AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದ್ವೆ, ಯುವತಿಯನ್ನು ಪ್ರಿಯಕರನ ಜೊತೆ ಕಳುಹಿಸಿಕೊಟ್ಟ ಪೋಷಕರು

ತುಮಕೂರಿನಲ್ಲಿ ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಪೊಲೀಸರ ಸಮಕ್ಷಮದಲ್ಲಿ ಎರಡೂ ಕುಟುಂಬಸ್ಥರ ನಡುವೆ ರಾಜೀ ಸಂಧಾನ ನಡೆದಿದ್ದು, ಅಂತಿಮವಾಗಿ ವಧು ತನ್ನ ಪ್ರೇಮಿ ಪಾಲಾಗಿದ್ದಾಳೆ. ಹಾಗಾದ್ರೆ, ಪೊಲೀಸರ ಸಮ್ಮುಖದಲ್ಲೇ ಏನೆಲ್ಲ ಮಾತುಕತೆ ಆಯ್ತು ಎನ್ನುವ ವಿವರ ಇಲ್ಲಿದೆ.

ತುಮಕೂರು: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದ್ವೆ, ಯುವತಿಯನ್ನು ಪ್ರಿಯಕರನ ಜೊತೆ ಕಳುಹಿಸಿಕೊಟ್ಟ ಪೋಷಕರು
ಮದ್ವೆ ಗಲಾಟೆ ಸುಖಾಂತ್ಯ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Aug 27, 2023 | 3:40 PM

Share

ತಮಕೂರು, (ಆಗಸ್ಟ್ 27): ಜಿಲ್ಲೆಯ‌ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ತಾಳಿ ಕಟ್ಟುವ ವೇಳೆ ಮದುವೆ(marriage) ಮುರಿದ ಬಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ತಾಳಿ ಕಟ್ಟುವ ವೇಳೆಯಲ್ಲೇ ಈ ಮದುವೆ ಒಲ್ಲೆ ಎಂದು ವಧು(bride)  ಹಸೆಮಣೆಯಿಂದ ಎದ್ದು ಹೋಗಿದ್ದ ಪ್ರಕರಣವನ್ನು ಕೊಳಾಲ ಪೊಲೀಸರು ರಾಜೀ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಅಂತಿಮವಾಗಿ ರಾಜೀ ಪಂಚಾಯಿತಿ ಮಾಡಿ ಪ್ರೇಮಿಗಳನ್ನು ಒಂದು ಮಾಡಿದ್ದಾರೆ. ಈ ಮದುವೆ ಬೇಡವೇ ಬೇಡ ಎಂದು ಪ್ರಿಯಕರನ ಜೊತೆ ಹೋಗುವುದಾಗಿ ವಧು ದಿವ್ಯಾ ಪಟ್ಟು ಹಿಡಿದಿದ್ದಳು. ಹೀಗಾಗಿ ಕುಟುಂಬಸ್ಥರು ವಿಧಿ ಇಲ್ಲದೇ ವಧುವನ್ನು ಪ್ರಿಯಕರನ ಜೊತೆ ಕಳುಹಿಸಿಕೊಟ್ಟಿದ್ದಾರೆ. ಇನ್ನು ಇನ್ನೇನು ತಾಳಿ ಕಟ್ಟಬೇಕು ಎನ್ನಷ್ಟರಲ್ಲೇ ವಧು ತಗೆದ ತಗಾದೆಯಿಂದ ಮದುವೆ ಮುರಿದುಬಿದ್ದಿದೆ. ಇದರಿಂದ ವರ ನಿರಾಸೆಗೊಂಡು ಸಪ್ಪೆ ಮೊರೆಯಿಂದ ಹೋದರು.

ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಕ್ಕೆ ಹುಡುಗಿ ಜೊತೆ ಮದುವೆ ಸಂಬಂಧ ಮುಂದುವರೆಸಲು ವರ ಹಾಗೂ ಕುಟುಂಬಸ್ಥರು ನಿರಾಕರಿಸಿದ್ದರು. ಅಂತಿಮವಾಗಿ ಮದುವೆಗೆ ನೀಡಿದ್ದ ಚಿನ್ನಾಭರಣ ಹಾಗೂ ಒಂದು ಲಕ್ಷ ಹಣವನ್ನು ವರನ ಕಡೆಯವರಿಗೆ ನೀಡಲು ವಧುವಿನ ತಂದೆ ಒಪ್ಪಿಕೊಂಡಿದ್ದಾರೆ. ಅದರಂತೆ ಕೋಳಾಲ ಪೊಲೀಸರ ಸಮ್ಮುಖದಲ್ಲಿ ವರನ ಕಡೆಯವರು ಮದುವೆ ಖರ್ಚು ಎಂದು ವಧುವಿನ ಕಡೆಯವರಿಂದ ಒಂದು ಲಕ್ಷ ರೂ. ಪಡೆದುಕೊಂಡರು. ಬಳಿಕ ಪೊಲೀಸ್ ಠಾಣೆಯಿಂದ ತಮ್ಮ ತಮ್ಮ ಮನೆಗಳತ್ತ ತೆರಳಿದರು.

