
ಬೆಂಗಳೂರು: ಹಿರಿಯ ಸಾಹಿತಿ ಕೆ.ಎಸ್.ನಿಸಾರ್ ಅಹಮದ್(84) ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು.
1936ರ ಫೆಬ್ರವರಿ 5ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಶೇಖ್ ಹೈದರ್, ಹಮೀದಾ ಬೇಗಂ ದಂಪತಿಯ ಪುತ್ರನಾಗಿ ನಿಸಾರ್ ಅಹಮದ್ ಜನಿಸಿದ್ದರು. ನಿಸಾರ್ ಅವರ ಪೂರ್ತಿ ಹೆಸರು ಕೊಕ್ಕರೆಹೊಸಳ್ಳಿ ಶೇಖ್ಹೈದರ್ ನಿಸಾರ್ ಅಹ್ಮದ್. ಈ ಮೊದಲು ದೇವನಹಳ್ಳಿ ಮೈಸೂರು ಸಂಸ್ಥಾನದಲ್ಲಿತ್ತು.
ನಿಸಾರ್ ಅವರ ಶಿಕ್ಷಣ:
ದೇವನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಕ ಪಡೆದಿದ್ದರು. ಹೊಸಕೋಟೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದ ನಿಸಾರ್ ಅಹ್ಮದ್, 1959ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕಲಬುರಗಿಯಲ್ಲಿ ಭೂ ವಿಜ್ಞಾನಿಯಾಗಿ ಉದ್ಯೋಗ ಆರಂಭಿಸಿದ್ದರು. ಕೆಲಸದಲ್ಲಿ ತೃಪ್ತಿ ಸಿಗದೆ ಎಂಎಸ್ಸಿ ಮುಗಿಸಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಇವರು 1994ರವರೆಗೆ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ನಿತ್ಯೋತ್ಸವ ಕವಿಗೆ ಲಭಿಸಿದ ಪ್ರಶಸ್ತಿಗಳು:
ಮನಸು ಗಾಂಧಿಬಜಾರು, ನಿತ್ಯೋತ್ಸವ ಅವರ ಪ್ರಮುಖ ಕವನಸಂಕಲನಗಳಾಗಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಕೆ.ಎಸ್.ನಿಸಾರ್ ಅಹಮದ್ ಭಾಜನರಾಗಿದ್ದರು. 2003ರಲ್ಲಿ ನಾಡೋಜ ಪ್ರಶಸ್ತಿ, 2006ರಲ್ಲಿ ಅರಸು ಪ್ರಶಸ್ತಿ ಹಾಗೂ ಮಾಸ್ತಿ ಪ್ರಶಸ್ತಿ, 2008ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ನಿಸಾರ್ ಅಹಮದ್ ಭಾಜನರಾಗಿದ್ದರು. 2006ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಿಸಾರ್ ಕವನ ಸಂಕಲನಗಳು:
ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು. ಮನಸು ಗಾಂಧಿಬಜಾರು, ನಿತ್ಯೋತ್ಸವ ಅವರ ಪ್ರಮುಖ ಕವನಸಂಕಲನಗಳಾಗಿವೆ.
ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ, ಶೇಕ್ಸ್ಪಿಯರ್ನ ಒಥೆಲ್ಲೊದ ಕನ್ನಡಾನುವಾದ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕನ್ನಡಾನುವಾದ, ಅಮ್ಮ ಆಚಾರ ಮತ್ತು ನಾನು ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಗದ್ಯ ಸಾಹಿತ್ಯವಾಗಿದೆ.
Published On - 2:04 pm, Sun, 3 May 20