹೀಗಾಗಿ ಜನ ಕಷ್ಟ, ಕಾರ್ಪಣ್ಯಗಳ ಪರಿಹಾರ, ತಮ್ಮ ಏಳಿಗೆಗಾಗಿ ಅಂಬಣ್ಣಾ ಪೂಜಾರಿ ದರ್ಶನಕ್ಕೆ ಬರುತ್ತಾರೆ. ದಸರಾ ಹಬ್ಬದ ನವರಾತ್ರಿ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ದೇವಿ ಭಕ್ತ ಅಂಬಣ್ಣಾ ಪೂಜಾರಿಯ ಈ ಕಠಿಣ ವ್ರತ ಕಂಡು ದರ್ಶನ ಪಡೆಯಲು ಕಮಲಾಪುರ ತಾಲ್ಲೂಕು ಕಲಬುರಗಿ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯ ಜನ ತಂಡೋಪ ತಂಡವಾಗಿ ಬಂದು ದರ್ಶನ ಪಡೆಯುತ್ತಿದ್ದಾರೆ.

ಒಟ್ನಲ್ಲಿ ತುಳಜಾ ಭವಾನಿಯ ಪರಮಭಕ್ತ ಅಂಬಣ್ಣಾ ಪೂಜಾರಿ ಕೈಗೊಂಡಿರುವ ಈ ಕಠಿಣ ವ್ರತ ಅಚ್ಚರಿಗೊಳಿಸುತ್ತಿದೆ. ಯಾರಿಂದಲೂ ಇಷ್ಟೊಂದು ಕಠೋರ ವ್ರತ ಮಾಡಲು ಸಾಧ್ಯವಿಲ್ಲ, ಇದು ಸಾಕ್ಷಾತ್ ಅಂಬಾ ಭವಾನಿ ದೇವಿಯ ಶಕ್ತಿ, ಪವಾಡವೇ ಇದೆ ಎನ್ನುತ್ತಿದ್ದಾರೆ ಜನ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