Summer Rains: ಬೇಸಿಗೆ ಮಳೆ-ವಿದ್ಯುತ್ ಪ್ರವಾಹದಿಂದ ಅಮ್ಮ ಮತ್ತು ಇಬ್ಬರು ಮಕ್ಕಳು ವಿಧಿವಶ

ಚಿಂಚೋಳಿ ಪೊಲೀಸರು ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕಳೆದುಕೊಂಡು, ಮನೆ ಮಾಲೀಕ ಅಂಬಣ್ಣಗೆ ಇದೀಗ ದಿಕ್ಕೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

Summer Rains: ಬೇಸಿಗೆ ಮಳೆ-ವಿದ್ಯುತ್ ಪ್ರವಾಹದಿಂದ ಅಮ್ಮ ಮತ್ತು ಇಬ್ಬರು ಮಕ್ಕಳು ವಿಧಿವಶ
ಬೇಸಿಗೆ ಮಳೆ-ವಿದ್ಯುತ್ ಪ್ರವಾಹದಿಂದ ಅಮ್ಮ ಮತ್ತು ಇಬ್ಬರು ಮಕ್ಕಳು ವಿಧಿವಶ
Edited By: ಸಾಧು ಶ್ರೀನಾಥ್​

Updated on: Mar 20, 2023 | 8:04 AM

ಆ ಕುಟುಂಬಕ್ಕೆ ಬಡತವಿತ್ತು. ಆದರೂ ಕುಟುಂಬದ (Family) ನಾಲ್ವರು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದ್ರೆ ಕಳೆದ ರಾತ್ರಿ ದಿಢೀರನೆ ಆರಂಭವಾದ ಬೇಸಿಗೆಯ ಮಳೆಯಿಂದಾಗಿ (Summer Rains) ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವನ್ನು ಮುಚ್ಚಿ, ಮೂತ್ರ ವಿಸರ್ಜನೆ ಮಾಡಿ ಬರಲು ಯುವಕನೋರ್ವ ಹೊರಗೆ ಬಂದಿದ್ದ. ಆದರೆ.. ಮನೆ ಮುಂದೆ ಇದ್ದ ಜವರಾಯ ಆತನನ್ನು ಬಲಿ ಪಡೆದಿದ್ದ. ಆತನನ್ನು ರಕ್ಷಿಸಲು ಬಂದಿದ್ದ ತಾಯಿ ಮತ್ತು ಇನ್ನೋರ್ವ ಸಹೋದರ ಕೂಡಾ ಅದೇ ಸ್ಥಳದಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ವಿದ್ಯುತ್ ಅವಘಡಕ್ಕೆ (Electrocution) ಮೂವರು ಬಲಿಯಾಗಿದ್ದಾರೆ. ಇದರಿಂದ ಕುಟುಂಬದವರ ಕಣ್ಣೀರು ಕಣ್ಣೀರು. ಮನೆಯ ಮಾಲೀಕನಿಗೆ ದಿಕ್ಕೇ ತೋಚದಂತಹ ಸ್ಥಿತಿ. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ಜಿಲ್ಲೆಯ ಚಿಂಚೋಳಿ (Chincholi) ಪಟ್ಟಣದಲ್ಲಿ. ಇನ್ನು ಇವರ ಆಕ್ರಂದನಕ್ಕೆ ಕಾರಣವಾಗಿದ್ದು ತಾಯಿ ಮತ್ತು ಮಕ್ಕಳಿಬ್ಬರ ದಾರುಣ ಸಾವು.

ಹೌದು ರಾಜ್ಯದ ಅನೇಕ ಕಡೆ ಅಕಾಲಿಕ ಮಳೆ ಆರಂಭವಾಗಿದೆ. ಅದೇ ರೀತಿ, ನಿನ್ನೆ ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಕೂಡಾ ಭಾರಿ ಗಾಳಿ ಮತ್ತು ಮಳೆ ಆರಂಭವಾಗಿತ್ತು. ಮಧ್ಯ ರಾತ್ರಿ ಎರಡು ಗಂಟೆ ಸಮಯದಲ್ಲಿ, ಚಿಂಚೋಳಿ ಪಟ್ಟಣದ ದನಗರಲ್ಲಿ ಯಲ್ಲಿ ಭಾರಿ ಮಳೆ ಆರಂಭವಾಗಿದ್ದರಿಂದ, ಪತ್ತಗೊಂಡ ಕುಟುಂಬದ 22 ವರ್ಷದ ಮಹೇಶ್, ಮೂತ್ರ ವಿಸರ್ಜನೆ ಮಾಡಿ, ನಂತರ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿನ ಮೇಲೆ ಮಳೆ ನೀರು ಬೀಳದಂತೆ ಯಾವುದಾದರೂ ಹೊದಿಕೆ ಹಾಕಬೇಕು ಅಂತ ರಾತ್ರಿ ಎರಡು ಗಂಟೆ ಸಮಯದಲ್ಲಿ ಮನೆಯಿಂದ ಹೊರಬಂದಿದ್ದ.

