AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಕಪುರ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಸರ್ಕಾರದ ಮರ್ಯಾದೆಯನ್ನ ಅಧಿಕಾರಿಗಳೇ ಕಳೆಯುತ್ತಿದ್ದಾರೆ -ಜಿಲ್ಲಾಧಿಕಾರಿಗೆ ತಿಳಿಹೇಳಿದ ಡಿ ಕೆ ಶಿವಕುಮಾರ್

Kanakapura: ತಾಲೂಕು ಕೆಡಿಪಿ ಸಭೆ ವೇಳೆ ಕನಕಪುರ ನಗರಸಭೆ ಪೌರಾಯುಕ್ತೆ ಶುಭಾಗೆ ಯಾವ ಬ್ಯಾಚ್ ಅಮ್ಮ ನೀನು? ನಿಮ್ಮ ಆಫೀಸ್ ಚೆನ್ನಾಗಿ ನಡೆಯುತ್ತಿದೆಯಾ? ಕೆಳ ಹಂತದ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರಾ? ಎಂದು ಹೇಗೆ ತಿಳಿದುಕೊಳ್ಳುತ್ತಿದ್ದೀರಿ? ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಹಾಕಿದ್ದಾರೆ.

ಕನಕಪುರ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಸರ್ಕಾರದ ಮರ್ಯಾದೆಯನ್ನ ಅಧಿಕಾರಿಗಳೇ ಕಳೆಯುತ್ತಿದ್ದಾರೆ -ಜಿಲ್ಲಾಧಿಕಾರಿಗೆ ತಿಳಿಹೇಳಿದ ಡಿ ಕೆ ಶಿವಕುಮಾರ್
ಕನಕಪುರ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಸರ್ಕಾರದ ಮರ್ಯಾದೆಯನ್ನ ಅಧಿಕಾರಿಗಳೇ ಕಳೆಯುತ್ತಿದ್ದೀರಿ -ಜಿಲ್ಲಾಧಿಕಾರಿಗೆ ತಿಳಿಹೇಳಿದ ಡಿ ಕೆ ಶಿವಕುಮಾರ್
TV9 Web
| Edited By: ಸಾಧು ಶ್ರೀನಾಥ್​|

Updated on:Jul 23, 2022 | 5:15 PM

Share

ರಾಮನಗರ: ಕನಕಪುರದ ನಗರಸಭೆ ಸಭಾಂಗಣದಲ್ಲಿ ಇಂದು ತಾಲೂಕು ಕೆಡಿಪಿ ಸಭೆ ನಡೆದಿದ್ದು (KDP meeting), ನಮ್ಮ ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ತಾನೂ ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ/ ಇಂಗಿತವನ್ನು ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರು ಸನ್ಮಾನ ಮಾಡುವ ವೇಳೆ ಅವರು ಸಿಎಂ ಆಗುವ ಆಸೆ ಹೊರಹಾಕಿದ್ದಾರೆ. ನೀವೆಲ್ಲ ಒಟ್ಟಿಗೆ ಇದ್ರೆನೇ ನಾನು ಮುಖ್ಯಮಂತ್ರಿ ಆಗೋದು ಎಂದು ಹೇಳಿದ್ದಾರೆ.

ಜಮೀರ್​ ವಿಷಯ ಶಿಸ್ತು ಸಮಿತಿಗೆ:

ಕಾಂಗ್ರೆಸ್​ ಶಾಸಕ. ಮಾಜಿ ಸಿ ಎಂ ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಜಮೀರ್ ಅಹಮದ್​ ಖಾನ್​ ಅವರು ಪದೇ ಪದೇ ಸಿದ್ದು ಸಿಎಂ ಆಗಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಿದ ಡಿ ಕೆ ಶಿವಕುಮಾರ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಯಾರೇ ಕೊಟ್ಟರು ಕ್ರಮ ತೆಗೆದುಕೊಳ್ಳಲಾಗುತ್ತದೆ. ಜಮೀರ್​ ವಿಷಯವನ್ನೂ ಶಿಸ್ತು ಕ್ರಮ ಸಮಿತಿಗೆ ತಿಳಿಸುತ್ತೇನೆ. ಕಾಂಗ್ರೆಸ್ ಶಿಸ್ತು ಕ್ರಮ ಸಮಿತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಇಸ್ಪಿಟ್ ತಡೆಗಟ್ಟಿದ್ರೆ ಪೊಲೀಸರಿಗೆ ರೋಲ್ ಕಾಲ್ ಕಡಿಮೆ ಆಗುತ್ತೆ:

