Mekedatu Padayatra Day 1 Highlights: ದೊಡ್ಡಆಲಹಳ್ಳಿಯಲ್ಲಿ ಮೇಕೆದಾಟು ಪಾದಯಾತ್ರೆ; ಡಿಕೆ ಶಿವಕುಮಾರ್​ಗೆ ಭರ್ಜರಿ ಸ್ವಾಗತ

| Updated By: ಆಯೇಷಾ ಬಾನು

Updated on:Jan 10, 2022 | 6:59 AM

ಮೇಕೆದಾಟು ಪಾದಯಾತ್ರೆ: ಇಂದಿನಿಂದ 11 ದಿನ ಅಂದ್ರೆ ಜನವರಿ 19ರವರೆಗೂ ಪಾದಯಾತ್ರೆ ನಡೆಯಲಿದ್ದು, 165ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೆಜ್ಜೆ ಹಾಕಲು ಪಾದಯಾತ್ರೆ ಇದೀಗ ಆರಂಭವಾಗಿದೆ.

Mekedatu Padayatra Day 1 Highlights: ದೊಡ್ಡಆಲಹಳ್ಳಿಯಲ್ಲಿ ಮೇಕೆದಾಟು ಪಾದಯಾತ್ರೆ; ಡಿಕೆ ಶಿವಕುಮಾರ್​ಗೆ ಭರ್ಜರಿ ಸ್ವಾಗತ
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ

ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಇಂದಿನಿಂದ (ಜ.9) ಪಾದಯಾತ್ರೆ ಆರಂಭ ಆಗಿದೆ. ಕನಕಪುರ ಕೋಟೆಯಿಂದ ಬೆಂಗಳೂರಿನವರೆಗೂ ಕಾಲ್ನಡಿಗೆ ಜಾಥಾ ಸಾಗಲಿದೆ. ಇಂದಿನಿಂದ 11 ದಿನ ಅಂದ್ರೆ ಜನವರಿ 19ರವರೆಗೂ ಪಾದಯಾತ್ರೆ ನಡೆಯಲಿದ್ದು, 165ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೆಜ್ಜೆ ಹಾಕಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಂ ತಯಾರಾಗಿದೆ. ಕಾಂಗ್ರೆಸ್ ಪಾದಯಾತ್ರೆ ಬಗೆಗಿನ ಮೊದಲ ದಿನದ ಅಪ್ಡೇಟ್ಸ್ ಇಲ್ಲಿದೆ.

LIVE NEWS & UPDATES

The liveblog has ended.
  • 09 Jan 2022 10:18 PM (IST)

    ಕೊವಿಡ್​ ಟೆಸ್ಟ್​ಗೆ ನಿರಾಕರಿಸಿದ ಡಿ.ಕೆ. ಶಿವಕುಮಾರ್​

    ಮೇಕೆದಾಟು‌ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತಿದೆ. ಈ ವೇಳೆ, ಕೊವಿಡ್​ ಟೆಸ್ಟ್​ ಮಾಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್​​ಗೆ ಮನವಿ ಮಾಡಲಾಗಿದೆ. ರ್ಯಾಂಡಮ್​​ ಟೆಸ್ಟ್​ ಮಾಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್​​ಗೆ ಮನವಿ ಮಾಡಲಾಗಿದೆ. ಎಡಿಸಿ ಜವರೇಗೌಡ ಹಾಗೂ ಡಿಹೆಚ್​​ಒ ನಿರಂಜನ್​​ರಿಂದ ಮನವಿ ಮಾಡಲಾಗಿದೆ. ಆದರೆ, ಆದರೆ ಕೊವಿಡ್​ ಟೆಸ್ಟ್​ಗೆ ಡಿ.ಕೆ.ಶಿವಕುಮಾರ್​ ನಿರಾಕರಿಸಿದ್ದಾರೆ.

    ಈ ವೇಳೆ ಅಧಿಕಾರಿಗಳಿಗೆ ಡಿಕೆಶಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಐ ಆ್ಯಮ್​ ಫಿಟ್​ ಆ್ಯಂಡ್​ ಫೈನ್​. ನನಗೇ ಸಲಹೆ ಕೊಡಲು ಬಂದಿದ್ದೀರಾ? ನಾನೊಬ್ಬ ಜನಪ್ರತಿನಿಧಿ ನನಗೇ ಬ್ಲ್ಯಾಕ್​​ಮೇಲ್​ ಮಾಡ್ತಿದ್ದೀರಾ? ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಹೇಳಿ. ಬಚ್ಚಾಗಳ ಹತ್ತಿರ ಆಟ ಆಡಲು ಹೋಗಿ ಹೇಳಿ. ನನಗೆ ಏನಾಗಿದೆ ಎಂದು ಟೆಸ್ಟ್​ ಮಾಡಲು ಬಂದಿದ್ದೀರಾ? ಅಧಿಕಾರಿಗಳಿಗೆ ನಿಮ್ಮ ಹುದ್ದೆ ಯಾವುದು ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ನಾನು ಟೆಸ್ಟ್​ ಮಾಡಿಸಿಕೊಳ್ಳಲ್ಲ ಎಂದು ವಾಪಸ್​ ಕಳಿಸಿದ್ದಾರೆ.

  • 09 Jan 2022 07:11 PM (IST)

    ದೊಡ್ಡಆಲಹಳ್ಳಿ ತಲುಪಿದ ಪಾದಯಾತ್ರೆ; ಶಿವಕುಮಾರ್ ಸ್ವಾಗತಕ್ಕೆ ಪಟಾಕಿ ಹಚ್ಚಿ ಸಂಭ್ರಮ

    ಮೇಕೆದಾಟು‌ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ದೊಡ್ಡಆಲದಹಳ್ಳಿ ತಲುಪಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಆಲದಹಳ್ಳಿಯಲ್ಲಿ ಡಿ.ಕೆ. ಶಿವಕುಮಾರ್​​​ಗೆ ಭರ್ಜರಿ ಸ್ವಾಗತ ದೊರಕಿದೆ. ಶಿವಕುಮಾರ್ ಸ್ವಾಗತಕ್ಕೆ ಪಟಾಕಿ ಹಚ್ಚಿ ಸಂಭ್ರಮ ವ್ಯಕ್ತವಾಗಿದೆ. ರಾಕೆಟ್ ಪಟಾಕಿ‌ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ದೊಡ್ಡ ಆಲಹಳ್ಳಿಯಲ್ಲಿಯ ಮುಖ್ಯ ರಸ್ತೆಗಳೆಲ್ಲಾ ಬಣ್ಣ ಬಣ್ಣದ ಲೈಟ್ಸ್ ಹಾಕಲಾಗಿದೆ. ಝಗಮಗಿಸೋ ಲೈಟ್ಸ್ ನಡುವೆ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ಸಾಗಿಬಂದಿದೆ. ಲೈಟ್ಸ್, ಬ್ಯಾನರ್,‌ ಫ್ಲೆಕ್ಸ್, ಕಟೌಟ್ ನಿಂದ ದೊಡ್ಡಆಲದಹಳ್ಳಿಯ ಸ್ಕೂಲ್ ಸರ್ಕಲ್ ತುಂಬಿದೆ.

  • 09 Jan 2022 06:08 PM (IST)

    ಕಾಂಗ್ರೆಸ್​ ಪಾದಯಾತ್ರೆ ವೇಳೆ ಮಹಿಳೆಗೆ ಪೊಲೀಸ್​ ವಾಹನ ಡಿಕ್ಕಿ

    ಕಾಂಗ್ರೆಸ್​ ಪಾದಯಾತ್ರೆ ವೇಳೆ ಮಹಿಳೆಗೆ ಪೊಲೀಸ್​ ವಾಹನ ಡಿಕ್ಕಿ ಆಗಿದೆ. ಏಳಗಳ್ಳಿ ಗ್ರಾಮದ ಬಳಿ ಪೊಲೀಸ್​ ಡಿಕ್ಕಿಯಾಗಿ ಮಹಿಳೆಗೆ ಗಾಯವಾಗಿದೆ. ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • 09 Jan 2022 05:07 PM (IST)

    ಬೇಕಿದ್ರೆ ಇಲ್ಲೇ ನಮ್ಮನ್ನ ತಡೆಯಲಿ, ಇಲ್ಲೇ ಇದ್ದು ಬಿಡುತ್ತೇವೆ: ಡಿಕೆ ಶಿವಕುಮಾರ್

    ಮೇಕದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್​ ಪಾದಯಾತ್ರೆ ಕೈಗೊಂಡಿದೆ. ಪಾದಯಾತ್ರೆ ಬೆಂಗಳೂರಿಗೆ ಎಂಟ್ರಿ ಕೊಡಲು ಬಿಡಲ್ಲವೆಂಬ ಹೇಳಿಕೆ ವಿಚಾರವಾಗಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಬಿಜೆಪಿ ಮಾಡ್ತಿರುವ ಹುನ್ನಾರ. ಬೇಕಿದ್ರೆ ಇಲ್ಲೇ ನಮ್ಮನ್ನ ತಡೆಯಲಿ, ಇಲ್ಲೇ ಇದ್ದು ಬಿಡುತ್ತೇವೆ. ಟೆಂಟ್ ಎಲ್ಲಾ ಹಾಕಿಸಿದ್ದೇವೆ ಇಲ್ಲೇ ಆರಾಮಾಗಿ ಇದ್ದುಬಿಡ್ತೇವೆ ಎಂದು ಹೇಳಿದ್ದಾರೆ.