ಹಾಗೆ ಹೊರಬಂದಿದ್ದ ಮಹೇಶ್ ಮನೆ ಮುಂದೆ ಬಿದ್ದಿದ್ದ ಸರ್ವಿಸ್ ವೈಯರ್ ಅನ್ನು ಗಮನಿಸದೇ ಮನೆ ಮುಂದೆ ಬಂದಿದ್ದ. ಆದ್ರೆ ಅವರ ಮನೆಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಸರ್ವಿಸ್ ವೈಯರ್ ತುಂಡಾಗಿ ಬಿದ್ದಿತ್ತು. ಅದು ನೀರಲ್ಲಿ ಬಿದ್ದಿದ್ದರಿಂದ ಸುತ್ತಮುತ್ತ ಕೂಡಾ ವಿದ್ಯುತ್ ಪ್ರವಹಿಸಿತ್ತು. ಅದನ್ನು ಗಮನಿಸದೇ ಮಹೇಶ್ ವಿದ್ಯುತ್ ವೈಯರ್ ಮೇಲೆ ಕಾಲಿಟ್ಟಿದ್ದರಿಂದ ಶಾಕ್ ಹೊಡೆದಿದೆ. ಆತನ ಕಿರುಚಾಟದ ಸದ್ದು ಕೇಳಿ ತಾಯಿ ಝರಣಮ್ಮಾ ನಿದ್ದೆಯಲ್ಲೇ ಹೊರಗೆ ಓಡಿ ಬಂದಿದ್ದಾರೆ.

ಅಗ ಆಕೆಗೂ ಕೂಡಾ ಶಾಕ್ ಹೊಡಿದಿದೆ. ಅದಾದಮೇಲೆ ಆ ಇಬ್ಬರನ್ನೂ ರಕ್ಷಿಸಲು, ಝರಣಮ್ಮಳ ಇನ್ನೋರ್ವ ಪುತ್ರ ಸುರೇಶ್ ಸಹ ಹೊರಗೆ ಬಂದಿದ್ದಾನೆ. ಆತನಿಗೂ ಕೂಡಾ ಶಾಕ್ ಹೊಡೆದಿದೆ. ಈ ಮೂವರ ಚೀರಾಟ ಕೇಳಿ, ಮನೆಯ ಮಾಲೀಕ ಅಂಬಣ್ಣ ಸಹ ಹೊರಗೆ ಓಡಿ ಬಂದಿದ್ದಾರೆ. ಆತನನ್ನು ಕೂಡಾ ಕೆರೆಂಟ್ ಶಾಕ್ ಹೊಡೆಯದೆ ಬಿಟ್ಟಿಲ್ಲ. ಒಟ್ಟಾರೆ ಘಟನೆಯಲ್ಲಿ 45 ವರ್ಷದ ಝರಣಮ್ಮಾ, ಆಕೆಯ 22 ವರ್ಷದ ಪುತ್ರ ಮಹೇಶ್, 20 ವರ್ಷದ ಕಿರಿಯ ಪುತ್ರ ಸುರೇಶ್ ಸ್ಥಳದಲ್ಲಿಯೇ ಬಾರದ ಲೋಕಕ್ಕೆ ಹೋದ್ರೆ, ಅಂಬಣ್ಣ ಬದುಕುಳಿದಿದ್ದಾರೆ.

ಇದನ್ನೂ ಓದಿ:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ಅಪಘಾತ; ಟೋಲ್ ತಪ್ಪಿಸಲು ಹೋಗಿ ಬೈಕ್ ಸವಾರನ ಬಲಿ ಪಡೆದ ಸರ್ಕಾರಿ ಬಸ್​

ಇನ್ನು ಅಂಬಣ್ಣಾ ಮತ್ತು ಅವರ ಕುಟುಂಬದವರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದ್ರೆ ಕಳೆದ ರಾತ್ರಿ ನಡೆದ ವಿದ್ಯುತ್ ಅವಘಡದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ಚಿಂಚೋಳಿಯಲ್ಲಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಸಾರ್ವಜನಿಕರು ಜೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಅಂತ ಆಗ್ರಹಿಸಿದ್ದಾರೆ.

ಇನ್ನು ಚಿಂಚೋಳಿ ಪಟ್ಟಣದಲ್ಲಿ, ವಿದ್ಯುತ್ ವೈಯರ್ ಗಳು ಅನೇಕ ಕಡೆ ಜೋತು ಬಿದ್ದಿದ್ದು, ಆಗಾಗ ತುಂಡಾಗಿ ಬೀಳ್ತಿವೆ. ಇದರಿಂದ ಅನೇಕರು ಶಾಕ್ ನಿಂದ ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇನ್ನು ಮೃತ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಪರಿಹಾರ ಕೊಡಿಸೋದಾಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

ಪ್ರಸ್ತುತ, ಈ ಮೂವರ ಸಾವಿನ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕಳೆದುಕೊಂಡು, ಮನೆ ಮಾಲೀಕ ಅಂಬಣ್ಣಗೆ ಇದೀಗ ದಿಕ್ಕೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ವರದಿ: ಸಂಜಯ್, ಟಿವಿ 9, ಕಲಬುರಗಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Web contact

TV9 Kannada

Read More
Follow Us