ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ‘ಯುವನಿಧಿ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್

| Updated By: ರಮೇಶ್ ಬಿ. ಜವಳಗೇರಾ

Updated on: Dec 12, 2023 | 6:03 PM

Yuva Nidhi Scheme: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದು, ಇದೀಗ ಬಾಕಿ ಉಳಿದಿದ್ದ ಮತ್ತೊಂದು ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೆಗೆ ಮುಹೂರ್ತ ಫಿಕ್ಸ್ ಆಗಿದೆ. ಯಾವಾಗಿನಿಂದ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ? ಅಂದಹಾಗೆ ಈ ಯೋಜನೆಯ ಸದುಪಯೋಗ ಪಡೆಯಲು ಯಾರು ಅರ್ಹರು ಎಂಬುದನ್ನು ತಿಳಿದುಕೊಳ್ಳಿ

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್
ಯುವ ನಿಧಿ ಯೋಜನೆ
Follow us on

ಬೆಳಗಾವಿ, (ಡಿಸೆಂಬರ್ 12): ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಗ್ಯಾರಂಟಿ ‘ಯುವನಿಧಿ’ ಯೋಜನೆ (Yuva Nidhi Scheme) ಜಾರಿಗೆಗೆ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಇದೇ ಡಿಸೆಂಬರ್ 21ರಿಂದ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಮುಂದಿನ ವರ್ಷ ಅಂದರೆ 2024ರ ಜನವರಿಯಲ್ಲಿ ಯುವನಿಧಿ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ. ಈ ಬಗ್ಗೆ ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಶರಣಪ್ರಕಾಶ್ ಪಾಟೀಲ್,  ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಇದೇ ಡಿಸೆಂಬರ್ 21 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು ಜನವರಿಯಲ್ಲಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ನಾಡಿನ ಯುವಜನತೆಗೆ ಬೆನ್ನೆಲುಬಾಗಲಿರುವ ಈ ಯೋಜನೆಯಿಂದ ಸುಮಾರು 5 ಲಕ್ಷ ಪದವೀಧರರ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದು ಎಕ್ಸ್​(ಟ್ವಿಟ್ಟರ್​​) ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Yuva Nidhi Scheme: ಯುವನಿಧಿ ಯೋಜನೆಗೆ ಮಾನದಂಡ ಪ್ರಕಟಿಸಿದ ರಾಜ್ಯ ಸರ್ಕಾರ: ಯಾರೆಲ್ಲ ಅರ್ಹರು ಗೊತ್ತಾ?

ಸಚಿವರು ಬರೆದುಕೊಂಡಿರುವುದು ಹೀಗಿದೆ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ಈಗ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆಗಳನ್ನು ಈಗಾಗಲೇ ಜಾರಿಗೆ ಬಂದಿವೆ. ಇದೀಗ ಬಾಕಿ ಉಳಿದಿದ್ದ ಯುವ ನಿಧಿ ಯೋಜನೆಗೆ ಜನವರಿಯಲ್ಲಿ ಚಾಲನೆ ಸಿಗಲಿದ್ದು, ಇದೇ ಡಿಸೆಂಬರ್(2023) 21ರಿಂದ ಅರ್ಹ ಅಭ್ಯರ್ಥಿಗಳು ನೋಂದಾಣಿ ಪ್ರಕ್ರಿಯೆ ಆರಂಭವಾಗಲಿದೆ.

ಯಾರಿಗೆ ಎಷ್ಟು ಹಣ?

ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ನಿಗದಿ ಮಾಡಿದ್ದರೆ, ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಸಿಗಲಿದೆ. ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನಿರುದ್ಯೋಗಿ ಯುವಕರಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ.

ಈ ಯೋಜನೆಗೆ ಯಾರೆಲ್ಲಾ ಅರ್ಹರು?

  •  ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  •  ಅರ್ಜಿದಾರರು ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು.
  •  ಅರ್ಜಿದಾರರು 2022-2023 ರಲ್ಲಿ ಅವನ / ಅವಳ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.
  •  ಅರ್ಜಿದಾರರು ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.

ಯೋಜನೆಗೆ ಬೇಕಾದ ದಾಖಲೆಗಳು

  • ಕರ್ನಾಟಕದ ನಿವಾಸಿ ಎಂಬ ಪುರಾವೆ
  • ಆಧಾರ್ ಕಾರ್ಡ್
  • 10 ನೇ ತರಗತಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
  • 12 ನೇ (ದ್ವಿತೀಯ ಪಿಯುಸಿ) ಅಂಕಪಟ್ಟಿ ಮತ್ತು ಪ್ರಮಾಣಪತ್ರ.
  • ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ.
  • ಡಿಪ್ಲೊಮಾ ಪ್ರಮಾಣಪತ್ರ. (ಡಿಪ್ಲೊಮಾ ಹೊಂದಿರುವವರಿಗೆ). *
  • ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ) *
  • ಆದಾಯ ಪ್ರಮಾಣಪತ್ರ.
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆ ವಿವರಗಳು.
  • ಸೆಲ್ಫ್ ಡಿಕ್ಲೆರೇಷನ್ ಪ್ರತಿ

Published On - 5:39 pm, Tue, 12 December 23