Siddaramaiah Press Meet: ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು; ಸಿದ್ದರಾಮಯ್ಯ ಒತ್ತಾಯ

PSI Recruitment Scam: ನಮ್ಮ ಸರ್ಕಾರದ ವಿರುದ್ಧ 10 ಪರ್ಸೆಂಟ್ ಸರ್ಕಾರವೆಂದು ಹೇಳಿದ್ರು. ಯಾವುದೇ ದಾಖಲೆ ಇಲ್ಲದೆ ಮೋದಿ ಆರೋಪ ಮಾಡಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಬಗ್ಗೆ ಪ್ರಧಾನಿ ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದು ತಿಳಿಸಿದ್ದರು.

Siddaramaiah Press Meet: ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು; ಸಿದ್ದರಾಮಯ್ಯ ಒತ್ತಾಯ
ಸಿದ್ದರಾಮಯ್ಯ
Follow us
| Updated By: sandhya thejappa

Updated on:May 04, 2022 | 12:54 PM

ಬೆಂಗಳೂರು: ಇಂದು (ಮೇ 4) ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಾದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ನಿನ್ನೆ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಬೊಮ್ಮಾಯಿ ಸರ್ಕಾರಕ್ಕೆ ಶಹಬ್ಬಾಸ್ಗಿರಿ ಕೊಟ್ಟು ಹೋಗಿದ್ದಾರೆ. ಕಾಮನ್ಮ್ಯಾನ್ ಸರ್ಕಾರವೆಂದು ಅರುಣ್ ಸಿಂಗ್ ಹೇಳಿದ್ದಾರೆ. 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ ಸಹಮತ ನೀಡಿದ್ದಾರೆ ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರ ಸರ್ಕಾರ ಮುದ್ರೆ ಹೊತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಸರ್ಕಾರವೆಂದು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಸಂತೋಷ್ ಪಾಟೀಲ್ ಹೇಳಿದ್ರು. ಮಠಕ್ಕೆ ಬಿಡುಗಡೆಯಾದ ಅನುದಾನಕ್ಕೂ 40 ಪರ್ಸೆಂಟ್ ಕೊಡಬೇಕು. ರಾಜ್ಯ ಸರ್ಕಾರದ ವಿರುದ್ಧ ಸ್ವಾಮೀಜಿ ಆರೋಪ ಮಾಡಿದ್ದರು. ಬಿಬಿಎಂಪಿ ವಿರುದ್ಧವೂ 40 ಪರ್ಸೆಂಟ್ ಆರೋಪ ಕೇಳಿಬಂದಿತ್ತು. ಗೋಶಾಲೆಗೆ ಬಿಡುಗಡೆಯಾದ ಹಣಕ್ಕೂ 40 ಪರ್ಸೆಂಟ್ ಕೊಡಬೇಕು. ಸರ್ಕಾರದ ವಿರುದ್ಧ ಇಷ್ಟೆಲ್ಲಾ ಆರೋಪ ಕೇಳಿಬಂದರೂ ಬೆಂಗಳೂರಿಗೆ ಬಂದಿದ್ದ ಕೇಂದ್ರ ಬಿಜೆಪಿ ನಾಯಕರಿಂದ ಮೆಚ್ಚುಗೆ ನೀಡಿದ್ದಾರೆ. ಇದರ ಅರ್ಥ ರಾಜ್ಯ ಸರ್ಕಾರದ ಅಕ್ರಮಕ್ಕೆ ಕೇಂದ್ರ ಸಹಮತವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರ್ಕಾರದ ವಿರುದ್ಧ 10 ಪರ್ಸೆಂಟ್ ಸರ್ಕಾರವೆಂದು ಹೇಳಿದ್ರು. ಯಾವುದೇ ದಾಖಲೆ ಇಲ್ಲದೆ ಮೋದಿ ಆರೋಪ ಮಾಡಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಬಗ್ಗೆ ಪ್ರಧಾನಿ ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದು ತಿಳಿಸಿದ್ದರು. ಆದರೆ, ಪ್ರಧಾನಿ ಮೋದಿ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ರಾಜ್ಯ ಸರ್ಕಾರದ 40 ಪರ್ಸೆಂಟ್ನಲ್ಲಿ ಕೇಂದ್ರಕ್ಕೆ ಪಾಲಿದೆ ಅಂದರ್ಥ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

