ಕೊಪ್ಪಳ/ಗಂಗಾವತಿ, ಜುಲೈ 22: ಸತತ ಮೂರು ಬಾರಿ ಕಾಯಕಲ್ಪ ಪ್ರಶಸ್ತಿಯನ್ನು ಪಡೆದುಕೊಂಡಿರುವ ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯ ವೆದ್ಯರು ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಲ್ಯಾಪ್ರೋಸ್ಕೋಪಿ ಹಿಸ್ಟ್ರೋಕ್ಟಮಿ (Laparoscopy hysterectomy) ಮೂಲಕ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಯನ್ನ ಯಶ್ವಸಿಯಾಗಿ ಮಾಡಿದ್ದಾರೆ.
ಹೊಸ ಹೊಸ ಪ್ರಯತ್ನಗಳಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ ಮೂಲಕ ರಾಜ್ಯದಲ್ಲಿ ಹೆಸರು ವಾಸಿಯಾಗಿರುವ ಗಂಗಾವತಿ ಸರಕಾರಿ ಉಪವಿಭಾಗ ಆಸ್ಪತ್ರೆಯು ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಇಲ್ಲಿನ ವೈದ್ಯರ ತಂಡದ ಆಸ್ಪತ್ರೆಯ ನಿರ್ವಹಣೆಯನ್ನು ಮೆಚ್ಚಿಕೊಂಡು ಕೇಂದ್ರ ಸರ್ಕಾರ ಕೂಡ ಸತತ ಮೂರು ವರ್ಷಗಳ ಕಾಲ ಉತ್ತಮ ಕಾಯಕಲ್ಪ ಪ್ರಶಸ್ತಿಯನ್ನು ನೀಡಿ, ಗೌರವಿಸಿದೆ.
ಸದ್ಯ ಮಹಿಳೆಯರ ಹೆರಿಗೆಯ ವಿಚಾರದಲ್ಲಿ ಜಿಲ್ಲೆಯಲ್ಲಿ ಅತಿಹೆಚ್ಚು ಸಹಜ ಹೆರಿಗೆಯನ್ನು ಮಾಡಿಸುವ ಆಸ್ಪತ್ರೆ ಎನ್ನುವ ಕೀರ್ತಿಯನ್ನು ಪಡೆದುಕೊಂಡಿದ್ದ ಆಸ್ಪತ್ರೆಯ ವೈದ್ಯರು ಮಹಿಳೆಯರಿಗೆ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ಮಾಡಲು ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಗಿತ್ತು. ಇದರಿಂದ ಮಹಿಳೆಯರು ಸಾಕಷ್ಟು ನೋವು ಅನುಭವಿಸುತ್ತಿದ್ದರು. ಆದರೆ ಲ್ಯಾಪ್ರೋಸ್ಕೋಪಿ ಹಿಸ್ಟ್ರೋಕ್ಟಮಿ ಚಿಕಿತ್ಸೆಯ ಮೂಲಕ ನೋವಿಲ್ಲದೆ ಸಂತಾನ ನಿಯಂತ್ರಣ ಚಿಕಿತ್ಸೆ ಮಾಡಬಹುದಾಗಿದೆ ಎಂದು ಗಂಗಾವತಿ ವೈದ್ಯರು ತೊರಿಸಿಕೊಟ್ಟಿದ್ದಾರೆ.
ಮಹಿಳೆಯರಿಗೆ ಹೆರಿಗೆ ನಂತರದಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ಮಾಡಿ, ಮಹಿಳೆಯರ ಗರ್ಭಚೀಲವನ್ನು ತೆಗೆದು ಹಾಕಲಾಗುತ್ತದೆ. ಈ ಹಿಂದೆ ಇದನ್ನು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಮಹಿಳೆಯರ ಹೊಟ್ಟೆಯನ್ನು ಕತ್ತರಿಸಿ ಗರ್ಭಚೀಲ ಚಿಕಿತ್ಸೆ ಮಾಡಲಾಗುತ್ತಿತ್ತು. ಇದರಿಂದ ಮಹಿಳೆಯರು ಹೆಚ್ಚು ಕಮ್ಮಿ ಒಂದು ವಾರಗಳ ಕಾಲ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕಾಗಿತ್ತು.
ಸದ್ಯ ಲ್ಯಾಪ್ರೋಸ್ಕೋಪಿ ಹಿಸ್ಟ್ರೋಕ್ಟಮಿ ಮೂಲಕ ಶಸ್ತ್ರಚಿಕಿತ್ಸೆಯನ್ನು ಮಾಡದೆ ನೋವಿಲ್ಲದ ಗರ್ಭಚೀಲ ತೆಗೆಯಬಹುದಾಗಿದೆ. ಹೊಟ್ಟೆಯ ಭಾಗದಲ್ಲಿ ಸಣ್ಣದಾದ ರಂದ್ರವನ್ನು ಹಾಕಿ ಮೈಕ್ರೋಸ್ಕೋಪ್ ಮೂಲಕ ವೀಕ್ಷಣೆ ಮಾಡುತ್ತಾ ಗರ್ಭಚೀಲ ಚಿಕಿತ್ಸೆ ಮಾಡಬಹುದಾಗಿದೆ. ಇದರಿಂದ ಮಹಿಳೆಯರಿಗೆ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳುವುದಿಲ್ಲ. ಸಮಯ ಕೂಡ ಹೆಚ್ಚು ತೆಗೆದುಕೊಳ್ಳುವುದಿಲ್ಲ. ಗಂಗಾವತಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯು ಯಶಸ್ವಿಯಾಗಿದೆ.
ಕುಟುಂಬ ಕಲ್ಯಾಣ ನಿಯಂತ್ರಣ ಯೋಜನೆಯ ಅಡಿಯಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಇದು ಜನಸಂಖ್ಯಾ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಶಸ್ತ್ರಚಿಕಿತ್ಸೆಯ ಮೂಲಕ ಮಾಡಲಾಗುತ್ತಿದ್ದ ಸಂತಾನ ನಿಯಂತ್ರಣವನ್ನು ಚಿಕಿತ್ಸೆಯನ್ನು ಲ್ಯಾಪ್ರೋಸ್ಕೋಪಿ ಹಿಸ್ಟ್ರೋಕ್ಟಮಿ ಮೂಲಕ ಮಾಡಲು ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯರಿಗೆ ದೆಹಲಿಯಲ್ಲಿ ತರಬೇತಿಯನ್ನು ನೀಡಲಾಗಿದೆ. ಕೇಂದ್ರ ಸರಕಾರ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಎರಡು ವಾರಗಳ ಕಾಲ ತರಬೇತಿಯನ್ನು ಪಡೆದುಕೊಳ್ಳಲಾಗಿದೆ. ರಾಜ್ಯದಿಂದ ಗಂಗಾವತಿಯ ವೈದ್ಯರು ತಂಡದಲ್ಲಿ ಮಾತ್ರ ತರಬೇತಿಯನ್ನ ಪಡೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