ಎಷ್ಟು ‌ಕ್ಲಬ್ ಗಳು ಇವೆ. ಎಷ್ಟು ‌ಹಣ ಪಡೆದು ಕ್ಲಬ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದೀರಿ. ನಮ್ಮ ಊರಿನಲ್ಲಿಯೇ ಕ್ಲಬ್ ನಡೆಯುತ್ತಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಟಿ ಟಿ ಕೃಷ್ಣಗೆ ಡಿಕೆ ಶಿವಕುಮಾರ್ ಪ್ರಶ್ನೆ ಹಾಕಿದರು. ಇಸ್ಪಿಟ್ ಹಲವು ಕಡೆ ನಡೆಯುತ್ತಿದೆ. ಅದನ್ನು ತಡೆಗಟ್ಟಿ ಎಂದೂ ಕನಕಪುರ ಸಿಪಿಐ ಗೆ ಅವರು ಸೂಚನೆ ನೀಡಿದರು. ಆದರೆ ಅದನ್ನು ತಡೆಗಟ್ಟಿದ್ರೆ ಪೊಲೀಸರಿಗೆ ರೋಲ್ ಕಾಲ್ ಕಡಿಮೆ ಆಗುತ್ತೆ ಎಂದೂ ಡಿಕೆಶಿ ಆಕ್ರೋಶ ಹೊರಹಾಕಿದರು.

ಕನಕಪುರ ನಗರಸಭೆ ಪೌರಾಯುಕ್ತೆ ಶುಭಾಗೆ ಪ್ರಶ್ನೆ

ತಾಲೂಕು ಕೆಡಿಪಿ ಸಭೆ ವೇಳೆ ಕನಕಪುರ ನಗರಸಭೆ ಪೌರಾಯುಕ್ತೆ ಶುಭಾಗೆ ಯಾವ ಬ್ಯಾಚ್ ಅಮ್ಮ ನೀನು? ನಿಮ್ಮ ಆಫೀಸ್ ಚೆನ್ನಾಗಿ ನಡೆಯುತ್ತಿದೆಯಾ? ಕೆಳ ಹಂತದ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರಾ? ಎಂದು ಹೇಗೆ ತಿಳಿದುಕೊಳ್ಳುತ್ತಿದ್ದೀರಿ? ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಹಾಕಿದ್ದಾರೆ.

ಸಾರ್ವಜನಿಕರಿಗೆ ನಿಮ್ಮ ನಗರಸಭೆ ಸಿಬ್ಬಂದಿ ಸಾಕಷ್ಟು ತೊಂದರೆ‌ ಕೊಡುತ್ತಿದ್ದಾರೆ. ಲಂಚ ಕೇಳಿದ್ರೆ ಇಂತಹ ನಂಬರ್ ಗೆ ಕಾಲ್ ಮಾಡಿ ಎಂದು ನಗರಸಭೆ ಮುಂಭಾಗ ಮತ್ತು ಪ್ರತಿ ವಾರ್ಡ್ ನಲ್ಲೂ ಬೋರ್ಡ್ ಹಾಕಿಬಿಡಿ ಎಂದೂ ನಗರಸಭೆ ಪೌರಾಯುಕ್ತೆ ಶುಭಾಗೆ ಡಿಕೆಶಿ ಸೂಚನೆ ನೀಡಿದರು.

