
ಕೋಲಾರ, (ಮೇ 09): ಪಹಲ್ಗಾಮ್ ದಾಳಿಯನ್ನು (pahalgam terror attack) ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕೋಲಾರದ (Kolar) ಯುವಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈತ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿದ್ದ. ಬಿಹಾರ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೋಡೀಕರಿಸಲು ಯತ್ನಿಸುತಿದ್ದಾರೆಂದು ಕೋಲಾರದ ಕುಂಬಾರ ಪೇಟೆ ನಿವಾಸಿ ಮುನೀರ್ ಖಾನ್ ಖುರೇಷಿ ಎನ್ನುವಾತ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದ. ಈ ಸಂಬಂಧ ಇದೀಗ ಕೋಲಾರದ ಗಲ್ ಪೇಟೆ ಠಾಣೆ ಪೊಲೀಸರು ಮುನೀರ್ ಖಾನ್ ಖುರೇಷಿ ವಿರುದ್ಧ ಸ್ವಯಂ ಪ್ರೇರಿತ ದೂರು (ಸುಮೋಟೋ ಕೇಸ್) ದಾಖಲಿಸಿಕೊಂಡಿದ್ದಾರೆ.
ಕೋಲಾರದ ಕುಂಬಾರ ಪೇಟೆ ನಿವಾಸಿಯಾಗಿರುವ ಮುನೀರ್ ಖಾನ್, ಚಿಕನ್ ಅಂಗಡಿಯ ಮಾಲೀಕನಾಗಿದ್ದು, ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ, ಪಹಲ್ಗಾಮ್ ದಾಳಿಯನ್ನು ಕೇಂದ್ರ ಸರ್ಕಾರದ ಪೂರ್ವ ಯೋಜಿತ ಕೃತ್ಯ. ಬಿಹಾರ ಚುನಾವಣೆಯಲ್ಲಿ ಹಿಂದೂಗಳ ಮತ ಗಳಿಸಲು ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದ.
ಈ ವಿಡಿಯೋ ಸಾರ್ವಜನಿಕರಲ್ಲಿ ಗೊಂದಲ, ಅಶಾಂತಿ ಹಾಗೂ ಕೋಮು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದ್ದ ಕಾರಣ, ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕೋಮು ಗಲಭೆ ತಡೆಗಟ್ಟಲು ಯೂಟ್ಯೂಬ್ನಿಂದ ಆ ವಿಡಿಯೋವನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು. ಧರ್ಮ ಕೇಳಿ ಕೇಳಿ ಹಿಂದೂಗಳನ್ನೇ ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಕೃತ್ಯವನ್ನು ವಿಶ್ವದ ಹಲವು ದೇಶಗಳು ಖಂಡಿಸಿ ದುಖ ವ್ಯಕ್ತಪಡಿಸಿದ್ದವು. ಇದರ ನಡುವೆ ಕೋಲಾರದ ಮುನಿರ್, ಇದು ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ. ಬಿಹಾರದ ಚುನಾವಣೆಯಲ್ಲಿ ಹಿಂದೂಗಳ ಮತ ಬ್ಯಾಂಕ್ ಸೆಳೆಯಲು ಈ ರೀತಿ ಮಾಡಲಾಗಿದೆ ಎಂದು ವಿಡಿಯೋ ಮಾಡಿ ಯುಟ್ಯೂಬ್ನಲ್ಲಿ ಹರಿಬಿಟ್ಟಿದ್ದ.