ಖಾಸಗಿ ಬಸ್​ ಸಂಚಾರ ಇರುತ್ತೆ: ಖಾಸಗಿ ಬಸ್ ಮಾಲೀಕರ ಫೆಡರೇಷನ್ ಸ್ಪಷ್ಟನೆ

ಫ್ರೀಡಂಪಾರ್ಕ್​ನಲ್ಲಿ ಖಾಸಗಿ ಬಸ್​ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಖಾಸಗಿ ಬಸ್​ ಓಡಾಟ ಬಂದ್​ ಮಾಡುತ್ತೇವೆ ಎಂದು ಹೇಳಿದ್ದರು. ಇದು ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು

ಖಾಸಗಿ ಬಸ್​ ಸಂಚಾರ ಇರುತ್ತೆ: ಖಾಸಗಿ ಬಸ್ ಮಾಲೀಕರ ಫೆಡರೇಷನ್ ಸ್ಪಷ್ಟನೆ
ಸಾಂದರ್ಭಿಕ ಚಿ್ತ್ರ
Edited By:

Updated on: Dec 13, 2020 | 10:37 PM

ಬೆಂಗಳೂರು: ಖಾಸಗಿ ಬಸ್​ ಮಾಲೀಕರ ಸಂಘವು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಅಲ್ಲದೆ ಸೋಮವಾರ (ಡಿ.14) ಖಾಸಗಿ ಬಸ್​ಗಳ ಸಂಚಾರವೂ ರಾಜ್ಯದಲ್ಲಿ ಸ್ತಬ್ಧವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಸ್ ಮಾಲೀಕರ ಫೆಡರೇಷನ್ ಅಧ್ಯಕ್ಷ ರಾಜಶೇಖರ್ ನಾಳೆ ಖಾಸಗಿ ಬಸ್​ಗಳು ರಸ್ತೆಗೆ ಇಳಿಯಲಿವೆ ಎಂದಿದ್ದಾರೆ.

ಫ್ರೀಡಂಪಾರ್ಕ್​ನಲ್ಲಿ ಖಾಸಗಿ ಬಸ್​ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಖಾಸಗಿ ಬಸ್​ ಓಡಾಟ ಬಂದ್​ ಮಾಡುತ್ತೇವೆ ಎಂದು ಹೇಳಿದ್ದರು. ಇದು ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು. ಈಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿರೋದು ಸಾರ್ವಜನಿಕರಿಗೆ ನಿಟ್ಟುಸಿರು ಬಿಡುವಂತಾಗಿದೆ. ನಾಳೆ ನಾವು ಖಾಸಗಿ ಬಸ್‌ಗಳನ್ನು ರಸ್ತೆಗಿಳಿಸುತ್ತೇವೆ. ಪ್ರಯಾಣಿಕರು ಆತಂಕಪಡುವ ಅಗತ್ಯವಿಲ್ಲ, ಎಂದಿದ್ದಾರೆ.

ಉಲ್ಟಾ ಹೊಡೆದಿದ್ದ ಚಂದ್ರು
ವಿಕಾಸಸೌಧದಲ್ಲಿ ಇಂದು KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು ಅವರೊಂದಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿ ಅನೇಕರು ಸಂಧಾನ ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಹೊರ ಬಂದ ನಂತರ ಮಾತನಾಡಿದ್ದ ಚಂದ್ರು, ಸಂಧಾನ ಯಶಸ್ವಿ ಆಗಿದೆ ಎಂದು ಹೇಳಿದ್ದರು. ಆದರೆ, ಫ್ರೀಡಂ ಪಾರ್ಕ್​ ಬಂದ ನಂತರದಲ್ಲಿ ಚಂದ್ರು ಉಲ್ಟಾ ಹೊಡೆದಿದ್ದರು. ಸರ್ಕಾರದ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕಿದೆ. ಈಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ, ಯಾರೂ ಬಸ್​ ತೆಗೆಯಬಾರದು ಎಂದು ಕೋರಿದ್ದರು.

ಬಸ್ ಚಾಲನೆಗೆ ಮುಂದಾಗಲಿರುವ ನೌಕರರಿಗೆ ಭದ್ರತೆ
ಸಾರಿಗೆ ಮುಷ್ಕರದ ನಡುವೆಯೇ ಸರ್ಕಾರ ಸಿಬ್ಬಂದಿಗೆ ಆಫರ್​ ಒಂದನ್ನು ನೀಡಿದೆ. ನಾಳೆ ಬಸ್​ ಸಂಚಾರ ಮಾಡಲು ಮುಂದಾಗುವ ನೌಕರರಿಗೆ ಭದ್ರತೆ ಒದಗಿಸುತ್ತೇವೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. ಶನಿವಾರ ಮುಷ್ಕರದ ನಡುವೆಯೂ ಓಡಾಡಿದ್ದ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಹೀಗಾಗಿ, ಅನೇಕ ಚಾಲಕರು ಬಸ್​ ಚಾಲನೆ ಮಾಡೋಕೆ ಹಿಂಜರಿದಿದ್ದರು. ಅಂಥವರಿಗೆ ಈ ಆಫರ್​ ನೀಡಲಾಗಿದೆ.

ಮುಷ್ಕರ ಕೈಬಿಡಿ: ಸಾರಿಗೆ ನಿಗಮ ನೌಕರರಿಗೆ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಕರೆ

 

Published On - 10:36 pm, Sun, 13 December 20