ಸಭೆಗೆ ಚಪ್ಪಲಿ ಧರಿಸಿ ಬಂದಿದ್ದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಗೆ ಶಿವಕುಮಾರ್ ಅವರು ಒಂದು‌ ಜೊತೆ ಶೂ ಕೊಡಿಸುವಂತೆ ಸೂಚನೆ ನೀಡಿದ ಪ್ರಸಂಗವೂ ನಡೆಯಿತು. ನೀನೇನೋ ಹಳ್ಳಿಗೆ ಹೋಗುತ್ತಿಯಾ? ಅಧಿಕಾರಿ ಅಂದರೇ ಹೇಗೆ ಇರಬೇಕು‌? ನೀನೆ ರೋಗಿ ತರಾ ಇದೀಯಾ… ಎಂದು ಸಹಾಯಕ ನಿರ್ದೇಶಕ ಶ್ರೀನಿವಾಸ್ ಗೌಡಗೆ ಅವರು ತರಾಟೆ ತೆಗೆದುಕೊಂಡರು.

ಕೆಲಸದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್ ಮಾಡಿ ಎಂದು ಡಿಕೆಶಿ:

ಎಷ್ಟು ಜನ ಅಧಿಕಾರಿಗಳಿಗೆ ಕನಕಪುರದಲ್ಲಿ ಮನೆ ಇದೆ – ಬೆಂಗಳೂರಿನಿಂದ ಎಷ್ಟು ಜನ ಬರುತ್ತಿದ್ದೀರಿ ಕೈ ಎತ್ತಿ ಎಂದು ಅಧಿಕಾರಿಗಳಿಗೆ ಪ್ರಶ್ನೆ ಹಾಕಿದ ಡಿಕೆಶಿ, ತಾಲೂಕು ಆಫೀಸರ್ ತಾಲೂಕಿನಲ್ಲಿ ಇಲ್ಲ ಅಂದರೆ ಯಾಕೆ ಇಲ್ಲಿಗೆ ಬಂದಿದ್ದೀರಿ? ಎಂದು ತರಾಟೆಗೆ ತೆಗೆದುಕೊಳ್ಳುತ್ತಾ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಅವರು ಸೂಚನೆ ನೀಡಿದರು. ಇಲ್ಲಿ ಕೆಲಸ ಮಾಡುವವರು ಇಲ್ಲಿಯೇ ಇರಿ. ಇಲ್ಲಾಂದ್ರೆ ಬೆಂಗಳೂರಿಗೆ ಹೋಗಿ. ಕೆಲಸ ಮಾಡುವ ಇಷ್ಟವಿದ್ದರೆ ಇಲ್ಲೇ ಇರಿ. ನಾನು ಯಾರನ್ನೂ ‌ಇಲ್ಲಿ ಹಾಕಿಸಿಕೊಂಡಿಲ್ಲ ಎಂದು ಬೆಂಗಳೂರಿನಿಂದ ಕನಕಪುರಕ್ಕೆ ಬರುತ್ತಿರೋ ಅಧಿಕಾರಿಗಳ ವಿರುದ್ದ ಡಿಕೆ ಶಿ ಗರಂ ಆದರು. ಜೊತೆಗೆ, ಎಷ್ಟೊತ್ತಿಗೆ ಕೆಲಸಕ್ಕೆ ಬರುತ್ತಿದ್ದಾರೆ ಎಂದು ಮಾಹಿತಿ ಕೊಡಿ. ಕೆಲಸದ ಬಗ್ಗೆ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್ ರೆಡಿ ಮಾಡಿ ಎಂದೂ ಎಸಿ ಮಂಜುನಾಥ್ ಗೆ ಅವರು ಸೂಚನೆ ನೀಡಿದರು.

ಸಭೆಯಲ್ಲೇ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಗೆ ಕರೆ ಮಾಡಿ ಮಾಹಿತಿ ನೀಡಿದ ಡಿಕೆ ಶಿವಕುಮಾರ್ ಅಧಿಕಾರಿಗಳ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚನೆ ನೀಡಿದರು.

