ಬಿಸಿಲಿಗೆ ತತ್ತರಿಸಿದ ಕೋಲಾರ! ದಣಿವಾರಿಸಿಕೊಳ್ಳಲು ತಂಪು ಪಾನೀಯದ ಮೊರೆ ಹೋದ ಜನ

ಈ ಬಾರಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದ್ದು, ಬಿಸಿಲು ಪ್ರಕರವಾಗುತ್ತಿದ್ದಂತೆ ಜನರು ಮನೆಯಲ್ಲೂ ಇರಲು ಆಗುತ್ತಿಲ್ಲ. ಇತ್ತ ಹೊರಗೆ ಹೋಗೋಕು ಆಗ್ತಿಲ್ಲ. ಹಾಗೂ ಹೊರ ಬಂದರೆ ತಲೆ ಮೇಲೆ ಬಟ್ಟೆ ಇಲ್ಲದೆ ರಸ್ತೆಯಲ್ಲಿ ಓಡಾಡೋದು ಸಾಧ್ಯವಿಲ್ಲ. ಜೊತೆಗೆ  ಮಳೆಯೂ ಬರುತ್ತಿಲ್ಲ, ಕೆರೆ ಕುಂಟೆಗಳಲ್ಲಿದ್ದ ನೀರು ಬತ್ತಿ ಹೋಗಿದೆ. ಹಾಗಾಗಿ ಬಿರು ಬಿಸಿಲಿನ ತಾಪಕ್ಕೆ ಜನ ಬೆಂಡಾಗಿ ಹೋಗಿದ್ದಾರೆ.

ಬಿಸಿಲಿಗೆ ತತ್ತರಿಸಿದ ಕೋಲಾರ! ದಣಿವಾರಿಸಿಕೊಳ್ಳಲು ತಂಪು ಪಾನೀಯದ ಮೊರೆ ಹೋದ ಜನ
ಕೋಲಾರ
Edited By: ಕಿರಣ್ ಹನುಮಂತ್​ ಮಾದಾರ್

Updated on: Apr 28, 2024 | 6:32 PM

ಕೋಲಾರ, ಏ.28: ಕೋಲಾರ(Kolar) ಅಂದ್ರೆನೆ ಬರದ ಜಿಲ್ಲೆ, ವರ್ಷಪೂರ್ತಿ ಸುಡುವ ಬಿಸಿಲು, ಧಗ ಧಗಿಸುವ ಸೂರ್ಯ, ಜನರ ನೆತ್ತಿ ಸುಡುತ್ತಾನೆ. ಹೀಗಿರುವಾಗ ಈ ವರ್ಷ ಏಪ್ರಿಲ್​ ಕಳೆದರೂ ಒಂದು ಹನಿ ಮಳೆಯೂ ಬಂದಿಲ್ಲ. ಕಳೆದ ವರ್ಷವೂ ಬರಗಾಲದಿಂದ ಮಳೆ ಇಲ್ಲ, ಕೆರೆ-ಕುಂಟೆಗಳಲ್ಲಿದ್ದ ನೀರು ಬತ್ತಿ ಹೋಗಿದ್ದು, ಕೆರೆಯ ಒಡಲೇ ಬಿಸಿಲಿನ ತಾಪಕ್ಕೆ ಬಿರುಕುಬಿಡುತ್ತಿದೆ. ಫೆಬ್ರವರಿಯಲ್ಲಿ ಆರಂಭವಾದ ಬಿಸಿಲ ಬೇಗೆ ಇನ್ನೂ ಮುಗಿದಿಲ್ಲ, ದಿನೇ ದಿನೇ ಬಿಸಿಲ ತೀವ್ರತೆ ಹೆಚ್ಚಾಗುತ್ತಿದೆ. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ಅಂದರೆ 36 ರಿಂದ 39 ಡಿಗ್ರಿ ತಾಪಮಾನ ದಾಖಲಾಗಿದೆ. ಎಂದೂ ಕಂಡರಿಯದ ಈ ರಣಬಿಸಿಲಿಗೆ ಜನ ತತ್ತರಿಸಿ ಹೋಗಿದ್ದು, ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಯಳನೀರು, ಮಜ್ಜಿಗೆಯಂತ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ.
ಹಾಗಾಗಿ ನಗರದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್​ಗಳು ಜೋರಾಗಿದೆ. ಎಲ್ಲಾ ಕಡೆ ಕೂಡ ಜನರು ಮುಗಿಬಿದ್ದು, ಬಿಸಿಲಲ್ಲಿ ಕಲ್ಲಂಗಡಿ ಸವಿಯುತ್ತಿರುವ ಜನ ಬಿಸಿಲಿನಿಂದ ಬೆಂದು ಕೊಂಚ ನಿಟ್ಟುಸಿರುವ ಬಿಡುತ್ತಿದ್ದಾರೆ. ಆದರೂ ಬಿಸಿಲು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನು ಕೋಲಾರ ಜಿಲ್ಲೆಯಲ್ಲೂ ಈ ಬಾರಿ ತಾಪಮಾನ ಏರಿಕೆಯಾಗಿದೆ. ಇಷ್ಟೊತ್ತಿಗೆ ಎರಡು ಮೂರು ಬಾರಿ ಮಳೆ ಬರಬೇಕಿದ್ದ ಮಳೆಯೂ ಮುನಿಸಿಕೊಂಡಿದೆ. ಕೆರೆಗಳಲ್ಲೂ ನೀರಿಲ್ಲದೆ ಓಣಗಲಾರಂಭಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ನೀರಾವರಿ ಇರುವ ಅಲೊಬ್ಬ ಇಲ್ಲೊಬ್ಬ ರೈತರು ಕಲ್ಲಂಗಡಿ ಹಣ್ಣು ಬೆಳೆದಿದ್ದು, ಅದನ್ನು ತಂದು ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ:ಉಡುಪಿಯಲ್ಲಿ ರಣ ಬಿಸಿಲು: ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ, ಅಗ್ನಿ ಅವಘಡಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ!

