ಶಿವಮೊಗ್ಗದ ನೂತನ ಏರ್​ಪೋರ್ಟ್​ಗೆ ಮತ್ತೊಂದು ಫ್ಲೈಟ್ ಆಗಮನ: ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನ ಮಂತ್ರಿಗಳ SPG ತಂಡ

ಶಿವಮೊಗ್ಗ ನೂತನ ವಿಮಾನ‌ ನಿಲ್ದಾಣಕ್ಕೆ ಮತ್ತೊಂದು ವಿಮಾನ ಬಂದಿಳಿದೆ. ಈ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಯ ಮೊದಲ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ.

ಶಿವಮೊಗ್ಗ: ಜಿಲ್ಲೆಯ ನೂತನ ವಿಮಾನ‌ ನಿಲ್ದಾಣಕ್ಕೆ (Shivamogga Airport) ಮತ್ತೊಂದು ವಿಮಾನ ಬಂದಿಳಿದೆ. ಈ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಯ ಮೊದಲ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ವಾಯು ಪಡೆ ವಿಮಾನದಲ್ಲಿ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ತಂಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಭಾರತೀಯ ವಾಯು ಸೇನೆಯ ಕ್ಯಾರಿಯರ್ ವಿಮಾನದಲ್ಲಿ ದೆಹಲಿಯಿಂದ ಭದ್ರತಾ ಪಡೆಗಳ ತಂಡ ಆಗಮಿಸಿದ್ದು, ವಿಮಾನದಲ್ಲಿ ನಾಲ್ಕು ಕಾರುಗಳ ಸಹಿತ ಹಲವು ಸಿಬ್ಬಂದಿ ಆಗಮಿಸಿದ್ದಾರೆ. ವಾಯುಸೇನೆಯ ಇಲ್ಯೂಷಿನ್ 76 ವಿಮಾನದಿಂದ ನಾಲ್ಕು ಕಾರುಗಳನ್ನು ಕೆಳಗಿಳಿಸಿ ಎಸ್​ಪಿಜಿ ತಂಡದ ಪರಿಶೀಲನೆ ಮಾಡಲಾಯಿತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ SPG ತಂಡ ಜಿಲ್ಲಾಧಿಕಾರಿ ಸೇರಿ ಪ್ರಮುಖ ಅಧಿಕಾರಿಗಳ ಭೇಟಿ ಮಾಡಿದೆ. ಬಳಿಕ ವಿಮಾನ ನಿಲ್ದಾಣದ ಟರ್ಮಿನಲ್ ಪರಿಶೀಲಿಸಿ, ಅಲ್ಲಿಂದ ನೇರವಾಗಿ ತಮ್ಮ ವಾಹನಗಳ ಮೂಲಕವೇ ಶಿವಮೊಗ್ಗ ನಗರಕ್ಕೆ SPG ತಂಡ ತೆರಳಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರುವ ಮೊದಲ ವಿಮಾನ ಪ್ರಧಾನಿ ಮೋದಿಯವರದ್ದು

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ಶಿವಮೊಗ್ಗಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿಯಲಿದ್ದಾರೆ. ಈ ಮೂಲಕ ಪ್ರಧಾನಿಗಳ ವಿಶೇಷ ವಿಮಾನವೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರುವ ಮೊಟ್ಟ ಮೊದಲ ವಿಮಾನವಾಗಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.  ಇತ್ತೀಚೆಗೆ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿ, ಪ್ರಧಾನಿಗಳ ವಿಮಾನವೇ ಮೊದಲ ವಿಮಾನ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಲಿದೆ. ಇದು ನಮಗೆ ಬಹಳ ಸಂಸತಸ ತಂದಿದೆ. ಇದೇ ವೇಳೆ ಪ್ರಧಾನಿ ಮೋದಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮತ್ತು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ ಗೊಂದಲಕ್ಕೆ ತೆರೆ; ರಾಷ್ಟಕವಿ ಕವಿ ಕುವೆಂಪು ಹೆಸರಿಡುವ ಬಗ್ಗೆ ಕೇಂದ್ರಕ್ಕೆ ಖುದ್ದು ಸಿಎಂ ಶಿಫಾರಸು

ಅವರ ಕಾರ್ಯಕ್ರಮ ವೇಳಾಪಟ್ಟಿ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಾಹ್ನ 12:30ಕ್ಕೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಭೆಗೆ 2ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಅಂದಿನ ಕಾರ್ಯಮದ ತಯಾರಿ ಈಗಾಗಲೇ ಪ್ರಾರಂಭವಾಗಿದೆ ಎಂದು ತಿಳಿಸಿದರು. ವಿಮಾನ ನಿಲ್ದಾಣ ಉದ್ಘಾಟನೆಯಾದ 15 ಅಥವಾ 1 ತಿಂಗಳ ನಂತರ ತನ್ನ ಕಾರ್ಯಾರಂಭ ಮಾಡಲಿದೆ. ಮತ್ತು ಆದ್ಯತೆ ಪ್ರಕಾರ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ವಿಮಾನಗಳ ಪಟ್ಟಿ ಸಿದ್ದವಾಗಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 600 ಕೋಟಿ ರೂ ಖರ್ಚು

ಒಟ್ಟು ವಿಮಾನ ನಿಲ್ದಾಣಕ್ಕೆ 600 ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ ಕಟ್ಟಡ ಕಾಮಗಾರಿಗೆ 449 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಉಳಿದ ಹಣದಲ್ಲಿ ಭೂ ಖರೀದಿಗೆ ನೀಡಲಾಗಿದೆ. ಭೂಮಿಯನ್ನು ಕಳೆದುಕೊಂಡವರಿಗೆ ಕರ್ನಾಟಕ ಗೃಹ ಮಂಡಳಿ ನಿವೇಶನ ನೀಡಲಿದೆ. ಈಗಾಗಲೇ 320 ಕುಟುಂಬಗಳಿಗೆ ನೀಡಲು ನಿವೇಶನಗಳು ಸಿದ್ದವಾಗಿವೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡದಂತೆ ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ ಮನವಿ

ಹಾಗೇ ವಿಮಾನ ನಿಲ್ದಾಣದ ಪಕ್ಕದಲ್ಲಿ ಪ್ರಧಾನಿ ಮೋದಿ ಅವರು ಹೈವೆ, ಸ್ಮಾರ್ಟ್​ ಸಿಟಿ, ರೇಲ್ವೆ ಕಾಮಗಾರಿಗಳನ್ನು ಮತ್ತು ಹಲವು ಗ್ರಾಮಗಳಿಗೆ ನೀರಿನ ಸೌಲಭ್ಯ, ಜನ್​ ಜೀವನ್​ ಮಿಷನ್​ನ್ನು ಉದ್ಘಾಟಿಸಲಿದ್ದಾರೆ. ಮತ್ತು ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:16 pm, Thu, 23 February 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us