ಹವಾಮಾನ ವರದಿ: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆಯ ಎಚ್ಚರಿಕೆ;

| Updated By: Digi Tech Desk

Updated on: Oct 21, 2024 | 4:21 PM

Bangalore Weather: ಕಳೆದೊಂದು ವಾರದಿಂದ ಕರ್ನಾಟಕದ ಹಲವೆಡೆ ಸುರಿಯುತ್ತಿರುವ ಮಳೆ ಭಾರೀ ಅವಾಂತರನ್ನೇ ಸೃಷ್ಟಿಸಿದೆ. ರೈತರು ಬೆಳೆದ ಬೆಳೆ ನೀರುಪಾಲಾಗಿದ್ದರೆ, ಮನೆಗಳು ಕುಸಿದು ಬಿದ್ದಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಜನರು ಮಳೆ ಸಾಕಪ್ಪ ಸಾಕು ಎನ್ನುತ್ತಿದ್ದಾರೆ. ಆದರೆ ಮಳೆರಾಯ ಇನ್ನೂ ಐದು ದಿನ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ವರದಿ: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆಯ ಎಚ್ಚರಿಕೆ;
ಕರ್ನಾಟಕದಲ್ಲಿ ಇನ್ನೂ 5 ದಿನ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
Follow us on

ಬೆಂಗಳೂರು, ಅಕ್ಟೋಬರ್​ 21: ಆಕಾಶಕ್ಕೆ ತೂತು ಬಿದ್ದಂತೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನಿರಂತರ ಮಳೆ (Rain) ಸುರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಇನ್ನು ಸಿಲಿಕಾನ್​ ಸಿಟಿಯಲ್ಲಿ ಮಾತ್ರ ಸಿಕ್ಕಾಪಟ್ಟೆ ಅವಾಂತರಗಳು ಸೃಷ್ಟಿಯಾಗಿವೆ. ಇದೆಲ್ಲದರ ಮಧ್ಯೆ ರಾಜ್ಯದಲ್ಲಿ ಇನ್ನೂ ಐದು ದಿನ ವರುಣದೇವ ಆರ್ಭಟಿಸುವ ಮುನ್ಸೂಚನೆ ನೀಡಿದ್ದಾನೆ.

ಅಕ್ಟೋಬರ್ 23ರವರೆಗೆ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ: ಸಿ.ಎಸ್.ಪಾಟೀಲ್

ಈ ಬಗ್ಗೆ ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್​ ಪ್ರತಿಕ್ರಿಯಿಸಿದ್ದು, ಕರ್ನಾಟಕದ ಹಲವೆಡೆ ಇನ್ನೂ 5 ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದಾರೆ. ಅಕ್ಟೋಬರ್ 23ರವರೆಗೆ ಬೆಂಗಳೂರು ನಗರದಲ್ಲೂ ಮಳೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bangalore Rains: ಬೆಂಗಳೂರಿನಲ್ಲಿ ರಾತ್ರಿ, ಮುಂಜಾನೆ ಅಬ್ಬರದ ಮಳೆ: ಟ್ರಾಫಿಕ್ ಜಾಮ್, ಜನಜೀವನ ಅಸ್ತವ್ಯಸ್ತ

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಿದೆ. ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 23ರವರೆಗೆ ವ್ಯಾಪಕ ಮಳೆ ಆಗಲಿದೆ. ಉತ್ತರ ಒಳನಾಡಿನ ಕೆಲವು ಕಡೆ ಕೂಡ ಮಳೆ ಆಗಿದೆ ಎಂದಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ

ಉತ್ತರ ಕನ್ನಡ 11 ಸೆ.ಮೀ., ಉಡುಪಿ 9 ಸೆ.ಮೀ, ಹಾವೇರಿ 10 ಸೆ.ಮೀ., ದಾವಣಗೆರೆ ಜಿಲ್ಲೆಯಲ್ಲಿ 8 ಸೆ.ಮೀ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಯಲ್ಲಿ ಮಳೆ‌ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್​ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ 17.7 ಮಿಲಿ ಮೀಟರ್ ಮಳೆ ಆಗಿದೆ. ಹೆಚ್​ಎಎಲ್​ ಏರ್​​ಪೋರ್ಟ್​ ವ್ಯಾಪ್ತಿಯಲ್ಲಿ 10.8 ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಮಿ.ಮೀ., ಬಾಗಲಗುಂಟೆ 5.4 ಮಿ.ಮೀ., ಶೆಟ್ಟಿಹಳ್ಳಿ 4.2 ಮಿ.ಮೀ., ನಂದಿನಿ ಲೇಔಟ್ 3.3 ಮಿ.ಮೀ., ಹೇರೋಹಳ್ಳಿ 2.9 ಮಿ.ಮೀ., ಕೆಂಗೇರಿ ವ್ಯಾಪ್ತಿಯಲ್ಲಿ 2.1 ಮಿ.ಮೀ. ಮಳೆಯಾಗಿದೆ ಆಗಿದೆ.

ಇದನ್ನೂ ಓದಿ: Bangalore Rains: ಭಾರಿ ಮಳೆ ಕಾರಣ ಬೆಂಗಳೂರು ನಗರದ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಊರನ್ನೇ ನುಂಗುವಂತೆ ನುಗ್ಗಿರುವ ಮಳೆ ನೀರು ಸಾವಿರಾರು ಜನರ ಸೂರನ್ನೇ ಕಸಿದುಕೊಂಡಿದೆ. ಮನೆಗಳಿಗೆ ಮಳೆ ನೀರು, ಚರಂಡಿ ನೀರು ನುಗ್ಗಿ ಸಂಪೂರ್ಣ ಬದುಕೇ ಅಸ್ತವ್ಯಸ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:58 pm, Mon, 21 October 24