ರೆವಿನ್ಯೂ ಅಧಿಕಾರಿಗಳನ್ನ ಸಾಲಾಗಿ ನಿಲ್ಲಿಸಿ ತರಾಟೆಗೆ:

ಇನ್ನು ಕೆಡಿಪಿ ಮೀಟಿಂಗ್ ನಲ್ಲಿ ರೆವಿನ್ಯೂ ಅಧಿಕಾರಿಗಳನ್ನೂ ಅವರು ತರಾಟೆಗೆ ತೆಗೆದುಕೊಂಡರು. ಸರಿಯಾದ ಸಮಯಕ್ಕೆ ಖಾತೆ, ವೃದ್ಧಾಪ್ಯದ ದುಡ್ಡು, ಪೋಡಿ ಆಗಿಲ್ಲವೆಂದು ಅರಿತ ಶಿವಕುಮಾರ್ ಅವರು ಒಂದೊಂದು ಖಾತೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದೀರಾ ಎಂದು ರೆವಿನ್ಯೂ ಅಧಿಕಾರಿಗಳನ್ನ ಸಾಲಾಗಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು. ಒಂದು ಬೋರ್ಡ್ ಹಾಕಿಬಿಡಿ ಇಂಥದಕ್ಕೆ ಇಷ್ಟು ರೇಟ್ ಅಂತಾ ಫಿಕ್ಸ್ ಮಾಡಿಬಿಡಿ. ಹೋಟೆಲ್ ನಲ್ಲಿ ಊಟ ತಿಂಡಿಗೆ ಇಷ್ಟು ಅಂತ ರೇಟ್ ಮಾಡ್ತಾರಲ್ಲಾ ಹಾಗೆ. ನಾನು ನಿಮ್ಮನ್ನ ಏನೂ ಕೇಳಲ್ಲ ಅಂತ ಇಷ್ಟು ಮಟ್ಟಕ್ಕೆ ಆಗಿದ್ಯಾ? ನಾನು ಏನೋ ಬೆಂಗಳೂರು ಕಡೆ ಸ್ವಲ್ಪ ಬ್ಯುಸಿ ಆದ್ರೆ ರೈತರನ್ನ ಈ ಮಟ್ಟಕ್ಕೆ ಅಲೆದಾಡಿಸುವುದಾ? ಕಚೇರಿ ಮುಂದೆ ಇನ್ಮುಂದೆ ಬೋರ್ಡ್ ಹಾಕಿ, ಎಲ್ಲಾ ಅಧಿಕಾರಿಗಳ ನಂಬರ್ ಜೊತೆಗೆ ನನ್ನ ನಂಬರ್ ಸಹ ಹಾಕು ಎಂದು ಶಿವಕುಮಾರ್​ ಸೂಚಿಸಿದರು.

ನಿಮ್ಮಿಂದ ಆಗುತ್ತಿರುವ ವಸೂಲಿ, ನಿಮ್ಮಿಂದ ಆಗುತ್ತಿರುವ ಕಿರುಕುಳ ಯಾರಿಂದಲೂ ಆಗುತ್ತಿಲ್ಲ. ಎಸಿಬಿ ಅಧಿಕಾರಿಗಳು ಕೂಡ ಕನಕಪುರಕ್ಕೆ ಬಂದು ಹೋಗಿದ್ದಾರೆ. ನಾನು ಕೇಳುತ್ತಿಲ್ಲ ಎಂದು ಹೀಗೆ ಆಡುತ್ತಿದ್ದೀರಾ? ನಮಗೂ ಮಾಹಿತಿ ಬಂದಿದೆ. ಸರಿಯಾಗಿ ಕೆಲಸ ಮಾಡಿ ಇಲ್ಲವೇ ರಜೆ ಹಾಕಿ ನಿಮ್ಮ ಊರಿಗೆ ತೆರಳಿ ಎಂದು ಆರ್ ಐ (ಕಂದಾಯ ನಿರೀಕ್ಷರಿಗೆ) ವಿರುದ್ದ ಸಭೆಯಲ್ಲಿ‌ ಡಿಕೆ ಶಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಈ ಜಿಲ್ಲಾ ಉಸ್ತುವಾರಿ ಸಚಿವರ ನಂಬರ್ ಸಹ ಹಾಕಿ. ಅದೇನೋ ಕ್ಲೀನ್ ಮಾಡಿಬಿಡ್ತೀನಿ ಅಂತ ಬಂದವ್ರೆ ಅವರು ಪಾಪ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಗೆ ಕನಕಪುರ ಕೆಡಿಪಿ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

