ಮುಡಾ ಹಗರಣ: ಬೆಂಗಳೂರು ಟು ಮೈಸೂರು ಪಾದಯಾತ್ರೆ ದಿನಾಂಕ ಘೋಷಿಸಿದ ವಿಜಯೇಂದ್ರ

ಮುಡಾ ಹಗರಣದಲ್ಲಿ ಇದೀಗ ರಾಜಕೀಯ ನಾಯಕರ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ, ಜೆಡಿಎಸ್​ ನಾಯಕರು ಪಾದಯಾತ್ರೆಗೆ ಮುಂದಾಗಿದ್ದು, ಈ ಕುರಿತಾಗಿ ಇಂದು ಸಭೆ ಮಾಡಲಾಗಿದೆ. ಆಗಸ್ಟ್‌ 3ರಿಂದ ಬೆಂಗಳೂರಿನಿಂದ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮುಡಾ ಹಗರಣ: ಬೆಂಗಳೂರು ಟು ಮೈಸೂರು ಪಾದಯಾತ್ರೆ ದಿನಾಂಕ ಘೋಷಿಸಿದ ವಿಜಯೇಂದ್ರ
ಮುಡಾ ಹಗರಣ: ಬೆಂಗಳೂರು ಟು ಮೈಸೂರು ಪಾದಯಾತ್ರೆ ದಿನಾಂಕ ಘೋಷಿಸಿದ ವಿಜಯೇಂದ್ರ
Edited By:

Updated on: Jul 28, 2024 | 7:03 PM

ಬೆಂಗಳೂರು, ಜುಲೈ 28: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (muda) ಅಕ್ರಮ ವಿಚಾರವಾಗಿ ಆಗಸ್ಟ್‌ 3ರಿಂದ ಬೆಂಗಳೂರಿನಿಂದ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಬಿಜೆಪಿ, ಜೆಡಿಎಸ್ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಮೈಸೂರಿನಲ್ಲಿ ಆ.10ರಂದು ಪಾದಯಾತ್ರೆ ಸಮಾರೋಪ ಸಮಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮುಡಾ ಹಗರಣ ವಿಚಾರವಾಗಿ ಪಾದಯಾತ್ರೆಯ ಸಮರ ಸಾರಿರುವ ಬಿಜೆಪಿ, ಜೆಡಿಎಸ್​ ನಾಯಕರ ಸಮಾಗಮವೇ ಆಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮೈಸೂರು ಪಾದಯಾತ್ರೆಯ ಪೂರ್ವಭಾವಿ ಸಭೆ ಮಾಡಲಾಗಿದೆ. ಸಭೆಯಲ್ಲಿ ಪಾದಯಾತ್ರೆಯ ರೂಪರೇಷೆಯ ಕುರಿತು ಸಮಾಲೋಚನೆ ಮಾಡಲಾಗಿದ್ದು, ಪಾದಯಾತ್ರೆ ಹೊರಡುವ ದಿನಾಂಕವನ್ನೂ ಇದೀಗ ಘೋಷಣೆ ಮಾಡಲಾಗಿದೆ.

ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆಂದ ಹೆಚ್‌ಡಿ ಕುಮಾರಸ್ವಾಮಿ

ಸಭೆ ಬಳಿಕ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿ, ಸದನದಲ್ಲಿ ಸಿಎಂ ಉತ್ತರವನ್ನೇ ನೀಡಿಲ್ಲ. ಪರಿಶಿಷ್ಟ ಸಮುದಾಯದ ಹಣವನ್ನು ಲೂಟಿ ಮಾಡಿದ್ದಾರೆ. ಎಸ್‌ಐಟಿ ರಚಿಸಿ ಆರೋಪಿಗಳಿಗೆ ಸರ್ಕಾರ ರಕ್ಷಣೆ ನೀಡಿತ್ತು. ಸಿಎಂ ಕುಟುಂಬ ಅಕ್ರಮವಾಗಿ ಸೈಟ್ ಪಡೆದ ಭೂಮಿ ಯಾರದ್ದು? ಸಿಎಂ ಕುಟುಂಬ ಅಕ್ರಮವಾಗಿ ಸೈಟ್ ಪಡೆದ ಭೂಮಿ ಸರ್ಕಾರದ್ದು. ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏಕಾಏಕಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ, ಕೂಡಲೇ ಆಸ್ಪತ್ರೆಗೆ ಕರೆದೊಯ್ದ ಪುತ್ರ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ಅಕ್ಷಮ್ಯ ಅಪರಾಧವನ್ನು ಒಪ್ಪಿಕೊಳ್ಳಲಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲೂ ಹೋರಾಟ ಮಾಡಲು ನಿರ್ಧಾರ: ಶ್ರೀರಾಮುಲು

ಮಾಜಿ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿದ್ದಿ, ಚರ್ಚೆಯಲ್ಲಿ ವಿಜಯೇಂದ್ರ ಒಂದು ಸಂಕಲ್ಪ ಮಾಡಿದ್ದಾರೆ. ಪಾದಯಾತ್ರೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಭೆ ಮಾಡಿದ್ದಾರೆ. ಬೆಂಗಳೂರಿಂದ ಮೈಸೂರುವರೆಗೆ ಪಾದಯಾತ್ರೆಗೆ ನಿರ್ಧಾರವಾಗಿದೆ. ಕಲ್ಯಾಣ ಕರ್ನಾಟಕದಲ್ಲೂ ಹೋರಾಟ ಮಾಡಲು ಚರ್ಚೆ ಮಾಡಲಾಗುತ್ತಿದ್ದು, ಕೆಲವೇ ದಿನದಲ್ಲಿ ದಿನಾಂಕ ನಿಗದಿಯಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿಗಳಿಗೆ ಹಿಂದುಳಿದ ವರ್ಗಗಳ ಹಣ ಬಳಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಮಹದೇವಪ್ಪ

ಮುಡಾ, ಭ್ರಷ್ಟಾಚಾರ, ವಾಲ್ಮೀಕಿ ನಿಗಮದ ಹಗರಣ ಸಂಬಂಧವೂ ಹೋರಾಟ ಮಾಡಲಾಗುವುದು. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ‌. ಇತಿಹಾಸದಲ್ಲಿ ಯಾರೂ ಮಾಡದ ಭ್ರಷ್ಟಾಚಾರ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ಸತ್ಯಹರಿಶ್ಚಂದ್ರ ಇದ್ದಂತೆ. ಅವರು ಏನು ಮಾಡಿದ್ರೂ ನಡೆಯುತ್ತೆ. ಇಷ್ಟು ದಿನ ಟೇಬಲ್​​​​ ಗುದ್ದಿ ಗುದ್ದಿ ನ್ಯಾಯ ಕೇಳುತ್ತಿದ್ದರು. ಇದೀಗ ಅವರ ಅವಧಿಯಲ್ಲೇ ಭ್ರಷ್ಟಾಚಾರ ನಡೆದಿದೆ. ಇದು ಆರಂಭವಷ್ಟೇ, ಮುಂದೆ ದೊಡ್ಡ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:41 pm, Sun, 28 July 24

Sunil MH
Follow Us