    ವಿರಾಮದ ಬಳಿಕ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭವಾಗಿದೆ. ಕಾರ್ಯಕರ್ತರ ಜೊತೆಗೆಡಿಕೆಶಿ ಹೆಜ್ಜೆ ಹಾಕಿದ್ದಾರೆ. ಮಧ್ಯಾಹ್ನದ ಊಟ ಮತ್ತು ವಿರಾಮದ ಬಳಿಕ ಪಾದಯಾತ್ರೆ ಮುಂದುವರೆದಿದೆ. ಹೆಗ್ಗನೂರಿನಿಂದ ದೊಡ್ಡ ಆಲಹಳ್ಳಿ ಕಡೆಗೆ ಕಾಂಗ್ರೆಸ್ ಪಾದಯಾತ್ರೆ ಹೊರಟಿದೆ.

  • 09 Jan 2022 04:56 PM (IST)

    ವಿಶ್ರಾಂತಿ ಬಳಿಕ ಹೆಗ್ಗನೂರಿನಿಂದ ಮತ್ತೆ ಹೊರಟ ಪಾದಯಾತ್ರೆ

    ವಿಶ್ರಾಂತಿ ಬಳಿಕ ಮೇಕೆದಾಟು ಪಾದಯಾತ್ರೆ ಹೆಗ್ಗನೂರಿನಿಂದ ಆರಂಭಗೊಂಡಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆಗ್ಗನೂರು ಎಂಬಲ್ಲಿಂದ ಪಾದಯಾತ್ರೆ ಮತ್ತೆ ಆರಂಭ ಆಗಿದೆ. ವಿಶ್ರಾಂತಿ ಬಳಿಕ ಕಾಂಗ್ರೆಸ್‌ ಪಾದಯಾತ್ರೆ ಮುಂದುವರಿದಿದೆ. ಈ ಮಧ್ಯೆ, ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿನತ್ತ ತೆರಳಿದ್ದಾರೆ.

  • 09 Jan 2022 04:32 PM (IST)

    ಪಾದಯಾತ್ರೆ ಆಗಮಿಸಿದ ಕಾರ್ಯಕರ್ತರಿಗೆ ಸಕಲ ಸೌಲಭ್ಯ

    ಪಾದಯಾತ್ರೆ ಆಗಮಿಸಿದ ಕಾರ್ಯಕರ್ತರಿಗೆ ಸಕಲ ಸೌಲಭ್ಯ ಒದಗಿಸಲಾಗಿದೆ. ಕಾರ್ಯಕರ್ತರಿಗೆ ಊಟ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮನಗರದ ಹೆಗ್ಗನೂರು ಬಳಿ 10 ಎಕರೆಯಲ್ಲಿ ಊಟ ವ್ಯವಸ್ಥೆ ಮಾಡಲಾಗಿದೆ. ಇನ್ನು  ಕೆಲವೇ ನಿಮಿಷದಲ್ಲಿ ಪಾದಯಾತ್ರೆ ಆರಂಭಗಾಗಲಿದೆ.ಸಂಜೆ ವೇಳೆಗೆ ಡಿಕೆ ಶಿವಕುಮಾರ್​ ಹುಟ್ಟೂರು ದೊಡ್ಡ ಆಲಹಳ್ಳಿಗೆ ಪಾದಯಾತ್ರೆ ತಲುಪಲಿದೆ.

  • 09 Jan 2022 04:12 PM (IST)

    ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ; ಸಚಿವ ಕಾರಜೋಳ ಮನವಿ

    ವಿಪಕ್ಷ ನಾಯಕ ಸಿದ್ದರಾಮಯ್ಯ ಜ್ವರದಿಂದ ಬಳಲುತ್ತಿದ್ದಾರೆ. ನನಗೆ  ಕಳವಳವಾಗುತ್ತಿದೆ. ಸಿದ್ದರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಆರೋಗ್ಯ ರಕ್ಷಣೆ ಮಹತ್ವ ಅಂತ ಸಚಿವ ಕಾರಜೋಳ ಟ್ವೀಟ್ ಮಾಡಿದ್ದಾರೆ.

  • 09 Jan 2022 03:04 PM (IST)

    ಎಗ್ಗನೂರು ತಲುಪಿದ ಡಿಕೆ ಶಿವಕುಮಾರ್

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಗ್ಗನೂರು ತಲುಪಿದ್ದಾರೆ. ನಾಯಕರು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ಬಳಿಕ ವಿಶ್ರಾಂತಿಗೆ ತೆರಳುತ್ತಾರೆ. ವಿಶ್ರಾಂತಿ‌ ಬಳಿಕ‌ ಮಧ್ಯಾಹ್ನದ ಊಟ ಮಾಡಲಿದ್ದಾರೆ. ಊಟದ ಬಳಿಕ ಮತ್ತೆ ಪಾದಯಾತ್ರೆ ಸಾಗಲಿದೆ.

  • 09 Jan 2022 02:55 PM (IST)

    ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆದ ಸಿದ್ದರಾಮಯ್ಯ

    ಅನಾರೋಗ್ಯ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

  • 09 Jan 2022 02:42 PM (IST)

    ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಬೊಮ್ಮಾಯಿ ಚರ್ಚೆ

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್​ ಪಾದಯಾತ್ರೆ ಆರಂಭಿಸಿದೆ. ಈ ಕುರಿತು ಚರ್ಚೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ.  ನೈಜ ವಿಚಾರ ಜನರ ಮುಂದೆ ತನ್ನಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ. ಜನರಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಪರಿಣಾಮವನ್ನ ತಿಳಿಸಿ. ಕೊರೊನಾ ಹೆಚ್ಚುತ್ತಿರುವ ಬಗ್ಗೆ ಹೆಚ್ಚು ತಿಳಿಸುವಂತೆ ಸೂಚನೆ ನೀಡಿದ್ದಾರೆ. ಆ ವಾತಾವರಣ ಸೃಷ್ಟಿ ಆದ್ರೆ ಪಾದಯಾತ್ರೆ ತಡೆಯಬಹುದು. ಜನ ನಮ್ಮನ್ನ ಪ್ರಶ್ನಿಸ್ತಿರುವುದನ್ನ ಹೇಳಿ ಅಂತ ಬೊಮ್ಮಾಯಿ ತಿಳಿಸಿದ್ದಾರೆ.

  • 09 Jan 2022 02:24 PM (IST)

    ಕಾಂಗ್ರೆಸ್​ನ ಪಾದಯಾತ್ರೆ ಕೇವಲ ರಾಜಕೀಯ ಉದ್ದೇಶಕ್ಕಾಗಿ; ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

    ಕಾಂಗ್ರೆಸ್​ನ ಪಾದಯಾತ್ರೆ ಕೇವಲ ರಾಜಕೀಯ ಉದ್ದೇಶಕ್ಕಾಗಿ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠವನ್ನು ಕಲಿಸುತ್ತಾರೆ ಅಂತ ಹುಬ್ಬಳ್ಳಿಯಲ್ಲಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.

  • 09 Jan 2022 02:20 PM (IST)

    ಕೊರೊನಾ ಪ್ರಕರಣದ ಲೆಕ್ಕವೇ ಭೋಗಸ್; ಮಾಜಿ ಸಂಸದ ಧೃವನಾರಾಯಣ್

    ರಾಜ್ಯದಲ್ಲಿರುವ ಕೊರೊನಾ ಪ್ರಕರಣದ ಲೆಕ್ಕವೇ ಭೋಗಸ್. ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ಕೊರೊನಾ ಕೇಸ್ ಜಾಸ್ತಿ ಮಾಡಿದ್ದಾರೆ. ನಮ್ಮನ್ನ ಹತ್ತಿಕ್ಕಲು ನೈಟ್ ಕರ್ಫ್ಯೂ ಹೇರಿಕೆ ಮಾಡಿದ್ದಾರೆ. ದಿನಕ್ಕೆ 8 ಸಾವಿರ ಕೇಸ್ ಬಂದರೂ ಕೂಡ ತೊಂದರೆ ಏನಿಲ್ಲ ಅಂತ  ಮಾಜಿ ಸಂಸದ ಧೃವನಾರಾಯಣ್ ಹೇಳಿದ್ದಾರೆ.

