ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ಬಸ್ ನಿಲ್ದಾಣ
ಸುಗಟೂರು ಗ್ರಾಮದಲ್ಲಿ 6.7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣವು ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಕಲ್ಲಿನ ಕುರ್ಚಿಗಳು, ಉದ್ಯಾನ, ಶುದ್ಧ ನೀರು, ಎಫ್.ಎಂ ರೇಡಿಯೋ, ಮೊಬೈಲ್ ಚಾರ್ಜಿಂಗ್, ಮತ್ತು ಶೀಘ್ರದಲ್ಲೇ ಸಿಸಿಟಿವಿ, ವೈಫೈ, ಟಿವಿ ಸೌಲಭ್ಯಗಳನ್ನು ಒಳಗೊಂಡಿದೆ. ಈ ಯೋಜನೆಯನ್ನು ಜಾನಪದ ಗಾಯಕ ಗೋ.ನಾ.ಸ್ವಾಮಿ ಅವರು ಕಾರ್ಯಗತಗೊಳಿಸಿದ್ದು, ಪಾಳುಬಿದ್ದಿದ್ದ ಹಳೆಯ ನಿಲ್ದಾಣಕ್ಕೆ ಹೊಸ ರೂಪ ನೀಡಿದೆ.
ಕೋಲಾರ, ಏಪ್ರಿಲ್ 26: ಕೋಲಾರ ತಾಲೂಕಿನ ಸುಗಟೂರು ಗ್ರಾಮದಲ್ಲೊಂದು ಹೈಟೆಕ್ ಹಾಗೂ ಡಿಫರೆಂಟ್ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಪ್ರಯಾಣಿಕರಿಗೆ ಬೇಕಾದ ಹಲವಾರು ಸೌಲಭ್ಯಗಳನ್ನು ಒಳಗೊಂಡ ಸುಂದರವಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಕೂರಲು ಕಲ್ಲಿನಿಂದ ಕೆತ್ತಲಾದ ಕುರ್ಜಿಗಳು, ಉದ್ಯಾನವನ, ಬಸ್ ನಿಲ್ದಾಣದೊಳಗೆ ಹಳ್ಳಿ ಸೊಬಗಿನ ಚಿತ್ತಾರ. ಬಸ್ ನಿಲ್ದಾಣದಲ್ಲಿ ಹಲವು ದಿನಪತ್ರಿಕೆಗಳು, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, ಸೆಕೆಗೆ ಫ್ಯಾನ್, ಮನೋರಂಜನೆಗೆ ಎಫ್.ಎಂ ರೇಡಿಯೊ, ಬೆಳಕಿನ ವ್ಯವಸ್ಥೆ, ಬಣ್ಣದ ಲೈಟ್ಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. ಸಿಸಿಟಿವಿ ಕ್ಯಾಮೆರಾ, ಉಚಿತ ವೈಫೈ, ಟಿವಿ, ಬಸ್ಸುಗಳ ವೇಳಾಪಟ್ಟಿ ಫಲಕ ಅಳವಡಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಮೊದಲು ಸಂಸದರ ಅನುದಾನದಡಿ ಈ ಬಸ್ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿತ್ತು, ಆದರೆ ಕಾಮಗಾರಿ ಅಪೂರ್ಣಗೊಂಡು ವರ್ಷದಿಂದ ಪಾಳುಬಿದ್ದಿತ್ತು. ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಜನರಿಂದ ಈ ವಿಚಾರ ಗೊತ್ತಾಗಿ ಅದೇ ಊರಿನವರಾದ ಗೋ.ನಾ.ಸ್ವಾಮಿ ಕಾಯಕಲ್ಪ ನೀಡಿದ್ದಾರೆ. ಇನ್ನೂ ವಿದೇಶಗಳಲ್ಲಿ ಬಸ್ ನಿಲ್ದಾಣ ಸ್ವಚ್ಚವಾಗಿರುತ್ತವೆ. ಹೈಟೆಕ್ ಆಗಿರುತ್ತವೆ, ಅಗತ್ಯ ಸೌಲಭ್ಯಗಳನ್ನು ಹೊಂದಿರುತ್ತವೆ. ನಮ್ಮೂರಲ್ಲೂ ಇಂತಹ ಒಂದು ಮಾದರಿ ನಿಲ್ದಾಣ ಇರಬೇಕೆಂದು ಸೌಲಭ್ಯ ಕಲ್ಪಿಸಲಾಗಿದೆ. ನಿಲ್ದಾಣವೆಂದರೆ ಹೀಗೂ ಇರುತ್ತದೆಯೇ ಎಂಬ ಅಚ್ಚರಿ ಆಗಬೇಕು ಹಾಗೆ ತಮ್ಮೂರಿನ ಮಾದರಿ ಬಸ್ ನಿಲ್ದಾಣವಾಗ ಬೇಕು ಎಂಬುದು ಹೈ ಟೆಕ್ ಬಸ್ ನಿಲ್ದಾಣದ ಪ್ರಮುಖ ರೂವಾರಿ ಜಾನಪದ ಗಾಯಕ ಗೋ.ನಾ.ಸ್ವಾಮಿ ಅವರ ಮಾತು.
ಸದ್ಯ ಸುಮಾರು 6.7 ಲಕ್ಷ ರೂ. ಹಣ ಖರ್ಚು ಮಾಡಿ ಮಾದರಿ ಈ ನಿಲ್ದಾಣ ನಿರ್ಮಿಸುತ್ತಿದ್ದಾರೆ. ಹೂವಿನ ಗಿಡಗಳಿಗೆ ಗ್ರಾಮ ಪಂಚಾಯಿತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ ಬಳಿ ಹೈಮಾಸ್ಟ್ ದೀಪವನ್ನು ಸದ್ಯದಲ್ಲೇ ಅಳವಡಿಸುವ ಉದ್ದೇಶ ಹೊಂದಲಾಗಿದೆ.