Gift Politics: ಶಾಸಕ ಎಸ್ ಆರ್ ಶ್ರೀನಿವಾಸ್​​ ಸಂಬಂಧಿಯಿಂದ ಕುಕ್ಕರ್​ ಗಿಫ್ಟ್​​: ಮತದಾರ ಘೆರಾವ್​

ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್​ ಸಂಬಂಧಿಕ ಶಿವರಾತ್ರಿ ಉಡುಗೊರೆಯಾಗಿ ಕುಕ್ಕರ್ ಹಂಚಿದ್ದಾರೆ. ಆದರೆ ಓರ್ವ ಮತದಾರ ಕುಕ್ಕರ್ ಬೇಡವೆಂದು ಹಂಚುತಿದ್ದ ಶ್ರೀನಿವಾಸ್ ಸಂಬಂಧಿಗೆ ಮುಖ ಭಂಗ ಮಾಡಿದ್ದಾರೆ.

ತುಮಕೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಮೂರು ರಾಜಕೀಯ ಪಕ್ಷಗಳು, ರಾಜಕೀಯ ವಿರೋಧಿಗಳನ್ನು ಸೋಲಿಸಲು ತಂತ್ರ ಪ್ರತಿತಂತ್ರಗಳನ್ನು ಎಣೆಯುತ್ತಿವೆ. ವಾಗ್ಯುದ್ದ, ಉಚಿತ ಸೌಲಭ್ಯಗಳ ಘೋಷಣೆ ಸೇರಿದಂತೆ ಉಡುಗೊರೆಗಳನ್ನು ನೀಡುತ್ತಿವೆ. ಈ ಗಿಫ್ಟ್​​ ಪಾಲಿಟಿಕ್ಸ್​ ಇಂದು, ನಿನ್ನೆಯದಲ್ಲ, ಸಾರ್ವತ್ರಿಕ ಚುನಾವಣೆ ಪರಿಕಲ್ಪನೆ ಜಾರಿಯಾಗದಾಗಿನಿಂದಲೂ ಇದು ನಡೆದುಕೊಂಡು ಬರುತ್ತಿದೆ. ಆದರೆ ಆಗ ಗೌಪ್ಯವಾಗಿ ನಡೆಯುತ್ತಿರುವುದು ಈಗ ಬಹಿಂಗವಾಗಿ ನಡೆಯುತ್ತಿದೆ. ಇದರಂತೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆಯೇ ಕಳೆದ ಒಂದು ತಿಂಗಳಿನಿಂದ ಗಿಫ್ಟ್​​ ಪಾಲಿಟಿಕ್ಸ್​ ಜೋರಾಗಿಯೇ ನಡೆಯುತ್ತಿದೆ. ಈಗ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ ಕುಕ್ಕರ್ ಪಾಲಿಟಿಕ್ಸ್ ಜೋರಾಗಿದೆ. ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್​ ಸಂಬಂಧಿಕ ಶಿವರಾತ್ರಿ ಉಡುಗೊರೆಯಾಗಿ ಕುಕ್ಕರ್ ಹಂಚಿದ್ದಾರೆ. ಆದರೆ ಓರ್ವ ಮತದಾರ ಕುಕ್ಕರ್ ಬೇಡವೆಂದು ಹಂಚುತಿದ್ದ ಶ್ರೀನಿವಾಸ್ ಸಂಬಂಧಿಗೆ ಮುಖ ಭಂಗ ಮಾಡಿದ್ದಾರೆ.

ತರಹೆವಾರು ಗಿಫ್ಟ್​ ಹಂಚಿಕೆ

1. ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಗಿಫ್ಟ್​ ಪಾಲಿಟಿಕ್ಸ್ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚೆಗಷ್ಟೇ ಹೆಬ್ಬಾಳ್ಕರ್ ಬೆಂಬಲಿಗರು ಮತದಾರರಿಗೆ ಕುಕ್ಕರ್ ಗಿಫ್ಟ್ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ತೆಂಗಿನಕಾಯಿ ಆಣೆ-ಪ್ರಮಾಣ ಮಾಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕ್ಷೇತ್ರದಲ್ಲಿ ಬಿಜೆಪಿ ಮಾಜಿ‌ ಶಾಸಕ ಸಂಜಯ ಪಾಟೀಲ್​ರಿಂದ ತಟ್ಟೆ ಲೋಟವನ್ನು ಮತದಾರರಿಗೆ ಗಿಫ್ಟ್ ನೀಡಿದ್ದರಂತೆ. ಕಾರ್ಯಕ್ರಮ ಭಾಗಿಯಾಗಿದ್ದ ಮಹಿಳೆಯರಿಗೆ ಒಂದು ಸೀರೆ, ಒಂದು ಹಾಟ್ ಬಾಕ್ಸ್ ವಿತರಣೆ ಮಾಡಲಾಗಿದೆ. ಇದರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ಬಿಜೆಪಿ ನಾಯಕರು ಪೈಪೋಟಿಗೆ ಇಳಿದಂತೆ ಕಂಡು ಬಂದಿತ್ತು.