ಸರ್ವೆ ಇಲಾಖೆ ಎಡಿಎಲ್ ಆರ್ ವಿರುದ್ದವೂ ಡಿಕೆ ಶಿ ಗರಂ ಆದರು. ಜೋರಾಗಿ ಮಾತನಾಡು. ದುಡ್ಡು ಇಸ್ಕೊಳ್ಳುವಾಗ ಜೋರಾಗಿ ಮಾತಾಡುತ್ತಿಯಾ. ಜೋರಾಗಿ ಮಾತಾಡು ಎಂದು ಎಡಿಎಲ್ ಆರ್ ಗಂಗಾಧರ್ ಗೆ ಕೆಡಿಪಿ ಸಭೆಯಲ್ಲಿ ಡಿಕೆ ಶಿ ಸೂಚನೆ ನೀಡಿದರು. ನೋಡಯ್ಯ 66 ಅರ್ಜಿ ಬಂದಿದೆ ಎಂದು ಹೇಳುತ್ತಿಯಾ. ಒಟ್ಟು 69 ಬಂದಿದೆ. ಇವರೆಲ್ಲ ಎಷ್ಟು ದುಡ್ಡು ಕೊಡಬೇಕು. ಎಕರೆಗೆ ಎಷ್ಟು ದುಡ್ಡು ಕೊಡಬೇಕು ಎಂದು ಪೋಡಿ ಮಾಡಲು ಹಣ ಪಡೆಯುತ್ತಿರುವುದಕ್ಕೆ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದರು.

ಪೊಡಿ ಮಾಡಲು 50 ಸಾವಿರ ರೂಪಾಯಿ ಕೊಡಬೇಕೆಂತೆ ಹೌದಾ? ನನಗೆ, ಎಂಪಿ, ಎಮ್ಎಲ್ಸಿ ಗೆ ಎಷ್ಟು ಪರ್ಸೆಂಟ್ ಹಿಡಿಯುತ್ತಿದ್ದೀರಿ ಎಂದು ಶಿವಕುಮಾರ್​ ಅಧಿಕಾರಿಗೆ ಪ್ರಶ್ನೆ ಹಾಕಿದರು.

ಈ ವೇಳೆ ನಾನು ಪ್ರಮಾಣ ಮಾಡಿ ಹೇಳುತ್ತೇನೆ… ಎಲ್ಲೂ ನಿಮ್ಮ ಹೆಸರು ಹೇಳಿಲ್ಲ. ನಿಮ್ಮ ಹೆಸರು‌ ಹೇಳಿ, ನಿಮಗೂ ಹಣ ಕೊಡಬೇಕು ಎಂದು ಹೇಳುತ್ತಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯರು ಶಾಸಕ ಡಿಕೆಶಿ ಗಮನಕ್ಕೆ ತಂದರು.

ನನಗೆ ಗೊತ್ತಿರುವ ಹಾಗೆ ಎಂಪಿ ಸುರೇಶ್ ಒಂದು‌ ರೂ ಲಂಚ ಪಡೆಯುವುದಿಲ್ಲ. ನೀವೇ ಹೇಗೋ ಗೊತ್ತಿಲ್ಲ ಎಂದು ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯ ಮುರಳಿ ಡಿಕೆಶಿಗೆ ಕಿಚಾಯಸಿದರು. ಮುರಳಿ ಹೇಳಿಕೆಗೆ ಡಿಕೆಶಿ ನಗೆಯಾಡಿದರು. ಆಗ ಸಭೆಯಲ್ಲಿ ಕೆಲ ಕಾಲ ನಗೆ ಉಕ್ಕಿತು.

Published On - 4:53 pm, Sat, 23 July 22

Follow Us
Web contact
Web contact

TV9 Kannada

Read More