ಶಾಸಕ ಯತ್ನಾಳ್​ ಒಬ್ಬ ದುರಹಂಕಾರಿ ನಾಯಕ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕ. ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು 65 ಶಾಸಕರು ಸಹಿ ಮಾಡಿದ್ದಾರೆ.

ಶಾಸಕ ಯತ್ನಾಳ್​ ಒಬ್ಬ ದುರಹಂಕಾರಿ ನಾಯಕ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ
ಎಂ.ಪಿ.ರೇಣುಕಾಚಾರ್ಯ
Updated By: ganapathi bhat

Updated on: Apr 04, 2021 | 6:49 PM

ದಾವಣಗೆರೆ: ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕ. ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲು 65 ಶಾಸಕರು ಸಹಿ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ವಾಪಸ್ಸು ಕರೆತಂದ ತಪ್ಪಿಗೆ ಯಡಿಯೂರಪ್ಪನವರಿಗೆ ಇಂಥ ಗಿಫ್ಟ್ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹರಿಹರದಲ್ಲಿ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.

ಪದೇ ಪದೇ ಸಿಎಂ ಸ್ಥಾನಕ್ಕೆ ಸವಾಲು ಹಾಕುತ್ತಾರೆ. ಪ್ರತಿ ತಿಂಗಳು ಒಂದೊಂದು ಡೇಟ್ ಕೊಡುತ್ತಾರೆ. ಅವರು ದಿನನಿತ್ಯ ಅರಿವೆ ಹಾವು ಬಿಡ್ತಾರೆ ಅಷ್ಟೇ. ಮುಖ್ಯಮಂತ್ರಿ‌ ಬದಲಾವಣೆ ಆಗುತ್ತೆ ಅಂತಾರೆ. ಎಲ್ಲವೂ ಸುಳ್ಳು ಆಗಲಿದೆ. ಯತ್ನಾಳ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಯತ್ನಾಳ್‌ ಹೇಳಿಕೆಗಳನ್ನು ಲೇವಡಿ ಮಾಡಿದ್ದಾರೆ.

ವಿಜಯೇಂದ್ರ, ಡಿ.ಕೆ. ಶಿವಕುಮಾರ್ ಸೇರಿ ಹೊಸ ಪಕ್ಷ ಕಟ್ಟುತ್ತಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ವಿಜಯೇಂದ್ರ ಪಕ್ಷದ ರಾಜ್ಯ ಉಪಾಧ್ಯಕ್ಷರು. ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿನಾಕಾರಣ ಅವರ ಮೇಲೆ ಆರೋಪಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈಶ್ವರಪ್ಪ ಹಾಗೂ ಯಡಿಯೂರಪ್ಪ ಮಧ್ಯೆ ವೈಮನಸ್ಸಿನ ಶಮನದ ಬಗ್ಗೆ ಮಾತನಾಡಿ, ಪಕ್ಷದ ಆರಂಭ ಹಂತದಿಂದ ಯಡಿಯೂರಪ್ಪ ಮತ್ತು ಅನಂತಕುಮಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಈಶ್ವರಪ್ಪನವರು‌ ಹಿರಿಯರು ಜೊತೆಗೆ ಅನುಭವಿಗಳು ಕೂಡಾ. ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕಾದ ವಿಷಯವನ್ನು‌ ರಾಜ್ಯಪಾಲರ ಬಳಿ ಒಯ್ದಿದ್ದು‌ ತಪ್ಪು. ಅನಗತ್ಯವಾಗಿ ಕಾಂಗ್ರೆಸ್‌ನವರ ಕೈಗೆ ಅಸ್ತ್ರ ಕೊಟ್ಟಂತಾಗಿದೆ ಎಂದು ಹೇಳಿದ್ದಾರೆ.

ಉಪಚುನಾವಣೆ ಹೊತ್ತಲ್ಲಿ ಇದು ಸರಿಯಲ್ಲ. ವಿಶೇಷ ಅನುದಾನ ನೀಡುವ ಪರಮಾಧಿಕಾರ ಸಿಎಂ ಅವರಿಗಿದೆ. ಈ ವಿಷಯವನ್ನು ಚರ್ಚಿಸಿ ಪರಿಹರಿಸಿಕೊಳ್ಳಬಹುದು. ಈಶ್ವರ ಮತ್ತು ಯಡಿಯೂರಪ್ಪ ಮಧ್ಯೆ ಯಾವುದೇ ಮನಸ್ಥಾಪವಿಲ್ಲ. ವರಿಷ್ಠರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಹಾರೆ ಹಿಡಿದು ಮಣ್ಣು ಅಗೆದ ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಕೂಲಿ ಕಾರ್ಮಿಕರಿಂದ ಹೂ ಹಾರ -ಹೂ ಮಳೆ