
ಮೈಸೂರು, (ಅಕ್ಟೋಬರ್ 26): ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋಗಿ ಇಬ್ಬರು ಸಹೋದರರು (Brothers) ನೀರು ಪಾಲಾಗಿರುವ ಘಟನೆ ಮೈಸೂರಿನ (Mysuru) ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ. ಬಡಗಲಹುಂಡಿ ಗ್ರಾಮದ ರಮೇಶ್ ಮಗನಾದ ನವವಿವಾಹಿತ ನಂದನ್ (25), ರಮೇಶ್ ಸಹೋದರನ ಪುತ್ರ ರಾಕೇಶ್ (20) ಜೀವ ಕಳೆದುಕೊಂಡವರು. ಈ ಇಬ್ಬರು ಸಹೋದರರ ಮಕ್ಕಳು ಆಗಿದ್ದಾರೆ. ಮಂಜು ಎನ್ನುವ ಬಾಲಕ ವರಣ ನಾಲೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಮಂಜು ಮುಳುಗುತ್ತಿರುವುದನ್ನು ಸಹೋದರರಿರಬ್ಬರು ನೋಡಿ ಕೂಡಲೇ ನಾಲೆಗೆ ಹಾರಿ ಕಾಪಾಡಿದ್ದಾರೆ. ಆದ್ರೆ, ಆದರೆ ದುರದೃಷ್ಟವಶಾತ್ ನಂದನ್ ಹಾಗೂ ರಾಕೇಶ್ ನೀರು ಪಾಲಾಗಿದ್ದಾರೆ.
ಮಂಜು ಎನ್ನುವ ಬಾಲಕ ವರಣ ನಾಲೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಮಂಜು ಮುಳುಗಿದ್ದಾನೆ. ಇನ್ನೊಂದೆಡೆ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಸಹೋದರರು ತಕ್ಷಣ ನೀರಿಗೆ ಹಾರಿ ಮುಳುಗುತ್ತಿದ್ದವನನ್ನ ರಕ್ಷಣೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ನಂದನ್ ಹಾಗೂ ರಾಕೇಶ್ ನೀರು ಪಾಲಾಗಿದ್ದಾರೆ. ಮೃತ ನಂದನ್, ರಾಕೇಶ್ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು ಸಂಬಂಧದಲ್ಲಿ ಸಹೋದರರಾಗಿದ್ದರು. ಇದೀಗ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
8ನೇ ತರಗತಿ ಓದುತ್ತಿರುವ ಮಂಜ ನಾಲೆಯಲ್ಲಿ ಈಜು ಹೊಡೆಯುತ್ತಿದ್ದ. ಈತನ ಜೊತೆ ಇನ್ನು ಮೂವರು ಬಾಲಕರಿದ್ದರು. ಈ ವೇಳೆ ಮಂಜ ಸುಸ್ತಾಗಿ ಈಜಲಾಗದೆ ನಾಲೆಯ ನೀರಿನಲ್ಲಿ ಮುಳುಗುತ್ತಿದ್ದ ಇದನ್ನು ಕಂಡು ನಾಲೆಯ ರಸ್ತೆಯಲ್ಲಿ ಜಮೀನಿಗೆ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದ ನಂದನ್ ಹಾಗೂ ರಾಕೇಶ್ ಬಾಲಕ ಮಂಜನ ರಕ್ಷಣೆಗೆ ಮುಂದಾಗಿದ್ದಾರೆ. ಹಿಂದೆ ಮುಂದೆ ನೋಡದೆ ನಾಲೆಗೆ ಹಾರಿದ್ದಾರೆ.
ನಾಲೆಗೆ ಹಾರಿದ ನಂದನ್ಗೆ ಈಜು ಬರುತಿತ್ತು ಆದ್ರೆ ರಾಕೇಶ್ಗೆ ಈಜು ಬರುತ್ತಿರಲಿಲ್ಲ.ಹೀಗಾಗಿ ಬಾಲಕನ ರಕ್ಷಣೆ ಮಾಡಿದ ನಂದನ್ಗೆ ನಂತರ ರಾಕೇಶ್ ರಕ್ಷಣೆ ಮಾಡುವುದು ಅಸಾಧ್ಯವಾಗಿದೆ. ಇದರಿಂದ ಬಾಲಕನ ರಕ್ಷಣೆ ಮಾಡಿ ಇಬ್ಬರು ನಾಲೆಯಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹ ಅಲ್ಲಿಂದ 500 ಮೀಟರ್ ದೂರದಲ್ಲಿ ಪತ್ತೆಯಾಗಿದೆ.
ದುರಂತ ಅಂದ್ರೆ ನಂದನ್ 11 ದಿನದ ಹಿಂದಷ್ಟೇ ಚನ್ನಪಟ್ಟಣ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇನ್ನು ಅರಿಶಿನದ ಮೈ ಒಣಗದ ನಂದನ್ ಶವವಾಗಿದ್ದಾನೆ. ಇನ್ನು ಚಿಕ್ಕಪ್ಪನ ಮಗ ರಾಕೇಶ್ ಸದಾ ನಂದನ್ ಜೊತೆಯೇ ಇರುತ್ತಿದ್ದ. ಇದೀಗ ಸಾವಿನಲ್ಲೂ ಇವರು ಒಂದಾಗಿದ್ದು ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.
ಇನ್ನು ಬಾಲಕ ಮಂಜು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾನೆ. ಆತ ಇನ್ನು ಶಾಕ್ನಲ್ಲಿದ್ದು ಘಟನೆಯನ್ನು ಟಿವಿ9 ಬಳಿ ವಿವರಿಸಿದ್ದಾನೆ. ವರುಣ ಉಪನಾಲೆಗೆ ಈಜಲು ಹೋಗಿದ್ದೆ. ನನ್ನ ಜೊತೆ ಯಾರು ಇರಲಿಲ್ಲ ಅಲ್ಲಿ ಮೂರು ನಾಲ್ಕು ಜನರ ಇದ್ದರು. ಈಜುತ್ತಾ ನನಗೆ ಸುಸ್ತಾಯಿತು ನೀರಿನಲ್ಲಿ ಕಾಲು ಬಿಟ್ಟು ಬಿಟ್ಟೆ. ಆಗ ಮುಳುಗುತ್ತಿದ್ದೆ. ಅದಾದ ಮೇಲೆ ಏನಾಯ್ತು ಗೊತ್ತಾಗಲಿಲ್ಲ.ಕಣ್ಣು ಬಿಟ್ಟಾಗ ಮನೆಯಲ್ಲಿದ್ದೆ ಎಂದು ಘಟನೆಯನ್ನು ವಿವರಿಸಿದ್ದಾನೆ.
ಮಗ ಬದುಕುಳಿದ ಬಗ್ಗೆ ಟಿವಿ9ಗೆ ಮಂಜು ತಂದೆ ರವಿ ಪ್ರತಿಕ್ರಿಯಿಸಿದ್ದು, ಮೊದಲು ನನ್ನ ಮಗ ಸತ್ತು ಹೋಗಿದ್ದಾನೆ ಎಂದರು. ನನಗೆ ಆತಂಕ ಗಾಬರಿಯಾಗಿತ್ತು. ಸ್ವಲ್ಪ ಸಮಯದ ನಂತರ ನನ್ನ ಮಗ ಬದುಕಿದ್ದಾನೆ ಅಂದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯ್ತು. ಮಂಜು ಘಟನೆಯಲ್ಲಿ ಸಾಕಷ್ಟು ನೀರು ಕುಡಿದಿದ್ದ. ವೈದ್ಯರು ಎಲ್ಲವನ್ನೂ ಹೊರಗೆ ತೆಗೆದರು ನಂತರ ಬದುಕುಳಿದ. ಈಗಲೂ ಮೈ ಕೈ ನೋವು ಎನ್ನುತ್ತಿದ್ದಾನೆ. ಈತ ಈಜಲು ಹೋಗುತ್ತಾನೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಈ ರೀತಿ ಆದಾಗಲೇ ಈ ಬಗ್ಗೆ ನನಗೆ ಗೊತ್ತಾಗಿದ್ದು. ಆದ್ರೆ, ಆ ಯುವಕರ ಸಾವು ದುರಂತ ತುಂಬಾ ನೋವಾಗಿದೆ ಎಂದು ಕಣ್ಣೀರಿಟ್ಟರು.