PM Narendra Modi: 21ನೇ ಶತಮಾನದ ನವಭಾರತ ಎಂಥದ್ದಕ್ಕೂ ಸಿದ್ಧ: ಪ್ರಧಾನಿ ನರೇಂದ್ರ ಮೋದಿ

Aero India 2023: ಬೆಂಗಳೂರಿನ ಈ ಅಗಸವು ನವಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತಿದೆ. ನವಭಾರತದ ನವ ಎತ್ತರವನ್ನು ಬೆಂಗಳೂರು ಆಗಸದಲ್ಲಿ ಕಾಣಬಹುದು. ಇವತ್ತು ದೇಶ ಹೊಸ ಹೊಸ ಎತ್ತರ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

PM Narendra Modi: 21ನೇ ಶತಮಾನದ ನವಭಾರತ ಎಂಥದ್ದಕ್ಕೂ ಸಿದ್ಧ: ಪ್ರಧಾನಿ ನರೇಂದ್ರ ಮೋದಿ
ಏರೋ ಇಂಡಿಯಾ ಶೋನದಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us
|

Updated on:Feb 13, 2023 | 11:56 AM

ಬೆಂಗಳೂರು: ಯಲಹಂಕಾದ ವಾಯುನೆಲೆಯಲ್ಲಿ ನಡೆಯುತ್ತಿರುವ 14ನೇ ಏರೋ ಇಂಡಿಯಾ ಶೋಗೆ (Aero India 2023) ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ಕೆಲ ಹೊತ್ತು ವೈಮಾನಿಕ ಪ್ರದರ್ಶನ ನಡೆಯಿತು. ಬಳಿಕ ರಾಜನಾಥ್ ಸಿಂಗ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದರು. ನಂತರ ಏರೋ ಇಂಡಿಯಾ 2023ರ ಸಂಸ್ಮರಣಾ ಅಂಚೆಯನ್ನು ಪ್ರಧಾನಿಗಳು ಬಿಡುಗಡೆ ಮಾಡಿ ನಂತರ ಭಾಷಣ ಮಾಡಿದರು. ಕರ್ನಾಟಕ ಮತ್ತು ಬೆಂಗಳೂರನ್ನು ತಮ್ಮ ಭಾಷಣದಲ್ಲಿ ಪ್ರಧಾನಿಗಳು ಹೊಗಳಿದರು. ಪ್ರಧಾನಿ ಭಾಷಣದ ಬಳಿಕ ವೈಮಾನಿಕ ಪ್ರದರ್ಶನಗಳು ಮುಂದುವರಿದವು. ಪ್ರಧಾನಿಗಳು 11:30ರವರೆಗೂ ಏರೋ ಇಂಡಿಯಾ ಶೋ ವೀಕ್ಷಿಸಿ ನಂತರ ಇಲ್ಲಿಂದ ತೆರಳಲಿದ್ದಾರೆ.

ಬೆಂಗಳೂರಿನ ಈ ಅಗಸವು ನವಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗುತ್ತಿದೆ. ನವಭಾರತದ ನವ ಎತ್ತರವನ್ನು ಬೆಂಗಳೂರು ಆಗಸದಲ್ಲಿ ಕಾಣಬಹುದು. ಇವತ್ತು ದೇಶ ಹೊಸ ಹೊಸ ಎತ್ತರ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಏರೋ ಇಂಡಿಯಾವನ್ನು ಒಂದು ಸಮಯದಲ್ಲಿ ಕೇವಲ ಪ್ರದರ್ಶನಕ್ಕೆ ಸೀಮಿತ ಎಂದು ಭಾವಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ದೃಷ್ಟಿಕೋನ ಬದಲಾಗಿದೆ. ನವಭಾರತದ ನವಮಾರ್ಗವನ್ನು ಏರೋ ಇಂಡಿಯಾ ಪ್ರತಿಫಲಿಸುತ್ತದೆ. ಇವತ್ತು ಇದು ಕೇವಲ ಶೋ ಮಾತ್ರವಲ್ಲ ಭಾರತದ ಶಕ್ತಿಯೂ ಆಗಿದೆ. ಭಾರತದ ರಕ್ಷಣಾ ಉದ್ಯಮದ ಬೆಳವಣಿಗೆ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕವಾಗಿದೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟರು.

21ನೇ ಶತಮಾನದ ನವಭಾರತವು ಯಾವುದೇ ಅವಕಾಶ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕಠಿಣ ಪರಿಶ್ರಮ ಹಾಕಲೂ ಹಿಂದೆಮುಂದೆ ನೋಡುವುದಿಲ್ಲ. ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿ ತರುತ್ತಿದ್ದೇವೆ. ರಕ್ಷಣಾ ಕ್ಷೇತ್ರ ಇಂದು ಅತ್ಯಂತ ಪ್ರಬಲ ವಲಯವಾಗಿ ಬೆಳೆದಿದೆ ಎಂದು ಅವರು ಹೇಳಿದರು.

