
ಬೆಂಗಳೂರು, (ಸೆಪ್ಟೆಂಬರ್ 22): ಕಾಲಚಕ್ರ ಈಗ ತಿರುಗುತ್ತಿದೆ. ಭಾರತದ ಅಪಾರ ಪ್ರತಿಭಾ ಖನಜಕ್ಕೆ ಮಾರುಹೋಗಿರುವ ವಿಶ್ವ ಈಗ ಭಾರತ (India) ಅದರಲ್ಲೂ ಕರ್ನಾಟಕ (Karnataka) ಹಾಗೂ ಬೆಂಗಳೂರಿನತ್ತ (Bengaluru) ಬೆರಗಿನಿಂದ ನೋಡುತ್ತಿದೆ ಜಾಗತಿಕ ವಿಶ್ವ. ಅದರಲ್ಲೂ ಪ್ರತಿಭೆಗಳನ್ನ ಪಟಾಯಿಸಿಕೊಂಡು ಹೋಗುವಲ್ಲಿ ಪಕ್ಕಾ ಫೋರ್ಟ್ವೆಂಟಿ ಅಮೆರಿಕ ಈಗ ಕರ್ನಾಟಕದ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳನ್ನ ತನ್ನತ್ತ ಸೆಳೆಯಲಾರಂಭಿಸಿದೆ. ಈ ಸಂಬಂಧ ಅಮೆರಿಕದ ನ್ಯೂಜೆರ್ಸಿ (New Jersey) ಕರ್ನಾಟಕದ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ತನ್ನಲ್ಲಿ ಅಪಾರ ಅವಕಾಶ ಇದೆ. ಬನ್ನಿ ಬಂಡವಾಳ ಹೂಡಿ ಎಂದು ಉದ್ಯಮಿಗಳನ್ನ ಕರೆದಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ (Karnataka Governmnet) ಜತೆಗೆ ಬೆಂಗಳೂರಿನಲ್ಲಿ ಗವರ್ನರ್ ಫಿಲ್ ಮರ್ಫಿ ನೇತೃತ್ವದ ನಿಯೋಗ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳು, ಹಾಗೂ ಉದ್ಯೋಗಿಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಭಾರತೀರ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತಿವೆ. ಹೀಗಾಗಿ ಇತ್ತೀಚಿನ ಹಿಂಸಾಚಾರ ಘಟನೆಗಳ ಬಗ್ಗೆ ಭಾರತೀಯ ವಿದ್ಯಾರ್ಥಿಗಳು, ಉದ್ಯೋಗದ ಆಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಡಾಲರ್ನಲ್ಲಿ ಕಮಾಯಿಸಲು ಆಸೆ ಇದ್ರೂ ಭದ್ರತೆಯ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟಿಕರಣದ ಜತೆಗೆ ಭದ್ರತೆಯ ಅಭಯ ನೀಡಿದ್ದಾರೆ ಗವರ್ನರ್ ಮರ್ಪಿ ದಂಪತಿ.
ಇದೇ ವೇಳೆ ಭಾರತದ ಮೇಲೆ ಇತ್ತೀಚಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50 ಸುಂಕ ಹೇರಿದ್ದಲ್ಲದೇ, ಹೆಚ್1ಬಿ ವಿಸಾದ ಶುಲ್ಕವನ್ನ ಸಿಕ್ಕಾಪಟ್ಟೆ ಹೆಚ್ಚಿಸಿ ಶಾಕ್ ನೀಡಿದ್ದಾರೆ. ಆದ್ರೆ ಇದೆಲ್ಲಾ ಕ್ಷಣಿಕ ಈ ಸಂಬಂಧ ಉಭಯ ದೇಶಗಳು ಪರಸ್ಪರ ಚರ್ಚಿಸಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಿವೆ. ಹೀಗಾಗಿ ಯಾವುದೇ ಆತಂಕ ಇಲ್ಲದೇ ನ್ಯೂಜೆರ್ಸಿಗೆ ಬನ್ನಿ, ಬಂಡವಾಳ ಹೂಡಿ, ನಮ್ಮಲ್ಲಿನ ಅತ್ಯಾಧುನಿಕ ತಾಂತ್ರಿಕ ಗುಣಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಿರಿ ಎಂದು ನ್ಯೂಜೆರ್ಸಿ ಸರ್ಕಾರ ಕರ್ನಾಟಕಕ್ಕೆ ಮುಕ್ತ ಆಹ್ವಾನ ನೀಡಿದೆ.
ವರದಿ: ಗುರು ಕುಸುಗಲ್, ಟಿವಿ9 ಬೆಂಗಳೂರು