ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಂಧ್ರದಿಂದ ತೆರಳುತ್ತಿದ್ದ ಈ ರೈಲು ಇನ್ನು ಬೆಂಗಳೂರಿಗೂ ಬರಲಿದೆ!

Sathya Sai Prashanthi Nilayam-Howrah Superfast Express: ಪಶ್ಚಿಮ ಬಂಗಾಳದ ಹೌರಾ ಮತ್ತು ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮಧ್ಯ ಸಂಚರಿಸುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ಯಶವಂತಪುರದವರೆಗೆ ವಿಸ್ತರಣೆಯಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ರೈಲಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಇತರೆ ಮಾಹಿತಿ ಇಲ್ಲಿದೆ.

ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಂಧ್ರದಿಂದ ತೆರಳುತ್ತಿದ್ದ ಈ ರೈಲು ಇನ್ನು ಬೆಂಗಳೂರಿಗೂ ಬರಲಿದೆ!
ಸಾಂದರ್ಭಿಕ ಚಿತ್ರ

Updated on: Sep 10, 2024 | 7:32 AM

ಬೆಂಗಳೂರು, ಸೆಪ್ಟೆಂಬರ್ 10: ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣ ಮತ್ತು ಪಶ್ಚಿಮ ಬಂಗಾಳದ ಹೌರಾ ಮಧ್ಯೆ ಸಂಚರಿಸುತ್ತಿದ್ದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ ಅಧಿಕೃತ ಖಾತೆಯ ಮೂಲಕ ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಮಾಹಿತಿ ನೀಡಿದೆ.

ಪ್ರಯಾಣಿಕರ ವಿಶೇಷ ಗಮನಕ್ಕೆ, ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 22831/22832) ಸೇವೆ ಯಶವಂತಪುರದವರೆಗೆ ವಿಸ್ತರಣೆ ಮಾಡಲಾಗಿದೆ. ನಾಗಸಮುದ್ರಂ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ


ಯಾವಾಗಿನಿಂದ ಜಾರಿ?

ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳ ನಡುವೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ರೈಲು ಸಂಖ್ಯೆ 22831, ಈಗ ಹೌರಾ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 25 ರಿಂದ ಜಾರಿಗೆ ಬರುವಂತೆ ಕಾರ್ಯನಿರ್ವಹಿಸಲಿದೆ. ಈ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (ಎಸ್‌ಎಸ್ ಪಿಎನ್) ನಲ್ಲಿ ಕೊನೆಗೊಳ್ಳುವ ಬದಲು ಯಶವಂತಪುರದವರೆಗೆ ತನ್ನ ಪ್ರಯಾಣವನ್ನು ವಿಸ್ತರಿಸುತ್ತದೆ.

ಈ ಹಿಂದೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ಯಾಣದಿಂದ ಹೌರಾಗೆ ಚಲಿಸುತ್ತಿದ್ದ ರೈಲು ಸಂಖ್ಯೆ 22832, ಈಗ ಯಶವಂತಪುರದಿಂದ ಹೌರಾಕ್ಕೆ ಸೆಪ್ಟೆಂಬರ್ 27 ರಿಂದ ಸಂಚರಿಸಲಿದೆ.

ಇದನ್ನೂ ಓದಿ: ಬೆಂಗಳೂರು: ಎಸ್​ಎಂವಿಟಿ ರೈಲು ನಿಲ್ದಾಣದಲ್ಲಿ ಹೊಸ ನಿಯಮ ಜಾರಿ, ಪ್ರಯಾಣಿಕರಿಗೆ ಸಂಕಷ್ಟ

ಅಗತ್ಯ ಮೂಲಸೌಕರ್ಯ ಕಾಮಗಾರಿಯ ಸಲುವಾಗಿ ನಾಗಸಮುದ್ರಂ ನಿಲ್ದಾಣದಲ್ಲಿ ರೈಲು ಸಂಖ್ಯೆ 07693/07694 ಗುಂತಕಲ್-ಹಿಂದೂಪುರ-ಗುಂತಕಲ್ ಡೆಮು ವಿಶೇಷ ರೈಲುಗಳ ನಿಲುಗಡೆಯನ್ನು ನವೆಂಬರ್ 5 ರವರೆಗೆ ರದ್ದುಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