  • 09 Jan 2022 02:19 PM (IST)

    ಪಾದಯಾತ್ರೆ ಯಶಸ್ವಿಯಾಗಿ ಸಾಗಿ ಬಂದಿದೆ; ಕುಸುಮ ಹನುಮಂತ ರಾಯಪ್ಪ ಹೇಳಿಕೆ

    ಉದ್ಘಾಟನಾ ಪಾದಯಾತ್ರೆ ಯಶಸ್ವಿಯಾಗಿ ಸಾಗಿ ಬಂದಿದೆ. ಮೇಕೆದಾಟು ಆಗುವವರೆಗೂ ಹೋರಾಟ ಮುಂದುವರೆಯುತ್ತೆ. ನಾವು ಪಾದಯಾತ್ರೆಯ ಬಗ್ಗೆ ಮೊದಲೇ ಅನೌನ್ಸ್ ಮಾಡಿದ್ವಿ. ಉದ್ದೇಶಪೂರ್ವಕವಾಗಿ ವೀಕೆಂಡ್ ಕರ್ಫ್ಯೂ ಹೇರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡ ಜನ ಸೇರಿಸಿ ಸಮಾವೇಶ ಮಾಡ್ತಿದೆ ಅಂತ ಎಗ್ಗನೂರು ಬಳಿ ಕುಸುಮ ಹನುಮಂತ ರಾಯಪ್ಪ ಹೇಳಿಕೆ ನೀಡಿದ್ದಾರೆ.

  • 09 Jan 2022 01:58 PM (IST)

    ಹೆಗ್ಗನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ

    ಜ್ವರದಿಂದ ಬಳಲುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕನಕಪುರ ತಾಲೂಕಿನ ಹೆಗ್ಗನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  • 09 Jan 2022 01:36 PM (IST)

    ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಅಲ್ಲ.. ಕಾಂಗ್ರೆಸ್​ನ ಪಶ್ಚಾತಾಪದ ಯಾತ್ರೆ -ಸಚಿವ ಅಶ್ವಥ್ ನಾರಾಯಣ್

    ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಅಲ್ಲ. ಕಾಂಗ್ರೆಸ್​ನ ಪಶ್ಚಾತಾಪದ ಯಾತ್ರೆ. ಅವರಿಗೆ ದೇಶ ಜನ ಯಾವುದು ಬೇಕಾಗಿಲ್ಲ ಅಧಿಕಾರ ಮಾತ್ರ ಬೇಕು. ಮತ ಬ್ಯಾಂಕ್ ಆಗಿ ಮೇಕೆದಾಟು ಪಾದಯಾತ್ರೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ,ಬಿಜೆಪಿಗೆ ಕಾಂಗ್ರೆಸ್ ಭಯವಿಲ್ಲ. ನಾವು ಅವರ ವಿರುದ್ಧ ರಾಜಕೀಯವಾಗಿ ಹೋರಾಟವನ್ನು ಮಾಡುತ್ತೇವೆ. ನಮ್ಮನ್ನು ಅರೆಸ್ಟ್ ಮಾಡಲಿ ಅರೆಸ್ಟ್ ಮಾಡಲಿ ಎಂದು ಕಾದು ಕುಳಿತಿದ್ದಾರೆ. ನಾವು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.

  • 09 Jan 2022 01:31 PM (IST)

    ಹೆಗ್ಗನೂರು ತಲುಪಿದ ಕಾಂಗ್ರೆಸ್‌ನ ಪಾದಯಾತ್ರೆ

    ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೆಗ್ಗನೂರುಗೆ ಕಾಂಗ್ರೆಸ್‌ನ ಪಾದಯಾತ್ರೆ ತಲುಪಿದೆ. ಹೆಗ್ಗನೂರಲ್ಲಿ ಭೋಜನ ಬಳಿಕ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಸಿದ್ದರಾಮಯ್ಯ ಜತೆ ಸೆಲ್ಫಿಗಾಗಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ.

  • 09 Jan 2022 01:29 PM (IST)

    ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಬೇಸಿಕ್ ಚೆಕಪ್

    ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಬೇಸಿಕ್ ಚೆಕಪ್​ಗೆ ಕನಕ‌ಪುರ ನರ್ಸಿಂಗ್ ಕಾಲೇಜಿನ ವೈದ್ಯರು ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಏನಾದ್ರೂ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ಪ್ರಥಮ ಚಿಕಿತ್ಸೆಗೆ ಸಿದ್ಧತೆ ನಡೆದಿದೆ. ಪೆಂಡಾಲ್ ಹಾಕಿ 80‌ ನೆಲ ಹಾಸಿಗೆ ಹಾಕಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ವೃದ್ಧರು ಭಾಗವಹಿಸಿರುವ ಹಿನ್ನೆಲೆ ಈ ಕ್ರಮಕ್ಕೆ ಸಿದ್ಧತೆ ನಡೆದಿದೆ.

  • 09 Jan 2022 01:25 PM (IST)

    ಪಾದಯಾತ್ರೆ ತಡೆಯದೆ ಮತ್ತೊಂದು ಪ್ಲ್ಯಾನ್​ಗೆ ಮುಂದಾದ ಬಿಜೆಪಿ

    ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಹಿನ್ನೆಲೆ ಪಾದಯಾತ್ರೆ ತಡೆಯುವುದರಿಂದ ಬಿಜೆಪಿಗೆ ಒಳ್ಳೆಯದಲ್ಲ. ಹೀಗಾಗಿ ಪಾದಯಾತ್ರೆ ತಡೆಯದೆ ಮತ್ತೊಂದು ಪ್ಲ್ಯಾನ್​ಗೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಬಿಜೆಪಿ ಮುಂದಾಗಿದೆ. ಮೇಕೆದಾಟು ಯೋಜನೆ ಮಾಡಲು ಸರ್ಕಾರದ ಪ್ರಯತ್ನ ದಾಖಲೆ ಇಟ್ಟುಕೊಂಡು ಜನಾಭಿಪ್ರಾಯ ರೂಪಿಸಲು ತೀರ್ಮಾನ ಮಾಡಿದೆ. ಯೋಜನೆ ಸಂಬಂಧ ರಾಜ್ಯ ಸರ್ಕಾರ ಏನು ಮಾಡಿದೆ. ಸರ್ಕಾರದ ಕೆಲಸ ಜನರ ಮುಂದಿಡಲು ತೀರ್ಮಾನಿಸಿದೆ.

  • 09 Jan 2022 01:17 PM (IST)

    ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರ ನಿರ್ಧಾರ

    ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ಸರ್ಕಾರ ನಿರ್ಧಾರ ಮಾಡಿದ್ದು ಕಾನೂನು ಪ್ರಕಾರ ಮಾತ್ರ ಕ್ರಮ ಜರುಗಿಸುವುದಕ್ಕೆ ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

  • 09 Jan 2022 12:58 PM (IST)

    ಸಿಎಂ ನೇತೃತ್ವದ ಸಚಿವರ ಸಭೆ ಅಂತ್ಯ

    ಕೊವಿಡ್ ನಿಯಮಗಳನ್ನ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದೆ. ಸಚಿವರ ಜತೆ ಸೇರಿ ನಡೆಸಿದ ಸಭೆ ಇದೀಗ ಅಂತ್ಯವಾಗಿದೆ.

  • 09 Jan 2022 12:50 PM (IST)

    ಮೇಕೆದಾಟು ಪಾದಯಾತ್ರೆ ವೇಳೆ ಎಡವಿಬಿದ್ದು ವೃದ್ಧೆಗೆ ಗಾಯ

    ರಾಮನಗರ ಜಿಲ್ಲೆಯ ಸಂಗಮದಿಂದ ಪಾದಯಾತ್ರೆ ಹೊರಟಿದೆ. ಮೇಕೆದಾಟು ಪಾದಯಾತ್ರೆ ವೇಳೆ ಎಡವಿಬಿದ್ದು ವೃದ್ಧೆಗೆ ಗಾಯವಾಗಿದೆ.

