ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತನ ಕುಟುಂಬಕ್ಕೆ ಸಿಗದ ಪರಿಹಾರ; ಮೈಸೂರು ಡಿಸಿ ಹೇಳುವುದೇನು?

| Updated By: Rakesh Nayak Manchi

Updated on: Jul 10, 2023 | 10:09 PM

ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್​ ಅವರ ಕುಟುಂಬಕ್ಕೆ ಅಂತ್ಯಸಂಸ್ಕಾರದ ನಂತರ ಇಂದು ಸಂಜೆ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ವೇಣುಗೋಪಾಲ್ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ.

ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತನ ಕುಟುಂಬಕ್ಕೆ ಸಿಗದ ಪರಿಹಾರ; ಮೈಸೂರು ಡಿಸಿ ಹೇಳುವುದೇನು?
ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್
Follow us on

ಮೈಸೂರು: ಹತ್ಯೆಯಾದ ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತ ವೇಣುಗೋಪಾಲ್​ ಅಂತ್ಯಸಂಸ್ಕಾರದ ನಂತರ ಸಂಜೆ ವೇಳೆಗೆ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ವೇಣುಗೋಪಾಲ್ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ಕುಟುಂಬಸ್ಥರಿಗೆ ಹಾಗೂ ಕಾರ್ಯಕರ್ತರಿಗೆ ಉಪವಿಭಾಗಾಧಿಕಾರಿ ನೀಡಿದ ಭರವಸೆ ಏನು? ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಹೇಳುವುದೇನು?

ಹತ್ಯೆಯಾದ ವೇಣುಗೋಪಾಲ್​ ಮೃತದೇಹವನ್ನು ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿಯಲಾಗಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ರಕ್ಷಿತ್, ಅಂತ್ಯಕ್ರಿಯೆ ನಡೆಸಿ, ಇಂದು ಸಂಜೆಯೊಳಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.

ಈ ಬಗ್ಗೆ ಮಾತನಾಡಿದ್ದ ಆರ್​ಎಸ್​ಎಸ್ ಮುಖಂಡ ತೋಟದಪ್ಪ ಬಸವರಾಜು, ಅಟ್ರಾಸಿಟಿ ಪ್ರಕರಣದಡಿ 8.25 ಲಕ್ಷ ರೂ. ಶೀಘ್ರ ಪರಿಹಾರಕ್ಕೆ ಒಪ್ಪಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಕೊಡಿಸುವ ಭರವಸೆ ಹಾಗೂ ಮೃತನ ಪತ್ನಿಗೆ ಕೆಲಸ ಹಾಗೂ ಪಿಂಚಣಿ ಭರವಸೆ ನೀಡಲಾಗಿದೆ. ಮೈಸೂರು ಜಿಲ್ಲಾಡಳಿತದ ಭರವಸೆಯಿಂದ ಶವ ಸಂಸ್ಕಾರಕ್ಕೆ ಒಪ್ಪಿದ್ದೇವೆ ಎಂದಿದ್ದರು. ಅದರಂತೆ, ಪ್ರತಿಭಟನೆ ಕೈಬಿಟ್ಟ ಕುಟುಂಬಸ್ಥರು ಹಾಗೂ ಕಾರ್ಯಕರ್ತರು ವೇಣುಗೋಪಾಲ್ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಮೃತನ ಕುಟುಂಬಸ್ಥರಿಗೆ ಪರಿಹಾರ ಬಿಡುಗಡೆಯಾಗಿಲ್ಲ.

ಇದನ್ನು ಓದಿ: ಕಾಂಗ್ರೆಸ್​​ ಕಾರ್ಯಕರ್ತರು ಯುವ ಬ್ರಿಗೇಡ್ ಕಾರ್ಯಕರ್ತನನ್ನು ಹೊಡೆದಿದ್ದಾರೆ: ಚಕ್ರವರ್ತಿ ಸೂಲಿಬೆಲೆ ಆರೋಪ

ಮೈಸೂರು ಜಿಲ್ಲಾಧಿಕಾರಿ ಹೇಳುವುದೇನು?

ಪರಿಹಾರದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ, ಎಸ್​ಸಿ ಎಸ್​ಟಿ ಅಟ್ರಾಸಿಟಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅದರ ಪರಿಹಾರ ಸಿಗಲಿದೆ. ಪ್ರಕರಣದಲ್ಲಿ ಆರೋಪಿಗಳು ಬೇರೆ ಸಮುದಾಯದವರಾಗಿದ್ದಾರೆ ಈ ಕಾಯ್ದೆ ಅನ್ವಯವಾಗುತ್ತದೆ. ಇದು ಪೊಲೀಸ್ ಎಫ್​ಐಆರ್‌ನಲ್ಲಿ ಉಲ್ಲೇಖವಾಗಿದ್ದರೆ ಸಮಾಜ ಕಲ್ಯಾಣ ಇಲಾಖೆಯಿಂದ ಒಟ್ಟು 8.25 ಲಕ್ಷ ಎರಡು ಹಂತದಲ್ಲಿ ಪರಿಹಾರ ಸಿಗಲಿದೆ ಎಂದರು.

ಎಫ್​​ಐಆರ್‌ನಲ್ಲಿ ಈ ವಿಚಾರ ನಮೂದಾದ ತಕ್ಷಣ ಪರಿಹಾರದ ಮೊತ್ತದ ಶೇ.50 ರಷ್ಟು ಪರಿಹಾರ ಅಂದರೆ 4.12 ಲಕ್ಷ ರೂ. ಪರಿಹಾರ ಕುಟುಂಬಕ್ಕೆ ಸಿಗಲಿದೆ. ಪ್ರಕರಣದ ತನಿಖೆ ನಡೆದು ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಅಪರಾಧ ಧೃಡವಾದರೆ ಉಳಿದ ಶೇ.50ರಷ್ಟು ಅಂದರೆ 4.12 ಲಕ್ಷ ಪರಿಹಾರ ಸಿಗಲಿದೆ ಎಂದರು.

ಚಾರ್ಜ್‌ಶೀಟ್ ನಂತರವೇ ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಕೆಲಸ ಹಾಗೂ ಕೆಲಸ ಸಿಗುವವರೆಗೂ ಪಿಂಚಣಿ ಸೌಲಭ್ಯ ಸಿಗಲಿದೆ. ಇದು ಎಸ್​ಸಿ ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಸಿಗಲಿದೆ. ಸಿಎಂ ಪರಿಹಾರ ನಿಧಿಯಿಂದ ಕುಟುಂಬಕ್ಕೆ ಪರಿಹಾರ ಸಿಗಬೇಕಾದರೆ ಸಂತ್ರಸ್ಥ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಬೇಕು. ನಂತರ ಪ್ರಸ್ತಾಪನೆ ಸಲ್ಲಿಸಲಾಗುವುದು. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

25 ಲಕ್ಷಕ್ಕೆ ಅಂತಾ ಬರುದಿಲ್ಲ. ನಮ್ಮ ಕುಟುಂಬ ಸಮಸ್ಯೆಯಲ್ಲಿದೆ ಸರ್ಕಾರದಿಂದ ಸಹಾಯ ಮಾಡಿ ಅಂತಾ ಕುಟುಂಬದವರು ಮನವಿ ಸಲ್ಲಿಸಿದರೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ‌ ಕಳುಹಿಸುತ್ತಾರೆ. ಪರಿಹಾರ ಕೊಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಸಿಎಂ ಪರಿಹಾರವಾಗಿ 1 ಕೋಟಿಯಾದರೂ ಕೊಡಬಹುದು, 50 ಲಕ್ಷ, 25 ಲಕ್ಷ, 10 ಲಕ್ಷ, 5 ಲಕ್ಷ ಎಷ್ಟು ಬೇಕಾದರೂ ಕೊಡಬಹುದು. ಇಲ್ಲ ಕೊಡದೆಯೂ ಇರಬಹುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