ಇದನ್ನೂ ಓದಿ: ತುಮಕೂರು: ಅದ್ಧೂರಿಯಾಗಿ ಆರತಕ್ಷತೆ ಮುಗೀತು, ಇನ್ನೇನು ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು

ಇನ್ನು ಇತ್ತ ತನ್ನ ಪ್ರಿತಮೆಯ ಮದ್ವೆಯಾಗುತ್ತಿದೆ ಎಂದು ಆತಂಕದಲ್ಲೇ ಪ್ರಿಯಕರ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಬಂದಿದ್ದ. ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದ. ಬಳಿ ಮದ್ವೆ ಮನೆಯಲ್ಲಿ ಪ್ರಿಯಕರನ್ನ ಕಂಡು ವಧು ಮದುವೆಗೆ ನಿರಾಕರಿಸಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಗಂಗಹನುಮಯ್ಯ ಹೇಳಿದ್ದಾರೆ.

ಯುವತಿಯ ತಂದೆ ನರಸಿಂಹ ಮೂರ್ತಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಮದುವೆ ಊಟಕ್ಕೆ ಹಾಗೂ ಇತರೆ ಕರ್ಚಿಗೆ 50 ಸಾವಿರ ಕರ್ಚು ಮಾಡಿದ್ದೇನೆ. 16 ಗ್ರಾಂ ಚಿನ್ನ ಕೊಟ್ಟಿದ್ದೇವೆ. ಗಂಡಿನ ಕಡೆಯವರು 1 ಉಂಗ್ರ ಮಾತ್ರ ಹಾಕಿದ್ದು, ಅದನ್ನು ಈಗ ತೆಗೆದುಕೊಂಡು ತೆಗೆದುಕೊಂಡಿಲ್ಲಎನ್ನುತ್ತಿದ್ದಾರೆ. 1 ಲಕ್ಷ ಕೊಡುವುದಾಗಿ ಮಾತುಕತೆಯಾಗಿದೆ. ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು.

ಪ್ರಕರಣದ ಹಿನ್ನೆಲೆ

ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಯುವತಿ ನವ್ಯಾಳ (ಹೆಸರು ಬದಲಾಯಿಸಲಾಗಿದೆ) ಮದುವೆ ದೊಡ್ಡಬಳ್ಳಾಪುರ ತಾಲೂಕಿನ ಮೂಡ್ಲಕಾಳೇನಹಳ್ಳಿಯ ವೆಂಕಟೇಶ್ ಜೊತೆ ನಿಶ್ಚಯವಾಗಿತ್ತು. ಮೂರು ತಿಂಗಳು ಈ ಹಿಂದೆಯೇ ಇಬ್ಬರಿಗೂ ಎಂಗಜ್ಮೆಂಟ್ ಆಗಿತ್ತು. ಒಂದು ಲಕ್ಷ ರೂ. ಖರ್ಚು ಮಾಡಿ ಎಂಗಜ್ಮೆಂಟ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಅಲ್ಲದೇ ನಿನ್ನೆ (ಆಗಸ್ಟ್ 27) ರಾತ್ರಿ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವೂ ಮುಗಿದಿತ್ತು. ನವ್ಯಾ ಹಾಗೂ ವೆಂಕಟೇಶ್ ಸ್ಟೇಜ್​ ಮೇಲೆ ಒಬ್ಬರಿಗೊಬ್ಬರು ನಗುನಗುತ್ತಲೇ ಫೋಟೋಗೆ ಫೋಸ್ ನೀಡಿದ್ದರು. ಇನ್ನು ಎರಡೂ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಹ ನವ ಜೋಡಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿ ಹೋಗಿದ್ದರು. ಆದ್ರೆ, ಇನ್ನೇನು ಬೆಳಗ್ಗೆ ಮುಹೂರ್ತದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ನವ್ಯಾ ಈ ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಳು. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡವೇ ಬೇಡ ಎಂದ ವಧು ಪಟ್ಟುಹಿಡಿದಿದ್ದಳು. ಇದರಿಂದ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದ್ದು, 2 ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಈ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದೀಗ ಅಂತಿಮವಾಗಿ ಮದುವೆ ಮುರಿದುಬಿದ್ದಿದ್ದು,  ಪೊಲೀಸರ ಸಮಕ್ಷಮದಲ್ಲಿ ಎಲ್ಲಾ ಗೊಂದಲಗಳನ್ನು ಬಗೆಹರಿಸಿದ್ದಾರೆ.

Published On - 3:33 pm, Sun, 27 August 23