ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ಪ್ರಕರಣ; ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಪ್ರಕರಣಕ್ಕೆ ಸಂಬಂಧಿಸಿ 6 ಶಂಕಿತರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ಪ್ರಕರಣ; ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ
ಶೋಭಾಯಾತ್ರೆ, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸುತ್ತಿದಾರೆ
Edited By: sandhya thejappa

Updated on: Apr 09, 2022 | 1:21 PM

ಕೋಲಾರ: ಜಿಲ್ಲೆಯಲ್ಲಿ ಶ್ರೀರಾಮ ಶೋಭಾಯಾತ್ರೆ ಮೇಲೆ ಕಲ್ಲು (Stone) ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಳಬಾಗಿಲಿನಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ (144 Section) ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶ್ರೀರಾಮನವಮಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 6 ಶಂಕಿತರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮೊಬೈಲ್, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ತಡರಾತ್ರಿವರೆಗೂ ಮೊಬೈಲ್, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರ ತಲಾಶ್ ಮುಂದುವರಿದಿದೆ. ಘಟನೆಯ ಬಳಿಕ ಇದೀಗ ಕೋಲಾರ ಜಿಲ್ಲೆ ಮುಳಬಾಗಿಲು ಸಹಜ ಸ್ಥಿತಿಗೆ ಮರಳುತ್ತಿದೆ. ಪಟ್ಟಣದಲ್ಲಿ ಕಿಡಿಗೇಡಿಗಳು ನಿನ್ನೆ ರಾತ್ರಿ ಕಲ್ಲು ತೂರಾಟ ನಡೆಸಿದ್ದರು. ಕಾರುಗಳು, ಅಂಗಡಿಗಳು, ಸವಾರರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಕಲ್ಲು ತೂರಾಟ ನಡೆಸಿ ಕಿಡಿಗೇಡಿಗಳು ಬೈಕ್ಗೆ ಬೆಂಕಿ ಹಚ್ಚಿದ್ದರು. ಇದೇ ವೇಳೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿತ್ತು.

ಮುಳುಬಾಗಿಲು ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 2 ಕೆಎಸ್ಆರ್​ಪಿ ತುಕಡಿ, 6 ಡಿಎಆರ್ ತುಕುಡಿ ನಿಯೋಜನೆ ಮಾಡಲಾಗಿದ್ದು, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ.

ಕಲ್ಲು ತೂರಾಟ ಪ್ರಕರಣದಲ್ಲಿ ಲಾಠಿ ಚಾರ್ಜ್ ನಡೆದ ರಸ್ತೆಯಲ್ಲಿ ಅಂಗಡಿಗಳ ಗಾಜು ಪುಡಿ ಆಗಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆಟೋ ಮೊಬೈಲ್ ಶಾಪ್, 2 ಕಾರುಗಳ ಗಾಜು ಪುಡಿಪುಡಿ ಆಗಿದೆ. ಮುಳಬಾಗಿಲು ಸೋಮೇಶ್ವರ ಪಾಳ್ಯ ರಸ್ತೆಯಲ್ಲಿರುವ ಮಳಿಗೆಗಳಿಗೆ ಕಲ್ಲೆಸೆದು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗಿದ್ದಾರೆ.

ಮಾರಾಟ ನಿಷೇಧ:
ಮುಳಬಾಗಿಲಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಆದೇಶ ನೀಡಲಾಗಿದೆ. ನಾಳೆ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಹಿರಿಯ ಅರೋಗ್ಯ ನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?:
ಈ ಬಗ್ಗೆ ಮಾತನಾಡಿದ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್, ಸಂಜೆ 6.50ರಲ್ಲಿ ಪವರ್ ಕಟ್ ಆಗಿದ್ದಾಗ ಘಟನೆ ನಡೆದಿದೆ. ಆ ವಿಚಾರದಲ್ಲಿ ಪೊಲೀಸರಿಂದ ಪ್ರತ್ಯೇಕವಾದ ತನಿಖೆ ನಡೆದಿದೆ. ನಿನ್ನೆ ಸಂಜೆ 5.30ಕ್ಕೆ ಶೋಭಾ ಯಾತ್ರೆ ಮುಗಿಯಬೇಕಾಗಿತ್ತು. ಆದರೆ ತಡವಾಗಿ ಶೋಭಾಯಾತ್ರೆ ಮುಗಿದಿದೆ. ಮುಳಬಾಗಿಲು ನಗರ ಠಾಣೆಯಲ್ಲಿ 3 ಕ್ರಿಮಿನಲ್ ಕೇಸ್​ ದಾಖಲಾಗಿದೆ. 9 ಜನರ ಬಂಧಿಸಿ ವಿಚಾರಣೆ, 30 ಬೈಕ್ ಸೀಜ್ ಮಾಡಿದ್ದೇವೆ. ಆಯೋಜಕ ಚಂದ್ರು ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ. ಆವನಿ ಜಾತ್ರೆಗೆ ಯಾವುದೇ ನಿಬಂಧನೆಗಳಿಲ್ಲ. ಕೋಲಾರದಲ್ಲಿ ನಾಳೆಯ ಶೋಭಾಯಾತ್ರೆಗೆ ಅನುಮತಿ ನೀಡಿಲ್ಲ. ಶ್ರೀರಾಮ ನವಮಿ ಆಚರಣೆಗೆ ಮಾತ್ರ ಅನುಮತಿ ನೀಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ 2 ಕಡೆ ಅಗ್ನಿ ದುರಂತ; ಅಂಗಡಿಗಳೆಲ್ಲ ಆಹುತಿ, ಅಗ್ನಿಶಾಮಕದಳದ 6 ಮಂದಿಗೆ ಗಾಯ

ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ

Published On - 9:24 am, Sat, 9 April 22

Web contact

TV9 Kannada

Read More
Follow Us