  • 09 Jan 2022 12:49 PM (IST)

    ಮೇಕೆದಾಟು ಬೆಂಬಲಿಸಿ ವಾಟಾಳ್ ಪ್ರತಿಭಟನೆ

    ಮೇಕೆದಾಟು ಯೋಜನೆ ಪಾದಯಾತ್ರೆಗೆ ಬೆಂಬಲಿಸಿ ವಾಟಾಳ್ ನಾಗರಾಜ್, ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳರು ನಮ್ಮ ಶತೃಗಳು‌. ಸಿಎಂ ಸ್ಟಾಲಿನ್ ಕರ್ನಾಟಕದ ಯೋಜನೆ ವಿರೋಧಿಸಬಾರದು. 22 ರಂದು ಟೌನ್ ಹಾಲ್ ನಿಂದ ಭಾರೀ ಮೆರವಣಿಗೆ ಮಾಡಲಾಗುವುದು. ಕಳಸಾಬಂಡೂರಿ ಯೋಜನೆ ಜಾರಿಗೂ ಅಂದು ಆಗ್ರಹಿಸಲಾಗುವುದು. ಕಾಂಗ್ರೆಸ್​ನವರು ಕೇಂದ್ರ ಹಾಗೂ ರಾಜ್ಯದಲ್ಲಿ ಡಿಎಂಕೆ ನೀಡಿರುವ ಬೆಂಬಲ ವಾಪಸ್ ಪಡೆಯಬೇಕು. ಕನ್ನಡ ಪರ ಸಂಘಟನೆಗಳು ಈ ಹಿಂದೆಯೇ ಯೋಜನೆ ಶಂಕುಸ್ಥಾಪನೆ ಮಾಡಿದ್ದೆವು. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯ ಮಾಡಬಾರದು‌. ಕಾಂಗ್ರೆಸ್​ನವರು ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅವರಿಗೆ ಹೋರಾಡುವ ನೈತಿಕತೆ ಇಲ್ಲ ಅಂತ ವಾಟಾಳ್  ಕಿಡಿಕಾರಿದ್ದಾರೆ.

  • 09 Jan 2022 12:32 PM (IST)

    ಕಾಂಗ್ರೆಸ್ ಕಾರ್ಯಕರ್ತರಿಗೆ ಮಧ್ಯಾಹ್ನದ ಊಟ ರೆಡಿ

    ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಧ್ಯಾಹ್ನದ ಊಟ ರೆಡಿಯಾಗಿದೆ. ಮುದ್ದೆ, ಅವರೇಕಾಳು ಸಾಂಬರ್, ಅನ್ನ ಸಾಂಬರ್, ರಸಮ್, ಪೂರಿ, ಹಪ್ಪಳ, ಮೊಸರನ್ನ, ಮೈಸೂರು ಪಾಕ್ ಸಿದ್ಧವಾಗಿದೆ.

  • 09 Jan 2022 12:16 PM (IST)

    ಇಕ್ಕಟ್ಟಿಗೆ ಸಿಲುಕಿದ ರಾಜ್ಯ ಬಿಜೆಪಿ ಸರ್ಕಾರ

    ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಪಾದಯಾತ್ರೆಗೆ ಅವಕಾಶ ಕೊಟ್ಟರೆ ಜನರು ಪ್ರಶ್ನಿಸ್ತಾರೆ. ಪಾದಯಾತ್ರೆಯನ್ನು ತಡೆದರೆ ರಾಜ್ಯ ಕಾಂಗ್ರೆಸ್ ನಾಯಕರು ಸಿಂಪಥಿ ಗಿಟ್ಟಿಸಿಕೊಳ್ಳುತ್ತಾರೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದಾರೆ.

  • 09 Jan 2022 12:08 PM (IST)

    ತಕ್ಷಣವೇ ಮೇಕೆದಾಟು ಯೋಜನೆ ಮಾಡಬಹುದು; ಸಚಿವ ಕೃಷ್ಣ ಭೈರೇಗೌಡ

    ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ತಕ್ಷಣವೇ ಮೇಕೆದಾಟು ಯೋಜನೆ ಮಾಡಬಹುದು ಅಂತ ಟಿವಿ9ಗೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ. ಸರ್ಕಾರಕ್ಕೆ ಸಹಕಾರ ನೀಡುವುದಕ್ಕೆ ಸಿದ್ಧರಿದ್ದೇವೆ. ಸರ್ಕಾರದ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತೇವೆ. ಅದು ಬಿಟ್ಟು ದೂಷಿಸುವುದು ಸರಿಯಲ್ಲ ಅಂತ ಹೇಳಿದರು.

  • 09 Jan 2022 12:02 PM (IST)

    ರಾಜ್ಯದ ದಿಕ್ಸೂಚಿ ಬದಲಾಗಲು ಪಾದಯಾತ್ರೆ ಮಾಡ್ತಿಲ್ಲ- ಸಿದ್ದರಾಮಯ್ಯ

    ರಾಜ್ಯದ ದಿಕ್ಸೂಚಿ ಬದಲಾಗಲು ಪಾದಯಾತ್ರೆ ಮಾಡ್ತಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವುದು, ವಿದ್ಯುತ್ ಉತ್ಪಾದನೆಗಾಗಿ ಯೋಜನೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಗೆ ಯಾರು ಬಂದ್ರೂ ಆಹ್ವಾನವಿದೆ ಅಂತ  ಟಿವಿ9ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜನವರಿ 19ರವರೆೆಗೂ ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತೆ. ಪಾದಯಾತ್ರೆಯಿಂದ ಏನೂ ಆಗಲ್ಲವೆಂದು ಹೇಳಿಕೆ ನೀಡಿರುವ ಬಿಜೆಪಿಗೆ, ಬಿಜೆಪಿ ಹೀಗೆ ಬಂಢತನಕ್ಕೆ ಬಿದ್ದರೆ ಏನೂ ಮಾಡಲಾಗಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

  • 09 Jan 2022 12:00 PM (IST)

    ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ತಲೆಕೆಡಿಸಿಕೊಂಡಿರುವ ಬಿಜೆಪಿ

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ.  ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿದೆ. ಬೆಂಗಳೂರಿನ ಸಿಎಂ ಸರ್ಕಾರಿ ನಿವಾಸದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

  • 09 Jan 2022 11:41 AM (IST)

    ಪಾದಯಾತ್ರೆಯಲ್ಲಿ ಕೊವಿಡ್ ರೂಲ್ಸ್ ಮಾಯಾ!

    ಕೊವಿಡ್ ನಿಯಮಗಳನ್ನ ಪಾಲಿಸಿ ಪಾದಯಾತ್ರೆ ನಡೆಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರೇ ಇದೀಗ ನಿಯಮ ಉಲ್ಲಂಘಿಸಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಾದಯಾತ್ರೆ ನಡೆಸುತ್ತಿದ್ದಾರೆ.

  • 09 Jan 2022 11:38 AM (IST)

    ಜನವರಿ 10ರಂದು ದೊಡ್ಡಆಲಹಳ್ಳಿಯಿಂದ ಪಾದಯಾತ್ರೆ ಆರಂಭ

    ನಾಳೆ (ಜ.10) ದೊಡ್ಡಆಲಹಳ್ಳಿಯಿಂದ ಪಾದಯಾತ್ರೆ ಆರಂಭವಾಗುತ್ತದೆ. ಬೆಳಗ್ಗೆ 8.30ಕ್ಕೆ ಉಪಹಾರ ಬಳಿಕ ಪಾದಯಾತ್ರೆ ಆರಂಭವಾಗುತ್ತದೆ. ಮಧ್ಯಾಹ್ನ 1ಕ್ಕೆ ಮಾದಪ್ಪನದೊಡ್ಡಿಗೆ ತಲುಪಿ, ಅಲ್ಲಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ಸಂಜೆ ವೇಳೆಗೆ ಕನಕಪುರ ನಗರಕ್ಕೆ ​ಪಾದಯಾತ್ರೆ ತಲುಪಲಿದೆ. ಅಂದು ಕನಕಪುರ ಟೌನಲ್ಲೇ ನಾಯಕರು ವಾಸ್ತವ್ಯ ಮಾಡಲಿದ್ದಾರೆ.

  • 09 Jan 2022 11:35 AM (IST)

    ಇಂದು 15 ಕಿಲೋಮೀಟರ್ ಪಾದಯಾತ್ರೆ

    ಇಂದಿನಿಂದ ಜನವರಿ 19ರವರೆಗೆ ನಡೆಯುವ ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಹೆಗ್ಗನೂರಿಗೆ ಪಾದಯಾತ್ರೆ ತಲುಪಲಿದೆ. ಹೆಗ್ಗನೂರಲ್ಲಿ ಭೋಜನ ಬಳಿಕ ನಾಯಕರು ವಿಶ್ರಾಂತಿ ಪಡೆಯುತ್ತಾರೆ. ಸಂಜೆ ವೇಳೆಗೆ ದೊಡ್ಡಆಲಹಳ್ಳಿಯನ್ನ ಪಾದಯಾತ್ರೆ ತಲುಪುತ್ತದೆ. ದೊಡ್ಡಆಲಹಳ್ಳಿಯಲ್ಲೇ ನಾಯಕರು ವಾಸ್ತವ್ಯ ಹೂಡಲಿದ್ದಾರೆ.

  • 09 Jan 2022 11:22 AM (IST)

    ಮೇಕೆದಾಟು ಪಾದಯಾತ್ರೆ ಆರಂಭ

    ವೇದಿಕೆ ಕಾರ್ಯಕ್ರಮ ಮುಕ್ತಾಯವಾಗಿ ಇದೀಗ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ.

