ಗುಬ್ಬಿ ಪಟ್ಟಣದಲ್ಲಿ ಒಳಚರಂಡಿ ಮಾರ್ಗ ಕಳಪೆ ಕಾಮಗಾರಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ

3 ವರ್ಷಗಳ ಹಿಂದೆ 21 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿತ್ತು. ಆದರೆ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, 21 ಕೋಟಿ ರೂಪಾಯಿ ಅನುದಾನದಲ್ಲಿ 17 ಕೋಟಿಯಷ್ಟು ಖರ್ಚಾಗಿದೆ. ಆದರೆ ಈ ಕಾಮಗಾರಿ ತುಂಬಾ ಕಳಪೆಯಾಗಿದೆ.

ಗುಬ್ಬಿ ಪಟ್ಟಣದಲ್ಲಿ ಒಳಚರಂಡಿ ಮಾರ್ಗ ಕಳಪೆ ಕಾಮಗಾರಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ
ರಸ್ತೆ ಬದಿಯ ಕಳಪೆ ಕಾಮಗಾರಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Feb 05, 2021 | 11:27 AM

ತುಮಕೂರು: ಗುಬ್ಬಿ  ಪಟ್ಟಣದಲ್ಲಿ ಅಪೂರ್ಣವಾಗಿರುವ ಒಳಚರಂಡಿ ಮಾರ್ಗ (ಯುಜಿಡಿ) ಕಾಮಗಾರಿಯು ಕಳಪೆಯಾಗಿದೆ. ರಸ್ತೆಗಳ ಮಧ್ಯದಲ್ಲಿಯೇ ಗುಂಡಿಗಳು ಬಿದ್ದಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಜೀವ ಭಯದಲ್ಲಿಯೇ ಓಡಾಡುವಂತಾಗಿದ್ದು, ಮ್ಯಾನ್ ಹೋಲ್‌ಗಳ ಮುಚ್ಚಳ ಮುರಿದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಯವಾರ ರಸ್ತೆಯಲ್ಲಿ ನಿತ್ಯ ನೂರಾರು ಜನರು ಓಡಾಡುತ್ತಿರುತ್ತಾರೆ. ಆದರೆ ರಸ್ತೆ ಬದಿ ಇರುವ ಮ್ಯಾನ್ ಹೋಲ್ ಮುಚ್ಚಳವಿಲ್ಲದೆ ಅಪಾಯಕ್ಕೆ ಆಹ್ವಾನದಂತಿದೆ. ರಾತ್ರಿ ವೇಳೆ ವಾಹನ ಸವಾರರಿಗೆ ಮ್ಯಾನ್ ಹೋಲ್‌ಗಳು ಕಾಣದೆ ಬೀಳುವ ಸಾಧ್ಯತೆ ಇದೆ ಎನ್ನುವುದು ಸದ್ಯ ಸಾರ್ವಜನಿಕರ ಆರೋಪವಾಗಿದೆ.

ಗುಬ್ಬಿ ಪಟ್ಟಣದ ರಾಯವಾರ ರಸ್ತೆಯ ಒಳಚರಂಡಿ ಮಾರ್ಗ ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬಂದಿವೆ, ಈ ಬಗ್ಗೆ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಪಟ್ಟಣ ಪಂಚಾಯಿತಿ ಕಡೆಯಿಂದ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಗುಬ್ಬಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಅಣ್ಣಪ್ಪ ತಿಳಿಸಿದರು.

ರಸ್ತೆ ಬದಿ ಇರುವ ಮ್ಯಾನ್ ಹೋಲ್ ಮುಚ್ಚಳವಿಲ್ಲದೆ ಇರುವುದು

3 ವರ್ಷಗಳ ಹಿಂದೆ 21 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿತ್ತು. ಆದರೆ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, 21 ಕೋಟಿ ರೂಪಾಯಿ ಅನುದಾನದಲ್ಲಿ 17 ಕೋಟಿಯಷ್ಟು ಖರ್ಚಾಗಿದೆ. ಈ ಕಾಮಗಾರಿ ತುಂಬಾ ಕಳಪೆಯಾಗಿದೆ. ನಿರ್ಮಿಸಿರುವ ಚರಂಡಿಗಳು ಕೂಡ ಕುಸಿದು ಮಳೆ ಮತ್ತು ಕೊಳಚೆ ನೀರು ಸಮರ್ಪಕವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ರಾಯವಾರ ರಸ್ತೆಯ ಪಕ್ಕದಲ್ಲಿಯೇ ನಮ್ಮ ಜಮೀನಿದೆ. ಈ ಮಾರ್ಗದಲ್ಲಿ ಯಾವಾಗಲೂ ಭಯದಲ್ಲಿಯೇ ತಿರುಗಾಡುವಂತ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತ ಲಕ್ಷ್ಮಣಪ್ಪ ಹೇಳಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾಯಿತ ಕೌನ್ಸಿಲ್ ಅಧಿಕಾರಕ್ಕೆ ಬಂದಿದ್ದರೂ ಕಳಪೆ ಕಾಮಗಾರಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಗಮನಹರಿಸಿ ತ್ವರಿತವಾಗಿ ಮ್ಯಾನ್‌ಹೋಲ್‌ಗಳನ್ನು ಮುಚ್ಚಿಸುವುದರ ಜೊತೆಗೆ ಕಾಮಗಾರಿ ನಡೆದಿರುವ ಸ್ಥಳಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ಸದ್ಯ ಸ್ಥಳೀಯರ ಒತ್ತಾಯವಾಗಿದೆ.

ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