ವ್ಯವಹಾರ ಸುಲಭಗೊಳಿಸುವ (Ease of Doing Business) ವಿಚಾರದಲ್ಲಿ ಭಾರತ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳು ಜಾಗತಿಕವಾಗಿ ಪ್ರಶಂಸೆಗೆ ಒಳಗಾಗಿವೆ. ಎಲ್ಲಿ ಬೇಡಿಕೆ ಇದೆಯೋ, ಎಲ್ಲಿ ಸಾಮರ್ಥ್ಯ ಇದೆಯೋ, ಎಲ್ಲಿ ಅನುಭವ ಇದೆಯೋ ಅಲ್ಲಿ ಉದ್ಯಮ ಬೆಳೆಯುತ್ತದೆ. ಭಾರತದಲ್ಲಿ ರಕ್ಷಣಾ ಕ್ಷೇತ್ರವನ್ನು ಬಲಗೊಳಿಸುವ ಪ್ರಕ್ರಿಯೆ ಇನ್ನಷ್ಟು ವೇಗಗೊಳ್ಳಲಿದೆ ಎಂದರು.

2024-25ಕ್ಕೆ ಬಿಲಿಯನ್ ಡಾಲರ್​ನಷ್ಟು ಡಿಫೆನ್ಸ್ ರಫ್ತು

ಭಾರತ ಶೀಘ್ರದಲ್ಲೇ ರಕ್ಷಣಾ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ತಯಾರಿಕಾ ನೆಲೆ ಆಗಲಿದೆ. ಒಂದು ಸಮಯದಲ್ಲಿ ಭಾರತದ ರಕ್ಷಣಾ ಕ್ಷೇತ್ರದ ಬಹುತೇಕ ಉತ್ಪನ್ನಗಳು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ರಫ್ತು ಹೆಚ್ಚಾಗುತ್ತಿದೆ. 2024-25ರಷ್ಟರಲ್ಲಿ ಭಾರತದ ರಕ್ಷಣಾ ಕ್ಷೇತ್ರದ ರಫ್ತು 5 ಬಿಲಿಯನ್ ಡಾಲರ್​ನಷ್ಟು ಆಗಲಿದೆ ಎಂದು ನರೇಂದ್ರ ಮೋದಿ ವಿವರಿಸಿದರು.

ಬಸವರಾಜ ಬೊಮ್ಮಾಯಿ ಭಾಷಣ

ಪ್ರಧಾನಿ ಭಾಷಣಕ್ಕೂ ಮುನ್ನ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಸತತ 14ನೇ ಬಾರಿ ಏರೋ ಇಂಡಿಯಾ ಶೋ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಕೋವಿಡ್ ಸಂದರ್ಭದಲ್ಲಿ ಪ್ಯಾರಿಸ್ ಏರ್ ಶೋ ರದ್ದುಪಡಿಸಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಏರೋ ಶೋ ನಡೆಸಿ ಯಶಸ್ವಿಯಾದೆವು ಎಂದರು.

ಬೆಂಗಳೂರಿನಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಹೆಚ್​​ಎಎಲ್, ಬಿಎಚ್​ಇಎಲ್, ಬಿಇಎಲ್, ಇಸ್ರೋ ಮೊದಲಾದ ಕಂಪನಿಗಳು ಆರಂಬವಾಗಿದ್ದನ್ನು ಉಲ್ಲೇಖಿಸಿದ ಬೊಮ್ಮಾಯಿ, ಭಾರತ ರಕ್ಷಣಾ ಕ್ಷೇತ್ರದ ಬಹುತೇಕ ಸಾಮರ್ಥ್ಯವನ್ನು ಬೆಂಗಳೂರು ತುಂಬುತ್ತಿದೆ ಎಂದು ಹೇಳಿದರು.

ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಮಾತನಾಡಿದರು. ಕರ್ನಾಟಕದ ಹಲವು ಸಚಿವರು, ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ, ರಕ್ಷಣಾ ಇಲಾಖೆಗಳ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಭಾಷಣದ ಬಳಿಕ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ಮುಂದುವರಿದಿದೆ. ಫೆಬ್ರುವರಿ 17ರವರೆಗೂ 5 ದಿನಗಳ ಕಾಲ ಈ ಪ್ರದರ್ಶನ ಮುಂದುವರಿಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 100 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಹಲವು ಜಾಗತಿಕ ಕಂಪನಿಗಳು ತಮ್ಮ ರಕ್ಷಣಾ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿವೆ. ಭಾರತದ ರಕ್ಷಣಾ ಕ್ಷೇತ್ರದೊಂದಿಗೆ ಹಲವು ಜಾಗತಿಕ ಕಂಪನಿಗಳು ವಿವಿಧ ತಯಾರಕಾ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.

Published On - 10:29 am, Mon, 13 February 23