  • 09 Jan 2022 11:20 AM (IST)

    ಗೊತ್ತಿದ್ದೂ ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದಾರೆ; ಸುಧಾಕರ್ ಅಸಮಾಧಾನ

    ರೂಪಾಂತರಿ ಒಮಿಕ್ರಾನ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಅಮೆರಿಕದಲ್ಲಿ ಒಂದು ದಿನಕ್ಕೆ 10 ಲಕ್ಷ ಕೇಸ್ ಪತ್ತೆಯಾಗ್ತಿದೆ. ಇದೆಲ್ಲಾ ಗೊತ್ತಿದ್ದೂ ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರನ್ನು ಏನೆಂದು ಕರೆಯಬೇಕೆಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

  • 09 Jan 2022 11:17 AM (IST)

    ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಮಾತಾಡಬಾರದು; ಸುಧಾಕರ್

    ರಾಜ್ಯದಲ್ಲಿ ಕೊವಿಡ್ ಪ್ರಕರಣಗಳೇ ಇಲ್ಲ ಎನ್ನುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಮಾತಾಡಬಾರದು ಅಂತ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಇವರು ರಾಜ್ಯ ಸರ್ಕಾರದ ಜೊತೆ ಸಹಕಾರ ನೀಡಬೇಕಾಗಿತ್ತು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊವಿಡ್ ಪ್ರಕರಣ ಪತ್ತೆಯಾಗಿದೆ. ಅಲ್ಲಿ ಯಾರು ಹೆಚ್ಚು ಕೊವಿಡ್ ಕೇಸ್ ಸೃಷ್ಟಿಸಿದ್ದಾರೆ ಅಂತ ಪ್ರಶ್ನಿಸಿದರು. ನಿಯಮಗಳನ್ನು ಉಲ್ಲಂಘಿಸಿ ಱಲಿ ಮಾಡುತ್ತಿರುವುದು ಸರಿಯಲ್ಲ. ರಾಜ್ಯದ ಜನರ ಆರೋಗ್ಯಕ್ಕೆ ತೊಂದರೆ ಮಾಡುತ್ತಿದ್ದಾರೆ ಅಂತ ಸಚಿವರು ಅಭಿಪ್ರಾಯಪಟ್ಟರು.

  • 09 Jan 2022 11:14 AM (IST)

    ಕಾಂಗ್ರೆಸ್‌ನ ಕಪಟ ಬೀದಿ ನಾಟಕ ಜನರು ನೋಡುತ್ತಿದ್ದಾರೆ; ಆರೋಗ್ಯ ಸಚಿವ ಡಾಕೆ ಸುಧಾಕರ್

    ಕಾಂಗ್ರೆಸ್‌ನ ಕಪಟ ಬೀದಿ ನಾಟಕ ಜನರು ನೋಡುತ್ತಿದ್ದಾರೆ ಅಂತ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ. ಈಗ ಪಾದಯಾತ್ರೆ ಮಾಡುತ್ತಿದ್ದವರು ಅಧಿಕಾರದಲ್ಲಿದರು. ಇವರು 5 ವರ್ಷ ಅಧಿಕಾರದಲ್ಲಿದ್ದು ಏನೂ ಮಾಡಲೇ ಇಲ್ಲ. ಡಿಪಿಆರ್ ಕೂಡ ಮಾಡುವುದಕ್ಕೆ ಇವರಿಂದ ಆಗಿಲ್ಲ. ಇದೊಂದು ಬೀದಿ ನಾಟಕ. ಕಾಂಗ್ರೆಸ್ ಕಾವೇರಿ ತಾಯಿಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಟ್ಟು 6 ವರ್ಷಗಳ ಕಾಲ ಆಡಳಿತದಲ್ಲಿತ್ತು. 6 ವರ್ಷದಲ್ಲಿ ಒಂದು ಡಿಪಿಆರ್ ಮಾಡುವುದಕ್ಕೆ ಆಗಲಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಇವರು ಬದ್ಧತೆ ಏನೆಂಬುದು. ಮೇಕೆದಾಟು ಯೋಜನೆ ನಮ್ಮ ಸರ್ಕಾರದಲ್ಲಿ ಆಗುತ್ತೆ. ಬೊಮ್ಮಾಯಿ ನೇತೃತ್ವದ ಸರ್ಕಾರವೇ ಯೋಜನೆ ಮಾಡುತ್ತೆ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿದರು.

  • 09 Jan 2022 11:09 AM (IST)

    ಹುಟ್ಟು ಉಚಿತ ಸಾವು ಖಚಿತ ಇದರ ಮಧ್ಯ ಏನ್ ಮಾಡ್ತೀವಿ ಅನ್ನೋದು ಬಹಳ ಮುಖ್ಯ; ಡಿಕೆ ಶಿವಕುಮಾರ್

    ಹುಟ್ಟು ಉಚಿತ ಸಾವು ಖಚಿತ ಇದರ ಮಧ್ಯ ಏನ್ ಮಾಡ್ತೀವಿ ಅನ್ನೋದು ಬಹಳ ಪ್ರಮುಖ ವಾಗಿರುತ್ತದೆ ಅಂತ ಸಂಗಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಗಾಂಧಿಜೀ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾವು ಹೋರಾಟ ಮಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ. ನಾವು ಬಡವರ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಿದ್ದೇವೆ. ಹೋರಾಟ ತೊಂದರೆ ಕೊಡಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ನಾವು ರೈತರ ಮಕ್ಕಳು. ನಮ್ಮ ಹೋರಾಟ ನಿಲ್ಲಿಸಲು ನಿಷೇಧಾಜ್ಞೆ ತಂದಿದ್ದೀರಾ. ಈ ನಡಿಗೆ ನಮ್ಮ ಪಕ್ಷಕ್ಕೆ ಅಲ್ಲ ನೀರಿಗಾಗಿ ಹೋರಾಟ. ಜನತೆಯ ಬದುಕಿಗಾಗಿ ಈ ಹೋರಾಟ. ಹರಿಯುವ ನೀರನ್ನ ಉರಿಯು ಸೂರ್ಯನ ನಿಲ್ಲಿಸಲು ಸಾಧ್ಯವಿಲ್ಲ. ಅಂದು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದೇವೆ. ಇಂದು ಬಿಜೆಪಿಯವರ ವಿರುದ್ದ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಅಂತ ಹೇಳಿದರು.

  • 09 Jan 2022 11:00 AM (IST)

    ಚುನಾವಣೆಗಾಗಿ ರಾಜಕೀಯ ಪಾದಯಾತ್ರೆ ಮಾಡುತ್ತಿದ್ದಾರೆ; ಬೊಮ್ಮಾಯಿ ಹೇಳಿಕೆ

    11 ಗಂಟೆಗೆ ಪ್ರಮುಖ ಸಚಿವರ ಸಭೆ ಕರೆದಿದ್ದೇನೆ. ಅದರಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ. ಬೆಂಗಳೂರಿನ ಅಭಿವೃದ್ಧಿ, ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಪಾದಯಾತ್ರೆ ಏಕೆ ಮಾಡುತ್ತಿದ್ದಾರೆಂಬ ಪ್ರಶ್ನೆ ಜನರಲ್ಲಿ ಮೂಡಿದೆ. 5 ವರ್ಷ ಅಧಿಕಾರದಲ್ಲಿದ್ದರೂ DPR ಸಲ್ಲಿಸಲು ಅವರಿಂದಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿ ನೀರಾವರಿ ಸಚಿವರಿದ್ದರು. ಆಗಲೂ ಮಂಡಿಸಲಿಲ್ಲ. ಚುನಾವಣೆಗಾಗಿ ರಾಜಕೀಯ ಪಾದಯಾತ್ರೆ ಮಾಡುತ್ತಿದ್ದಾರೆ. ತಾವು ಕೆಲಸ ಮಾಡಿಲ್ಲವೆಂಬ ಅಪರಾಧ ಭಾವನೆ ಅವರಿಗೆ ಕಾಡುತ್ತಿದೆ. ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ. ಅವರು ಯಾವುದೇ ನೀರಾವರಿ ಯೋಜನೆ ಬಗ್ಗೆ ಕೆಲಸ ಮಾಡಿಲ್ಲ. ಕಾಂಗ್ರೆಸ್‌ನವರು ಬದ್ಧತೆಯಿಂದ ಕೆಲಸ ಮಾಡಿಲ್ಲ. ಜನರು ಪದೇಪದೆ ಮರುಳಾಗಲ್ಲ. ನಾವು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಒತ್ತಡದಿಂದ ಈಗಾಗಲೇ ಡಿಪಿಆರ್ ಮಾನಿಟರ್ ಬೋರ್ಡ್‌ಗೆ ಹೋಗಿದೆ. ಕಾಂಗ್ರೆಸ್‌ನವರಿಗೆ ರಾಜಕೀಯವೇ ಬಹಳ ಮುಖ್ಯ. ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಕಾಂಗ್ರೆಸ್‌ನವರಿಗೆ ಏನೂ ಬೇಕಾಗಿಲ್ಲ, ಕೇವಲ ರಾಜಕಾರಣ ಬೇಕಾಗಿದೆ. ಅವರು DPR ಸಿದ್ಧಪಡಿಸಲು 4 ವರ್ಷವನ್ನು ತೆಗೆದುಕೊಂಡಿದ್ದಾರೆ. ಅವರು ಉಡಾಫೆಯಿಂದ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಏನು ಕ್ರಮಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • 09 Jan 2022 10:58 AM (IST)

    ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿ; ಸಚಿವ ಗೋವಿಂದ ಕಾರಜೋಳ ಹೇಳಿಕೆ

    ಕೊವಿಡ್ ನಿಯಮಗಳನ್ನು ಮೀರಿ ಜನರನ್ನು ಸೇರಿಸಿದ್ದಾರೆ. ಇದರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ. ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿ. ನಿಮ್ಮ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ. ಜನರ ಜೀವ ರಕ್ಷಣೆ ಮುಖ್ಯ, ರಾಜಕೀಯ ಮುಖ್ಯವಲ್ಲ. ಕ್ರಮಕೈಗೊಳ್ಳುವುದೊಂದೇ ಪರಿಹಾರವಲ್ಲ ಅಂತ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.