2. ಬೆಳಗಾವಿಯಲ್ಲಿ ಅತ್ತೆ ಹುಬ್ಬಳ್ಳಿಯಲ್ಲಿ ಅಳಿಯನಿಂದ ಗಿಫ್ಟ್ ಹಂಚಲಾಗಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ರಜತ್ ಉಳ್ಳಾಗಡಿಮಠ ಗಿಫ್ಟ್ ರಾಜಕೀಯಕ್ಕೆ ಇಳಿದಿದ್ದರು. ಹುಬ್ಬಳ್ಳಿಯಲ್ಲಿ ರಜತ್ ಉಳ್ಳಾಗಡಿಮಠ ಕುಕ್ಕರ್ ಜೊತೆಗೆ ದೋಸೆ ಹಂಚು, ಅಡುಗೆ ಪಾತ್ರೆ ಜೊತೆಗೆ ಶರ್ಟ್ ಗಿಫ್ಟ್ ಮಾಡಿದ್ದರು. ರಜತ್ ಉಳ್ಳಾಗಡ್ಡಿಮಠ​ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದಾರೆ.

3. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿ ದೀಪಕ್ ಚಿಂಚೋರೆ ಕ್ಷೇತ್ರದ ಮತದಾರರಿಗೆ ಪ್ರವಾಸ ಭಾಗ್ಯ ಒದಗಿಸಿದ್ದರು.

4. ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಾಸಭಾ ಕ್ಷೇತ್ರದ ಉದಗಟ್ಟಿ ಗ್ರಾಮದಲ್ಲಿ ರಾತ್ರಿ ಹೊತ್ತು ಸಕ್ಕರೆ ಪ್ಯಾಕೆಟ್ ಹಂಚುತ್ತಿರುವ ವೀಡಿಯೋ ವೈರಲ್ ಆಗಿತ್ತು. ಮುರಗೇಶ ನೀರಾಣಿ ಸಚಿವರ ಬೆಂಬಲಿಗರು ಮನೆಮನೆಗಳಿಗೆ ತೆರಳಿ ಸಕ್ಕರೆ ಪ್ಯಾಕೆಟ್ ವಿತರಿಸುತ್ತಿರುವುದು ಬಯಲಾಗಿತ್ತು. ಈ ಗಿಫ್ಟ್ ಪಾಲಿಟಿಕ್ಸ್​ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತು.

5. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗಾಗಿ ಹಣದ ಹೊಳೆ ಹರಿದಿದ್ದು. ಈ ಹಿಂದೆ ಮುಸ್ಲಿಂ ಮತಗಳ ಒಲೈಕೆಗೆ ಕವ್ವಾಲಿ ಮಾಡಿಸಿದ್ದ ಸಚಿವ ಎಂಟಿಬಿ ನಾಗರಾಜ್, ಇದೀಗ ಶಿವರಾತ್ರಿಗೆ 60 ಅಡಿ ಎತ್ತರದ ಶಿವ ಲಿಂಗ ಪ್ರತಿಷ್ಠಾಪಿಸಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಜೊತೆಗೆ ಹೋದಕಡೆಯಲೆಲ್ಲ ಸೀರೆ, ಬೆಡ್​ಶಿಟ್​​​​ಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯಲು ಗಾಳ ಹಾಕಿದ್ದಾರೆ.

6. ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದಲ್ಲಿ ಗಿಫ್ಟ್ ರಾಜಕಾರಣ ಜೋರಾಗಿ ನಡೆದಿತ್ತು, ಅದು ಬೇರೆಯದೇ ಶೈಲಿಯಲಿ. ಮಗಳ ಮದುವೆ ನೆಪದಲ್ಲಿ ಮನೆ ಮನೆಗೆ ಸೀರೆ ಹಂಚಿಕೆ ಮಾಡಲಾಗುತ್ತು. ಪಕ್ಷೇತರ ಅಭ್ಯರ್ಥಿ ಎಸ್ ಆರ್ ನವಲಿಹಿರೆಮಠ ಬೆಂಬಲಿಗರು ಸೀರೆ ಹಂಚಿಕೆ ಮಾಡುತ್ತಿದ್ದರು. ಇನ್ನು ಸೀರೆ ಹಂಚಲು ಬಂದವರಿಗೆ ಇಳಕಲ್ ನಗರ ಜೀರಪೇಠೆಯಲ್ಲಿ ಘೆರಾವ್ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Sat, 18 February 23

Web contact

TV9 Kannada

Read More
Follow Us