ಜ್ಯೂಸ್​ಗಳಿಗೆ ಹೆಚ್ಚಿದ ಡಿಮ್ಯಾಂಡ್

ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆ ಕಲ್ಲಂಗಡಿ ಸೇರಿದಂತೆ ಎಳನೀರು, ಕಬ್ಬಿನ ಜ್ಯೂಸ್​ಗಳಿಗೂ ಡಿಮ್ಯಾಂಡ್​ ಹೆಚ್ಚಾಗಿದೆ. ಪ್ರತಿ ವರ್ಷದ ಬಿಸಿಲ ತಾಪಮಾನಕ್ಕೂ ಈ ವರ್ಷದ ಬಿಸಿಲ ತಾಪಮಾನಕ್ಕೂ ಬಹಳ ವ್ಯತ್ಯಾಸ ಇದೆ. ಅದರಲ್ಲೂ ಏಪ್ರಿಲ್​ ತಿಂಗಳು ಮುಗಿಯುತ್ತಾ ಬಂದರೂ ಬಿಸಿಲ ತಾಪಮಾನ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿ ಬಿಸಿಲ ಜೊತೆಗೆ ಬಿಸಿಗಾಳಿ ಜನರಿಗೆ ಕೂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ, ಮನೆಯಲ್ಲೂ ಇರಲಾಗದೆ, ಮನೆಯ ಹೊರಗೂ ಇರಲಾರದೆ ಕಾದ ಕಾವಲಿಯಂತಾಗಿರುವ ಭೂಮಿಯ ಮೇಲೆ ಜನರು ನರಳಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ. ಕೊನೇ ಪಕ್ಷ ಮಳೆ ಬಂದರೆ ಜನರು ಒಂದಷ್ಟು ನಿಟ್ಟುಸಿರು ಬಿಡಬಹುದು ಇಲ್ಲವಾದರೆ ಜನರ ಪಾಡು ದೇವರೇ ಗತಿ.
ಒಟ್ಟಾರೆ ಬಯಲು ಸೀಮೆ ಕೋಲಾರದಲ್ಲಿ ಬಿಸಿಲ ತಾಪಮಾನ ಮಿತಿ ಮೀರಿದ್ದು, ಜನರು ಅಕ್ಷರಶ: ಬಿಸಿಲ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ಅಯ್ಯೋ ದೇವರ ಎರಡು ಹನಿ ಮಳೆಯಾದರೂ ಬರಬಾರದೆ ಎಂದು ಮುಗಿಲತ್ತ ಮುಖ ಮಾಡಿ ಅಂಗಲಾಚುತಿದ್ದಾರೆ. ಜನರು ಸೂರ್ಯ ಮತ್ತು ಭೂಮಿಯ ಮದ್ಯೆ ಸಿಲುಕಿ ಜನರಿಂದ ನೀರಿಳಿಯುತ್ತಿರುವುದಂತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ
Loading...
Unable to load recommendations.
Follow Us