  • 09 Jan 2022 10:45 AM (IST)

    ನಮ್ಮ ಪ್ರಯತ್ನದಿಂದ 14 ಟಿಎಂಸಿ ನೀರು ರಾಜ್ಯಕ್ಕೆ ಉಳಿಯಿತು; ಎಂಬಿ ಪಾಟೀಲ್

    ನಮ್ಮ ಪ್ರಯತ್ನದಿಂದ 14 ಟಿಎಂಸಿ ನೀರು ರಾಜ್ಯಕ್ಕೆ ಉಳಿಯಿತು. ಕೋರ್ಟ್‌ನಲ್ಲಿ ನಮ್ಮ ಪ್ರಯತ್ನದಿಂದ ನೀರು ಉಳಿಯಿತು. ಇದರಿಂದ ಮೇಕೆದಾಟು ಯೋಜನೆಗೆ ಅನುಕೂಲವಾಗಿದೆ ಅಂತ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 09 Jan 2022 10:34 AM (IST)

    ಎಲ್ಲರೂ ಕಾನೂನು ಪಾಲನೆ ಮಾಡಬೇಕು; ಸಿದ್ದರಾಮಯ್ಯ ಸೂಚನೆ

    ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ ಪಾದಯತ್ರೆ ಮಾಡಿ. ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಯಾರೂ ಕೂಡ ಜವಾಬ್ದಾರಿಯನ್ನು ಮರೆಯಬಾರದು ಅಂತ ಮಾಸ್ಕ್ ಹಾಕಿಕೊಳ್ಳಿ ಎಂದು ಸಿದ್ದರಾಮಯ್ಯ ಗದರಿದರು.

  • 09 Jan 2022 10:33 AM (IST)

    ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲ; ವಿಪಕ್ಷ ನಾಯಕ ಸಿದ್ದರಾಮಯ್ಯ

    ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ ಎಂದು ತಿಳಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆ ಹೆಚ್ಚುವರಿ ನೀರು ಸಂಗ್ರಹಿಸುವುದಕ್ಕಾಗಿ ಯೋಜನೆ ಮಾಡಬೇಕಿದೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ತಮಿಳುನಾಡು ಇದನ್ನು ವಿರೋಧ ಮಾಡಲ್ಲ. ವಿರೋಧ ಮಾಡುವುದಕ್ಕೆ ಯಾವುದೇ ಕಾರಣ ಇಲ್ಲ. ತಮಿಳುನಾಡಿನವರು ಕ್ಯಾತೆ ತೆಗೆಯುವುದರಲ್ಲಿ ಅರ್ಥವಿದೆ ಆದರೆ ರಾಜ್ಯದ ಬಿಜೆಪಿ ನಾಯಕರು ಏಕೆ ಕ್ಯಾತೆ ತೆಗೆಯುತ್ತೀರಿ. ಬಿಜೆಪಿ ಶಕ್ತಿ ವಿಸ್ತರಣೆ ಮಾಡಿಕೊಳ್ಳಲು ವಿರೋಧಿಸುತ್ತದೆ. ನಾಡಿನ ಜನರಿಗೆ ಮಾಡುತ್ತಿರುವ ದ್ರೋಹವಿದು ಅಂತ ಅಭಿಪ್ರಾಯಪಟ್ಟರು.

  • 09 Jan 2022 10:29 AM (IST)

    ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಿಎಂ ಬುಲಾವ್

    ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಭೈರತಿ ಬಸವರಾಜ್ ಸಿಎಂ ಭೇಟಿ ಮಾಡಲು ನಿವಾಸಕ್ಕೆ ಆಗಮಿಸಿದ್ದಾರೆ.

  • 09 Jan 2022 10:28 AM (IST)

    ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಬಿಡಬೇಕಾಗುತ್ತೆ; ಸಿದ್ದರಾಮಯ್ಯ

    ಮಾರ್ಚ್, ಏಪ್ರಿಲ್, ಮೇನಲ್ಲಿ ನೀರು ಬಿಡಬೇಕಾಗುತ್ತೆ. ತಮಿಳುನಾಡಿಗೆ ನಾವು ನೀರು ಹರಿಸಬೇಕಾಗುತ್ತದೆ. ಆದರೆ ಆಗ ನಮ್ಮ ನದಿಗಳಲ್ಲಿ ನೀರು ಇರುವುದಿಲ್ಲ. ನಾವು ಹೇಗೆ ನೀರು ಬಿಡುವುದಕ್ಕೆ ಆಗುತ್ತೆ ಅಂತ ಸಂಗಮದಲ್ಲಿ  ಪ್ರಶ್ನಿಸಿದ  ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಜನರು ಕೂಡ ನೀರು ಇಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಮೇಕೆದಾಟು ಯೋಜನೆ ಮಾಡಬೇಕಾಗಿದೆ ಅಂತ ಹೇಳಿದರು.

  • 09 Jan 2022 10:23 AM (IST)

    ಸಿಎಂ ಬೊಮ್ಮಾಯಿ ಜತೆ ಚರ್ಚಿಸಲು ಆಗಮಿಸಿದ ಕಾರಜೋಳ

    ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಲು ಬೆಂಗಳೂರಿನ ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿದ್ದಾರೆ.

  • 09 Jan 2022 10:13 AM (IST)

    ಮೇಕೆದಾಟು ಪಾದಯಾತ್ರೆ ನಡೆಯಬಾರದೆಂದು ಶತಪ್ರಯತ್ನ ನಡೆಯುತ್ತಿದೆ -ಸಿದ್ದರಾಮಯ್ಯ

    2 ತಿಂಗಳ ಹಿಂದೆಯೇ ನಾವು ಪಾದಯಾತ್ರೆ ಘೋಷಿಸಿದ್ದೆವು. ನಮ್ಮ ಪಾದಯಾತ್ರೆ ತಡೆಯಲು ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಳ್ಳಲು ವಿಳಂಬ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಕ್ಲಿಯರೆನ್ಸ್ ಕೊಡುತ್ತಿಲ್ಲ. ಪರಿಸರ ಇಲಾಖೆಯ ಕ್ಲಿಯರೆನ್ಸ್‌ ಕೊಡುತ್ತಿಲ್ಲ. ಮೇಕೆದಾಟು ಪಾದಯಾತ್ರೆ ನಡೆಯಬಾರದೆಂದು ಶತಪ್ರಯತ್ನ ಮಾಡಲಾಗುತ್ತಿದೆ. ಜನರಿಗೆ ಸುಳ್ಳು ಮಾಹಿತಿಯನ್ನು ಕೊಡುವ ಕೆಲಸ ಮಾಡ್ತಿದ್ದಾರೆ. ಹೇಳಿಕೆ, ಜಾಹೀರಾತು ಕೊಡುವ ಮೂಲಕ ತಪ್ಪು ಮಾಹಿತಿ ನೀಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಏನೂ ಮಾಡಿಲ್ಲ ಎನ್ನುತ್ತಿದ್ದಾರೆ. 2013ರ ಜೂನ್‌ನಲ್ಲಿ ಡಿಪಿಆರ್ ಸಿದ್ಧವಾಗಿತ್ತು. ನಮ್ಮ ಅವಧಿಯಲ್ಲಿ ಎಲ್ಲಿಯೂ ವಿಳಂಬ ಆಗಿಲ್ಲ ಎಂದು ರಾಮನಗರ ಜಿಲ್ಲೆ ಸಂಗಮದಲ್ಲಿ ಭಾಷಣದ ವೇಳೆ ಸಿದ್ದರಾಮಯ್ಯ ತಿಳಿಸಿದ್ದಾರೆ.