PSI ಪರೀಕ್ಷೆಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ವರ್ಗಾವಣೆ ಮಾಡಿದ್ದಾರೆ. ಇದರ ಅರ್ಥ ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರು ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಗೊತ್ತಾದ ನಂತರ ಕ್ರಮಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಇವರನ್ನು ಕನಿಷ್ಠ ಅಮಾನತುಗೊಳಿಸಬೇಕಿತ್ತು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಎಫ್ಐಆರ್ ದಾಖಲಿಸಬೇಕಿತ್ತು ಎಂದು ಹೇಳಿದರು.

ಕಲಬುರಗಿ ಜ್ಞಾನಜ್ಯೋತಿ ಶಾಲೆ ಪರೀಕ್ಷೆ ಯೋಗ್ಯವಲ್ಲವೆಂದಿದ್ದರು. ಆದರೂ ಅದೇ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಬರೆಸಿದ್ದು ಯಾಕೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸ್ಥಳೀಯ ಪೊಲೀಸರ ಸಹಕಾರವಿಲ್ಲದೆ ಹೇಗೆ ಪರೀಕ್ಷೆ ಬರೆಸಿದರು. ಇಷ್ಟೆಲ್ಲಾ ಆದರೂ ಇದಕ್ಕೆಲ್ಲ ಯಾರು ಹೊಣೆ. ಸರ್ಕಾರವೇ ಹೊಣೆಗಾರರಾದರೆ ಗೃಹಸಚಿವ ಹೊಣೆ ಹೊರಬೇಕು. ಗೃಹಸಚಿವ ಆರಗ ಜ್ಞಾನೇಂದ್ರ ಹೊಣೆ ಹೊರಬೇಕು. ಅಕ್ರಮದ ಬಗ್ಗೆ ಡಿಜಿ&ಐಜಿಪಿಗೆ ಪತ್ರ ಬರೆದಿದ್ದರೂ ಕ್ರಮಕೈಗೊಂಡಿಲ್ಲ. ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಫೆ.3ರಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದರು. ಅಫಜಲಪುರ ತಾಲೂಕಿನ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವಾಗಿ ಎಂದು ಉಲ್ಲೇಖಿಸಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿ ತಡೆಹಿಡಿಯುವಂತೆ ಸಿಎಂಗೆ ಪತ್ರ ಬರೆದಿದ್ದರು ಎಂದು ಬರೆದಿದ್ದ ಪತ್ರವನ್ನು ಸುದ್ದಿಗೋಷ್ಟಿಯಲ್ಲಿ ಓದಿದ್ದರು.

