
ಮೈಸೂರು, ಡಿಸೆಂಬರ್ 12: ಮೈಸೂರಿನಲ್ಲಿ ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆ ವಿಚಾರ ಸಂಬಂಧ ಮಾಧ್ಯಮ ಪ್ರಕಟಣೆ ಮೂಲಕ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಮಾಲ್ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ, ಆದ್ರೆ ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ.ಇದೇ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕಟಣೆ ಮೂಲಕ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ
ಕಸಬಾ ಹೋಬಳಿಯ ಸರ್ವೆ ನಂ.1ರ ದೊಡ್ಡಕೆರೆ ಟ್ಯಾಂಕ್ ಬೆಡ್ ಭೂಮಿಯಲ್ಲಿ ಮಾಲ್ ನಿರ್ಮಾಣ ಬಗ್ಗೆ ಹೈಕೋರ್ಟ್ ಯಥಾಸ್ಥಿತಿ ಆದೇಶ ನೀಡಿದೆ, ಕರಕುಶಲವಸ್ತು, IGಟ್ಯಾಗ್ ಮಾಡಲಾದ ಉತ್ಪನ್ನ ಪ್ರದರ್ಶನಕ್ಕೆ ಕರ್ನಾಟಕ ಸರ್ಕಾರವು ಮಾಲ್ ಸ್ಥಾಪಿಸಲಿ, ಅದಕ್ಕೆ ವಿರೋಧ ಇಲ್ಲ. ಆದರೆ ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಹಂಚಿಕೆ ಮಾಡಲಿ. ಅದರ ಬದಲು ಖಾಸಗಿ ಆಸ್ತಿಯನ್ನು ಹಂಚಿಕೆ ಮಾಡುವುದು ಸರಿಯಲ್ಲ. ನನ್ನ ಪೂರ್ವಜರ ಭೂಮಿ ಉಳಿಸಿಕೊಳ್ಳುವುದು, ರಕ್ಷಣೆ ನನ್ನ ಜವಾಬ್ದಾರಿಯಾಗಿದೆ. ಅದೇ ಕೆಲಸವನ್ನು ನಾನು ಮಾಡಿದ್ದೇನೆ. ನನ್ನ ನಿಲುವನ್ನು ದೃಢೀಕರಿಸಲು ಸಂಬಂಧಿತ ದಾಖಲೆ ಸಲ್ಲಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಬಲಪಡಿಸಲು ಮೈಸೂರಿನಲ್ಲಿ ನಿರ್ಮಾಣವಾಗುತ್ತಿದ್ದ ಯೂನಿಟಿ ಮಾಲ್ಗೆ ವಿಘ್ನ
ಸ್ಥಳೀಯವಾಗಿ ಉತ್ಪಾದನೆಯಾಗುವ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 6.5 ಎಕರೆ ಪ್ರದೇಶದಲ್ಲಿ ಯೂನಿಟಿ ಮಾಲ್ ನಿರ್ಮಾಣ ಕಾರ್ಯ ಕೆಲ ತಿಂಗಳುಗಳ ಹಿಂದಷ್ಟೆ ಆರಂಭವಾಗಿತ್ತು. ಕೇಂದ್ರ ಸರ್ಕಾರದ 193 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರ ಈ ಯುನಿಟಿ ಮಾಲ್ ನಿರ್ಮಾಣಕ್ಕೆ ಮುಂದಾಗಿತ್ತು. ಇದು ಕೇಂದ್ರದ ಯೋಜನೆಯಾದ ಕಾರಣ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕೂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ನಡುವೆ ಮಾಲ್ ನಿಮಅರ್ಣಕ್ಕೆ ಪ್ರಮೋದಾ ದೇವಿ ಒಡೆಯರ್ ತಡೆಯಾಜ್ಞೆ ತಂದಿರೋದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Fri, 12 December 25