  • 09 Jan 2022 10:01 AM (IST)

    ಕಾಂಗ್ರೆಸ್‌ಗೆ ಕ್ರೆಡಿಟ್ ಸಿಗುತ್ತೆ ಎಂಬ ಕಾರಣಕ್ಕೆ ವಿಫಲಕ್ಕೆ ಯತ್ನ -ಮಲ್ಲಿಕಾರ್ಜುನ ಖರ್ಗೆ

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಯೋಜನೆಗೆ ರಾಜ್ಯದ ಜನರಿಂದ ಸಂಪೂರ್ಣ ಬೆಂಬಲ ಸಿಗುತ್ತೆ. ಕಾರ್ಯಕ್ರಮ ವಿಫಲಗೊಳಿಸಲು ಸರ್ಕಾರದಿಂದ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್‌ಗೆ ಕ್ರೆಡಿಟ್ ಸಿಗುತ್ತೆ ಎಂಬ ಕಾರಣಕ್ಕೆ ವಿಫಲಕ್ಕೆ ಬಿಜೆಪಿ, ಜೆಡಿಎಸ್ ಸೇರಿ ಹಲವರಿಂದ ಕಾಲೆಳೆಯುವ ಯತ್ನ ನಡೆಯುತ್ತಿದೆ. ಆದ್ರೆ ಇದ್ಯಾವುದಕ್ಕೂ ಬಗ್ಗದೆ ಪಾದಯಾತ್ರೆ ಯಶಸ್ವಿ ಮಾಡುತ್ತೇವೆ. ಮೇಕೆದಾಟು ಅತ್ಯುತ್ತಮವಾದ ಯೋಜನೆ ಎಂದರು.

  • 09 Jan 2022 09:50 AM (IST)

    ಕಾಂಗ್ರೆಸ್ ಪಾದಯಾತ್ರೆಗೆ ಗೃಹ ಸಚಿವ ಅರಗ ಜ್ಙಾನೇಂದ್ರ ಕಿಡಿ

    ಕಾಂಗ್ರೆಸ್ ಪಾದಯಾತ್ರೆಗೆ ಗೃಹ ಸಚಿವ ಅರಗ ಜ್ಙಾನೇಂದ್ರ ಕಿಡಿಕಾರಿದ್ದಾರೆ. ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಿವಿ. ಯಾರೇ ನಿಯಮ ಉಲ್ಲಂಘನೆ ಮಾಡಿದ್ದರು ಅವರ ವಿರುದ್ಧ ಕೇಸು ದಾಖಲಿಸಲಾಗುವುದು. ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಾದಯಾತ್ರೆ ಮಾಡುವ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು. ಮೇಕೆದಾಟಿನ ಬಂಡೆಗಳ ಮೇಲೆ ಕೂತು ಕಿವಿ ಹಿಡಿದುಕೊಂಡು ಕ್ಷಮೆ ಕೇಳಬೇಕು. ಐದು ವರ್ಷ ಅವಕಾಶ ಕೊಟ್ಟರು ನಾವು ಏನು ಮಾಡಲಿಲ್ಲ ಅಂತ ಹೇಳಬೇಕು. ಹೋರಾಟ ಮಾಡುವುದಕ್ಕೆ ಕಾಂಗ್ರೆಸ್ಗೆ ಯಾವ ನೈತಿಕತೆ ಇದೆ. ಮಕ್ಕಳು, ಸ್ವಾಮೀಜಿಗಳನ್ನು ಕರೆದುಕೊಂಡುಬಂದು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • 09 Jan 2022 09:42 AM (IST)

    ನಗಾರಿ ಬಾರಿಸುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಮೊದಲಿಗೆ ಗಿಡಕ್ಕೆ ನೀರು ಹಾಕುವ ಮೂಲಕ ಸ್ವಾಮೀಜಿಗಳು, ಡಿಕೆಶಿ, ಚರ್ಚ್ ಫಾದರ್‌ಗಳು, ಮೌಲ್ವಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ನಗಾರಿ ಬಾರಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಚಾಲನೆ ನೀಡಿದ್ದಾರೆ.

  • 09 Jan 2022 09:16 AM (IST)

    ಬೈಕ್ ಜಾಥಾ ಮೂಲಕ ಸಂಗಮಕ್ಕೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು

    ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಪಾದಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ತೆರಳಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಬೈಕ್ ಜಾಥಾ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಹೊರಟಿದ್ದಾರೆ.

  • 09 Jan 2022 09:00 AM (IST)

    ಸಂಗಮದಲ್ಲಿ ಕಾಂಗ್ರೆಸ್ ಕಾರ್ಯಕ್ರಮ

    ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಸಂಗಮದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ‘ಕೈ’ ಶಾಸಕರು, ಪರಿಷತ್ ಸದಸ್ಯರು, ಕಾಂಗ್ರೆಸ್‌ನ ಮಾಜಿ ಶಾಸಕರು ಭಾಗಿಯಾಗಿದ್ದಾರೆ.

  • 09 Jan 2022 08:16 AM (IST)

    ನಟ ಶಿವರಾಜ್‌ಕುಮಾರ್ ತಂದೆಗೆ ತಕ್ಕ ಮಗ, ಪಾದಯಾತ್ರೆಗೆ ಬಂದೇ ಬರುತ್ತಾರೆ -ಜಯಮಾಲಾ

    ಪಾದಯಾತ್ರೆಗೆ ನಟ ಶಿವರಾಜ್‌ಕುಮಾರ್ ಬಂದೇ ಬರುತ್ತಾರೆ. ಶಿವರಾಜ್‌ಕುಮಾರ್ ತಂದೆಗೆ ತಕ್ಕ ಮಗ, ಬಂದೇ ಬರುತ್ತಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಈಗಲಾದ್ರೂ ಎದ್ದಿದೆ. ಆದ್ರೆ ಬಿಜೆಪಿ ಇನ್ನೂ ನಿದ್ದೆಯಲ್ಲಿಯೇ ಇದೆ ಎಂದು ಟಿವಿ9ಗೆ ಮಾಜಿ ಸಚಿವೆ, ನಟಿ ಜಯಮಾಲಾ ನಟ ಶಿವರಾಜ್‌ಕುಮಾರ್ ಬರುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

  • 09 Jan 2022 08:13 AM (IST)

    ಇಂದು ಯಾವುದೇ ಅಧಿಕೃತ ಕಾರ್ಯಕ್ರಮ ಹಾಕಿಕೊಳ್ಳದ ಸಿಎಂ ಬೊಮ್ಮಾಯಿ

    ಮೇಕೆದಾಟು ಯೋಜನೆಗೆ ಇಂದಿನಿಂದ ಕಾಂಗ್ರೆಸ್​ ಪಾದಯಾತ್ರೆ ಹಿನ್ನೆಲೆ ಕಾಂಗ್ರೆಸ್ ಪಾದಯಾತ್ರೆ ತಡೆಯದಿರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಕಾಂಗ್ರೆಸ್ ಪಾದಯಾತ್ರೆ ತಡೆದರೆ ತಪ್ಪು ಸಂದೇಶ ರವಾನೆ ಸಾಧ್ಯತೆ. ಹೀಗಾಗಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ಇಂದು ಯಾವುದೇ ಅಧಿಕೃತ ಕಾರ್ಯಕ್ರಮ ಹಾಕಿಕೊಳ್ಳದೆ ಆರ್.ಟಿ.ನಗರದ ನಿವಾಸದಲ್ಲಿಯೇ ಇದ್ದಾರೆ.

  • 09 Jan 2022 08:05 AM (IST)

    ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲ, ನಮ್ಮ ಹೋರಾಟ -ಸಾಧು ಕೋಕಿಲಾ

    ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲ, ನಮ್ಮ ಹೋರಾಟ ಎಂದು ಟಿವಿ9ಗೆ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಹೇಳಿಕೆ ನೀಡಿದ್ದಾರೆ. ನಾನು ಕಲಾವಿದ ಎಲ್ಲಾ ಕಡೆ ಇರುತ್ತೇನೆ. ಡಿಕೆ ಶಿವಕುಮಾರ್​ ಅವರು ನನಗೆ ಆತ್ಮೀಯ ಸ್ನೇಹಿತರಾಗಿರುವ ಹಿನ್ನೆಲೆ ಸಂಗೀತ ಸಂಯೋಜನೆ ಮಾಡುವಂತೆ ಕೇಳಿದ್ದಕ್ಕೆ ಮಾಡಿದ್ದೇನೆ. ಇದು ನಮ್ಮ ಹೋರಾಟ ಹಿನ್ನೆಲೆ ನಾನು ಭಾಗಿಯಾಗಿದ್ದೇನೆ ಎಂದು ಸಾಧು ಕೋಕಿಲಾ ತಿಳಿಸಿದ್ದಾರೆ.