ಬಿಜೆಪಿ ಎಂಎಲ್​ಸಿ ಎಸ್.ವಿ.ಸಂಕನೂರ ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪತ್ರ ಬರೆದಿದ್ದರು. ಬ್ಲೂಟೂತ್​ ಬಳಸಿ ಪರೀಕ್ಷೆ ಬರೆದಿದ್ದಾರೆಂದು ಎಂದು ಆರೋಪಿಸಿದ್ದರು. ಇದಲ್ಲದೆ ಬೇರೆಯವರು ಕೂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪಿಎಸ್​ಐ ಪರೀಕ್ಷಾ ಅಕ್ರಮದ ಬಗ್ಗೆ ಸದನದಲ್ಲೂ ಚರ್ಚೆಯಾಗಿತ್ತು. ಯಾವುದೇ ತನಿಖೆ ನಡೆಸದೆ ಅಕ್ರಮ ನಡೆದಿಲ್ಲವೆಂದು ಅಂತ ಸದನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು: ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಈಗ ತನಿಖೆ ನಡೆಸ್ತಿದ್ದಾರೆ. ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು. ಕೇಂದ್ರ ಗೃಹಸಚಿವ ಅಮಿತ್ ಶಾ ಇಂಥವರ ಬೆನ್ನು ತಟ್ಟಿಹೋಗಿದ್ದಾರೆ. ಇವರ ನಡೆ ಗಮನಿಸಿದೆ ಅಕ್ರಮಕ್ಕೆ ಕೇಂದ್ರದ ಬೆಂಬಲವಿದೆಯಾ? ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಲದು. ಇವರ ವಿರುದ್ಧ ಎಫ್​ಐಆರ್​ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಧಾರವಾಡ ವಿವಿ ಪ್ರೊ.ನಾಗರಾಜ್​ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿ ಸೌಮ್ಯಾ ಎಂಬುವವರನ್ನು ಬಂಧಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಜವಾಬ್ದಾರಿ ಏನು? ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಅಶ್ವತ್ಥ್ ನಾರಾಯಣ ಪಾತ್ರವಿದೆ. ಆಯ್ಕೆ ಪಟ್ಟಿಯಲ್ಲಿ 5ನೇ ಱಂಕ್ ಪಡೆದಿದ್ದ ದರ್ಶನ್​ಗೌಡ ಪ್ರಥಮ ಪತ್ರಿಕೆ 19 ಅಂಕ, ದ್ವಿತೀಯ ಪತ್ರಿಕೆಯಲ್ಲಿ 141 ಅಂಕ ಪಡೆದಿದ್ದಾರೆ. ಆಯ್ಕೆ ಪಟ್ಟಿಯಲ್ಲಿದ್ದ ಮತ್ತೊಬ್ಬ ಅಭ್ಯರ್ಥಿ ನಾಗೇಶ್​ಗೌಡ. ಇವರಿಬ್ಬರೂ ಸಚಿವ ಡಾ.ಅಶ್ವತ್ಥ್​ ನಾರಾಯಣ ಸಂಬಂಧಿಕರು. ಖಾಲಿ ಪೇಪರ್​ ಕೊಟ್ಟಿರಬಹುದು, ಬ್ಲೂಟೂತ್​ ಬಳಸಿರಬಹುದು. ಏಪ್ರಿಲ್ 19ರಂದು ಪೊಲೀಸರು ವಿಚಾರಣೆಗೆ ನೋಟಿಸ್​ ನೀಡಿದ್ದರು.  ದರ್ಶನ್​ಗೌಡ, ನಾಗೇಶ್​ಗೌಡನನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಸಿಆರ್​ಪಿಸಿ ಕಾಯ್ದೆ 91ರ ಪ್ರಕಾರ ನೋಟಿಸ್​ ನೀಡಿ ಕರೆದಿದ್ದರು. ಡಾ.ಅಶ್ವತ್ಥ್ ನಾರಾಯಣ ತಲೆ ಮೇಲೆ ತೂಗುಗತ್ತಿ ನೇತಾಡುತ್ತಿದೆ ಅಂತ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ: ಪಿಎಸ್​ಐ ಪರೀಕ್ಷೆಯಲ್ಲಿ 300 ಕೋಟಿ ಹೆಚ್ಚು ಅಕ್ರಮ ನಡೆದಿದೆ. ಸಿಐಡಿಯಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ, ನ್ಯಾಯ ಸಿಗಲ್ಲ. ಹೈಕೋರ್ಟ್​ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಲಿ. ನ್ಯಾಯಾಂಗ ತನಿಖೆಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ. ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. 2 ಆಯ್ಕೆ ಪ್ರಕ್ರಿಯೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಅಂತ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದನ್ನೂ ಓದಿ

IPL 2022 Points Table: ಪಂಜಾಬ್ ಗೆಲುವಿನಿಂದ 6ನೇ ಸ್ಥಾನಕ್ಕೆ ಕುಸಿದ ಆರ್​ಸಿಬಿ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಖಂಡಿಸಿ NSUI ಪ್ರತಿಭಟನೆ; ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

Published On - 12:44 pm, Wed, 4 May 22