ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಕುರಿತ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ
ಗಡುವಿನ ಒಳಗೆ ತನಿಖೆ ಮುಗಿದು ವರದಿ ಸಲ್ಲಿಕೆಯಾಗಬೇಕಿತ್ತು. ಆದರೂ, ನಾಲ್ಕು ತಿಂಗಳು ಕಳೆದರೂ ‘1952ರ ತನಿಖಾ ಆಯೋಗಗಳ ಕಾಯ್ದೆ’ಯಡಿ ಆಗಸ್ಟ್ 25ರಂದು ಏಕವ್ಯಕ್ತಿ ತನಿಖಾ ಆಯೋಗವನ್ನು ರಚಿಸಿದ್ದು ಬಿಟ್ಟರೆ ಏನೂ ಆಗಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಬೆಂಗಳೂರು, ಡಿಸೆಂಬರ್ 12: ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಗುತ್ತಿಗೆ ನೀಡಲಾಗಿದ್ದ ವಿವಿಧ ಕಾಮಗಾರಿಗಳ ತನಿಖೆಗೆ ವಿಶೇಷ ತನಿಖಾ ದಳ ರಚಿಸಿದ್ದು, ಅದು ಒಂದು ತಿಂಗಳ ಗಡುವಿನೊಳಗೆ ತನ್ನ ಕಾರ್ಯವನ್ನು ಏಕೆ ಪೂರ್ಣಗೊಳಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಸರ್ಕಾರದಿಂದ ವಿವರಣೆ ಕೇಳಿದೆ. ವಿಶೇಷ ದಳವನ್ನು ರಚಿಸುವ ಆಗಸ್ಟ್ 5 ರ ಅಧಿಸೂಚನೆಗೆ ಸಂಬಂಧಿಸಿದ ಮುಂದಿನ ತನಿಖಾ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದು ಎಂದು ಹೈಕೋರ್ಟ್ ಹೇಳಿದೆ.
ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಲಿಮಿಟೆಡ್ ಮತ್ತು ಇತರ ಗುತ್ತಿಗೆದಾರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಡಿಸೆಂಬರ್ 19 ಕ್ಕೆ ಮುಂದೂಡಿತು.
2019-20 ರಿಂದ 2022-23 ರವರೆಗಿನ ಎಲ್ಲಾ ಕಾಮಗಾರಿಗಳನ್ನು ತನಿಖೆ ಮಾಡಲು ವಿಶೇಷ ದಳ ಸ್ಥಾಪಿಸಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಅವರ ಪ್ರಕಾರ, ಸರ್ಕಾರದಲ್ಲಿನ ಬದಲಾವಣೆಯೇ ಈ ಹಿಂದೆ ನಡೆದಿರುವ ಕಾಮಗಾರಿಗಳ ಪರಿಶೀಲನೆಗೆ ಕಾರಣ ಮತ್ತು ಸಕ್ಷಮ ಅಧಿಕಾರಿಗಳಿಂದ ಈಗಾಗಲೇ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಆಗಸ್ಟ್ 5 ರ ಆದೇಶವು 30 ರೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸಲು ನಿರ್ದಿಷ್ಟ ನಿರ್ದೇಶನವನ್ನು ಒಳಗೊಂಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಗಡುವಿನ ಒಳಗೆ ತನಿಖೆ ಮುಗಿದು ವರದಿ ಸಲ್ಲಿಕೆಯಾಗಬೇಕಿತ್ತು. ಆದರೂ, ನಾಲ್ಕು ತಿಂಗಳು ಕಳೆದರೂ ‘1952ರ ತನಿಖಾ ಆಯೋಗಗಳ ಕಾಯ್ದೆ’ಯಡಿ ಆಗಸ್ಟ್ 25ರಂದು ಏಕವ್ಯಕ್ತಿ ತನಿಖಾ ಆಯೋಗವನ್ನು ರಚಿಸಿದ್ದು ಬಿಟ್ಟರೆ ಏನೂ ಆಗಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 am, Tue, 12 December 23