  • 09 Jan 2022 08:02 AM (IST)

    ಸಂಗಮದಲ್ಲಿ ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ

    ಮೇಕೆದಾಟು ಯೋಜನೆಗಾಗಿ ಸಂಗಮದಿಂದ ಕಾಂಗ್ರೆಸ್ ಪಾದಯಾತ್ರೆ ಆರಂಭ ಹಿನ್ನೆಲೆ ಸಂಗಮದಲ್ಲಿ ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ ನಡೆಸಲಾಗುತ್ತಿದೆ.

  • 09 Jan 2022 07:57 AM (IST)

    ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ಊಟದ ವ್ಯವಸ್ಥೆ

    ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮದ ಬಳಿ ಸುಮಾರು 25,000 ಜನರಿಗೆ, 5 ಎಕರೆ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

  • 09 Jan 2022 07:55 AM (IST)

    ವೀಕೆಂಡ್ ಕರ್ಫ್ಯೂ ಹಿಂಪಡೆಯುವಂತೆ ಸಿಎಂಗೆ ಡಿಕೆಶಿ ಮನವಿ

    ಮೇಕೆದಾಟು ಯೋಜನೆಗೆ ಇಂದಿನಿಂದ ಕಾಂಗ್ರೆಸ್​ ಪಾದಯಾತ್ರೆ ಆರಂಭ ಹಿನ್ನೆಲೆ ಪಾದಯಾತ್ರೆಯಲ್ಲಿ ಭಾಗಿಯಾಗಲು ಜನರು ಬರುತ್ತಿದ್ದಾರೆ. ಇದೆಲ್ಲಾ ದೈವ ಇಚ್ಛೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಹಿಂಪಡೆಯುವಂತೆ ಸಿಎಂಗೆ ಟಿವಿ9 ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ ಮಾಡಿದ್ದಾರೆ. ಪೊಲೀಸರು, ಅಧಿಕಾರಿಗಳಿಂದ ನಮಗೆ ತೊಂದರೆ ನೀಡಬೇಡಿ. ನಿಮಗಾಗಿಯೇ ಈ ಪಾದಯಾತ್ರೆಯನ್ನ ಮಾಡುತ್ತಿದ್ದೇವೆ. ಅಧಿಕಾರ ಶಾಶ್ವತವಲ್ಲ, ನಮಗೆ ತೊಂದರೆ ನೀಡಬೇಡಿ ಎಂದಿದ್ದಾರೆ.

  • 09 Jan 2022 07:50 AM (IST)

    ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ -ಸಿದ್ದರಾಮಯ್ಯ

    ಜನರ ಹಿತದೃಷ್ಟಿಯಿಂದ ರಾಜ್ಯ, ಬೆಂಗಳೂರಿನ ಜನರಿಗಾಗಿ ಪಾದಯಾತ್ರೆ ಮಾಡ್ತಿದ್ದೇವೆ. ಈ ಯೋಜನೆಗೂ ತಮಿಳುನಾಡಿಗೂ ಯಾವ ಸಂಬಂಧ ಇಲ್ಲ. ತಮಿಳುನಾಡಿಗೆ ಯಾವುದೇ ರೀತಿ ಸಮಸ್ಯೆಯಾಗುವುದಿಲ್ಲ. ನಮ್ಮ ಅನುಕೂಲಕ್ಕಾಗಿ ಪೊಲೀಸರನ್ನು ನಿಯೋಜಿಸಿದ್ದಾರೆ. ನಾವು ಕಾನೂನು ಭಂಗ ಮಾಡುವುದಿಲ್ಲ. ನಾವು 2 ತಿಂಗಳ ಹಿಂದೆಯೇ ಪಾದಯಾತ್ರೆ ಬಗ್ಗೆ ಘೋಷಣೆ ಮಾಡಿದ್ದೆವು. ನಾವು ಘೋಷಣೆ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

  • 09 Jan 2022 07:49 AM (IST)

    ಸಂಗಮದಲ್ಲಿ ಕಾವೇರಿ ನದಿಗೆ ಪೂಜೆ

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಿಂದ ಪಾದಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ರೀತಿ ತೊಂದರೆ ಅಡ್ಡಿ ಆತಂಕ ಆಗಬಾರದು ಎಂದು ಸಂಗಮದಲ್ಲಿ ಕಾವೇರಿ ನದಿಗೆ ಪೂಜೆ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅಭಿಮಾನಿ ಜಗದೀಶ್​ ಸಂಗಮದ ಬಳಿ ಗಣ ಹೋಮ ಮಾಡಿಸಿದ್ದಾರೆ.

  • 09 Jan 2022 07:47 AM (IST)

    ಮೇಕೆದಾಟು ಹೋರಾಟಕ್ಕೆ ಸಾಥ್ ನೀಡಲಿರೋ ದುನಿಯಾ ವಿಜಯ್

    ನಟ ದುನಿಯಾ ವಿಜಿ ಈಗಾಗಲೇ ಮನೆಯಿಂದ ಹೊರಟಿದ್ದಾರೆ. ಮೇಕೆದಾಟು ಹೋರಾಟಕ್ಕೆ ಸಾಥ್ ನೀಡಲಿರೋ ದುನಿಯಾ ವಿಜಯ್ ರಾಮನಗರದ ಸಂಗಮದತ್ತ ಪ್ರಯಾಣ ಬೆಳೆಸಿದ್ದಾರೆ. 1 ಗಂಟೆ ನಂತರ ರಾಮನಗರದ ಸಂಗಮಕ್ಕೆ ತಲುಪೋ ಸಾಧ್ಯತೆ ಇದೆ ಎಂದು ಟಿವಿನೈನ್ ಗೆ ಮಾಹಿತಿ ಸಿಕ್ಕಿದೆ.

  • 09 Jan 2022 07:45 AM (IST)

    ಪಾದಯಾತ್ರೆ ಹಿನ್ನೆಲೆ ತನ್ನ ನಿವಾಸದಿಂದ ತೆರಳಿದ ಸಂಸದ ಡಿಕೆ ಸುರೇಶ್

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಸಂಸದ ಡಿಕೆ ಸುರೇಶ್ ಕನಕಪುರದ ತಮ್ಮ ನಿವಾಸದಿಂದ ಸಂಗಮಕ್ಕೆ ತೆರಳಿದ್ದಾರೆ.

  • 09 Jan 2022 07:44 AM (IST)

    ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ

    ಸಚಿವರು ಕಾಂಗ್ರೆಸ್ ಪಾದಯಾತ್ರೆಗೆ ಬರುವವರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ನೀವು ಯಾರನ್ನೂ ತಡೆಯುವುದಕ್ಕೆ ಆಗಲ್ಲ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ. ಪಾದಯಾತ್ರೆಗೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಆದರೆ ಕೆಲವರು ಪಾದಯಾತ್ರೆಗೆ ಹೋಗದಂತೆ ಕರೆ ಮಾಡಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಪಾದಯಾತ್ರೆಗೆ ಬನ್ನಿ ಎಂದು ಆಹ್ವಾನ ನೀಡುತ್ತೇನೆ. ಪಾದಯಾತ್ರೆಗೆ ಬರಲು ನಾನು ಯಾರಿಗೂ ಬಲವಂತ ಮಾಡಲ್ಲ. ಪಾದಯಾತ್ರೆ ನಮ್ಮ ಕಾರ್ಯಕ್ರಮವಲ್ಲ, ನಿಮ್ಮ ಕಾರ್ಯಕ್ರಮ. ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಎಸ್‌ಪಿ, ಡಿಸಿ ಏನು ಮಾಡುತ್ತಾರೆ. ಇವರು ಸಿದ್ದರಾಮಯ್ಯ, ನನ್ನ ಮೇಲೆ ಕೇಸ್ ಹಾಕಬಹುದು. ನಾನು ಫಿಲ್ಮ್ ಚೇಂಬರ್‌ಗೆ ಹೋಗಿ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಯಾರು ಬರುತ್ತಾರೆಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

  • 09 Jan 2022 07:40 AM (IST)

    ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಐವರು ಡಿವೈಎಸ್‌ಪಿಗಳು, 16 ಇನ್ಸ್‌ಪೆಕ್ಟರ್‌ಗಳು, 27 SI, 176 ಎಎಸ್‌ಐ, 806 ಪೊಲೀಸ್ ಕಾನ್ಸ್‌ಟೇಬಲ್‌ಗಳು, ಒಂದು ಕೆಂಪೇಗೌಡ ಪಡೆ, 4 DAR, 8 KSRP ನಿಯೋಜನೆ ಮಾಡಲಾಗಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಪೊಲೀಸರು ಆಗಮಿಸುತ್ತಿದ್ದಾರೆ.

  • Published On - Jan 09,2022 7:35 AM

    Follow us
    ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
    ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
    ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
    ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
    ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
    ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
    ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
    ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
    ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
    ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
    ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
    ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
    ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
    ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
    ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
    ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
    ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
    ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
    ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
    ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು