ಪ್ರೀತಿಗಾಗಿ ಪ್ರಾಣಕೊಟ್ಟ‌ ವಿವಾಹಿತರು: ಪ್ರೇಮಿಗಳ ಲವ್ ಕಹಾನಿ ಸಾವಿನಲ್ಲಿ ಅಂತ್ಯ

ವಿವಾಹಿತರ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿದೆ. ಪತಿಯೊಂದಿಗೆ ಇರಲಾಗದೆ, ಪ್ರಿಯಕರನ ನೆನಪಿನಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದೆಡೆ ಪ್ರಿಯತಮೆಯ ಸಾವಿನ ಸುದ್ದಿ ಕೇಳಿ ಪ್ರಿಯಕರನೂ ಸಹ ನೇಣಿಗೆ ಶರಣಾಗಿ ಪ್ರಾಣ ಬಿಟ್ಟಿದ್ದಾನೆ. ಈ ದಾರುಣ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದ್ದು, ಈ ತ್ರಿಕೋನ ಪ್ರೇಮ್​ ಕಹಾನಿಯ ಕಂಪ್ಲೀಟ್​ ರಿಪೋರ್ಟ್ ಇಲ್ಲಿದೆ.

ಪ್ರೀತಿಗಾಗಿ ಪ್ರಾಣಕೊಟ್ಟ‌ ವಿವಾಹಿತರು: ಪ್ರೇಮಿಗಳ ಲವ್ ಕಹಾನಿ ಸಾವಿನಲ್ಲಿ ಅಂತ್ಯ
ಸೃಷ್ಟಿ, ಪ್ರಸನ್ನ
Edited By:

Updated on: Dec 18, 2024 | 4:45 PM

ಮಂಡ್ಯ, (ಡಿಸೆಂಬರ್ 18): ಅದೆಂಥಾ ಹಾರಿಬಲ್ ರೀ ಈ ಪ್ರೀತಿ. ಹೆತ್ತ ತಾಯಿ ಸತ್ತಳು ಎಂದು ಮಕ್ಕಳು ಸೂಸೈಡ್​ ಮಾಡಿಕೊಳ್ಳಲ್ಲ. ಮಗು ಸತ್ತೋಯ್ತು ಎಂದು ತಾಯಿ ಪ್ರಾಣಬಿಡಲ್ಲ. ಆದ್ರೆ ಪ್ರೀತಿ ಹಾಗಲ್ಲ. ತಾನು ಪ್ರೀತಿಸಿದ ಹುಡುಗ ಸಿಗಲಿಲ್ಲ ಎಂದು ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯತಮೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇತ್ತ ಪ್ರಿಯಕರ ಸಹ ನೇಣು ಬಿಗಿದುಕೊಂಡಿಕೊಂಡಿದ್ದಾನೆ. ಅಂದ ಹಾಗೆ ಆತ್ಮಹತ್ಯೆಗೆ ಶರಣಾದ ಸೃಷ್ಟಿ, ಪ್ರಸನ್ನ ಇಬ್ಬರೂ ಪ್ರೇಮಿಗಳು. ಈ ಘಟನೆ ಮಂಡ್ಯದ ಮದ್ದೂರು ಪೊಲೀಸ್​ ಠಾಣಾ ವ್ಯಾಪ್ತಿಯ ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೃಷ್ಟಿಗೆ ಈಗ 20 ವರ್ಷ. ಪ್ರಸನ್ನಂಗೂ ಇನ್ನೂ 25ರ ಹರೆಯ. ಬದುಕು ತುಂಬಾ ದೊಡ್ಡದ್ದಿತ್ತು ಅವಸರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಕುಟುಂಬಸ್ಥರನ್ನ ದುಃಖಕ್ಕೆ ದೂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಸೃಷ್ಟಿ, ಪ್ರಸನ್ನ ಇಬ್ಬರೂ ಪ್ರೇಮಿಗಳು. ಆದ್ರೆ ವಿವಾಹಿತರು. ಮದುವೆಯಾಗಿದ್ದು ಪ್ರೇಮಿಗಳ ನಡುವೆಯಲ್ಲ. ಒಂದೂವರೆ ವರ್ಷದ ಹಿಂದೆ ಸೃಷ್ಟಿಗೆ ದಿನೇಶ್​ ಎನ್ನುವರ ಜೊತೆ ಮದುವೆಯಾಗಿದ್ರೆ, ಪ್ರಸನ್ನ ಸೃಷ್ಟಿಯ ಗೆಳತಿ ಸ್ಪಂದನಾಳನ್ನ ಮದುವೆಯಾಗಿದ್ದ. ಪ್ರೇಯಸಿಗೆ ಬೇರೆ ಹುಡುಗನ ಜೊತೆ ಮದ್ವೆಯಾಗಿದ್ದರೆ, ಪ್ರಿಯತಮನಿಗೆ ಬೇರೆ ಹುಡುಗಿ ಜೊತೆ ಮದುವೆಯಾಗಿತ್ತು. ಆದರೂ ಸಹ ಇವರಿಬ್ಬರ ನಡುವಿನ ಪ್ರೀತಿ ಮಾತ್ರ ಮುಂದುವರಿದಿತ್ತು.

ಇದನ್ನೂ ಓದಿ: ಸೊಸೆಯನ್ನ ಮಂಚಕ್ಕೆ ಕರೆದ ಮಾವ : ಬರಲೊಪ್ಪದಕ್ಕೆ ಆಕೆಯ ಜೀವವನ್ನೇ ತೆಗೆದ!

ಮದ್ವೆಯಾಗಿದ್ದರೂ ಸಹ ಇಬ್ಬರ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೀತಿಯ ವಿಷಯ ಸೃಷ್ಟಿ ಗಂಡನಿಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಗಂಡ ಹೆಂಡ್ತಿ ನಡುವೆ ಗಲಾಟೆಯಾಗಿದೆ. ಬಳಿಕ ಸೃಷ್ಟಿ ಡಿಸೆಂಬರ್ 11ರಂದು ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ಆದರೆ, ಎಲ್ಲಿ ಹೋಗಿದ್ದಾಳೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದಿನೇಶ್, ದಿನೇಶ್ ಮದ್ದೂರು ಪೊಲೀಸ್​ ಠಾಣೆಯಲ್ಲಿ ಪ್ರಸನ್ನನ ಜೊತೆ ಹೋಗಿರಬಹುದು ಎಂದು ದೂರು ನೀಡಿದ್ದ. ಆದ್ರೆ ಡಿಸೆಂಬರ್ 16ರಂದು ಶಿಂಷಾ ನದಿಯಲ್ಲಿ ಸೃಷ್ಟಿ ಶವ ಪತ್ತೆಯಾಗಿದೆ.

ಮದ್ದೂರು ಪೊಲೀಸರು ಮೃತದೇಹವನ್ನು ಗುರುತಿಸಿ ಸೃಷ್ಟಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಪ್ರಿಯತಮ ಪಸನ್ನ, ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇನ್ನು ಸೃಷ್ಟಿಯನ್ನು ಮದುವೆಯಾಗಿದ್ದ ದಿನೇಶ್​ಗೆ ದಿಕ್ಕುತೋಚದಂತಾಗಿದ್ದರೆ, ಇತ್ತ ಪಸನ್ನನನ್ನು ಕಟ್ಟಿಕೊಂಡಿದ್ದ ಹೆಂಡತಿ ಗಂಡನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