ಮಂಡ್ಯ: ನಾಟಿಕೋಳಿ ಸಾರು.. ಮುದ್ದೆ ಮುಂದಿದ್ರೆ ಯಾರ್ ತಾನೇ ಸುಮ್ನಿರ್ತಾರೆ. ಅದ್ರಲ್ಲೂ ಕಾಂಪಿಟೇಶನ್ ಅಂತಾ ಕೂರ್ಸಿದ್ರೆ ಕೇಳ್ಬೇಕಾ. ಇವ್ರು ಅಷ್ಟೇ ನಾನ್ ಗೆಲ್ಬೇಕು. ಇಲ್ಲಾ ಹೊಟ್ಟೆ ತುಂಬಾ ತಿಂದ್ಬಿಡ್ಬೇಕು ಅಂತಾ ಬಾರ್ಸಿದ್ದೇ ಬಾರ್ಸಿದ್ದು. ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ನಾಟಿಕೋಳಿ ಸಾರು ಹಾಗೂ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. 50 ಕೆಜಿ ರಾಗಿಹಿಟ್ಟು ಹಾಗೂ 25 ಕೆಜಿ ನಾಟಿ ಕೋಳಿ ಸಾಂಬರ್ ಸಿದ್ಧ ಮಾಡಿದ್ರು. 200 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದು, 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ರು.
ಸ್ಪರ್ಧೆಗೆ ಕುಳಿತವ್ರಿಗೆ ಆರಂಭದಲ್ಲಿ ತಲಾ ಅರ್ಧ ಕೆಜಿ ತೂಕದ 2 ಮುದ್ದೆಗಳನ್ನ ನೀಡಲಾಗಿತ್ತು. ಅದನ್ನ ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡಲಾಗಿತ್ತು. ಸ್ಪರ್ಧೆಗೆ 20 ನಿಮಿಷದವರೆಗೂ ಟೈಂ ನಿಗಧಿಪಡಿಸಿದ್ದು, ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ವಿಜೇತರು. ಕೆಲವ್ರು ಮೂರೇ ಮುದ್ದೆಗೆ ಉಸ್ಸಪ್ಪಾ ಅಂದ್ರೆ ಕೆಲವ್ರು ನಾಲ್ಕು ಮುದ್ದೆ ತಿಂದು ಸುಮ್ನಾಗಿದ್ರು. ಆದ್ರೆ ಮೊತ್ತಹಳ್ಳಿ ಗ್ರಾಮದ ಕೆಂಪರಾಜು ಅನ್ನೋರು ಬರೋಬ್ಬರಿ 5 ಮುದ್ದೆ ಬಾರಿಸಿದ್ರು. ಎರಡು ಮುಕ್ಕಾಲು ಕೆಜಿಯಷ್ಟು ಮುದ್ದೆ ತಿಂದು 5 ಸಾವಿರ ಬಹುಮಾನ ಗೆದ್ರು..
ಇನ್ನು ಸ್ಪರ್ಧೆ ನೋಡಲೆಂದೇ ಸುತ್ತಮುತ್ತಲ ಹಳ್ಳಿಯ ಸಾಕಷ್ಟು ಜನ ಸೇರಿದ್ರು.. ಕೇಕೆ, ಶಿಳ್ಳೆ ಹಾಕುತ್ತಾ ಜನರನ್ನ ಹುರಿದುಂಬಿಸಿದ್ರು.. ಆದ್ರೆ ಸ್ಪರ್ಧೆಯಲ್ಲಿ ಭಾಗಿಯಾದವ್ರು ಮಾತ್ರ ಗೆಲ್ತೀವೋ ಬಿಡ್ತೀವೋ ಅದು ಸೆಕೆಂಡ್ರಿ ಅಂತಾ ಸಖತ್ತಾಗೇ ಬ್ಯಾಟಿಂಗ್ ಮಾಡಿದ್ರು.