
ತುಮಕೂರು, ಜನವರಿ 18: ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದ ಕಾರಣ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದಿದೆ. ಸೈಯ್ಯದ್ ಅಕ್ರಮ್(42) ಮೃತ ದುರ್ದೈವಿಯಾಗಿದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದು, ನಮಗಾದ ತೊಂದರೆ ಮತ್ಯಾರಿಗೂ ಆಗಬಾರದು ಎಂದು ಅಲವತ್ತುಕೊಂಡಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೈಯ್ಯದ್ ಅಕ್ರಮ್ರನ್ನು ಸೋದರ ನಯಾಜ್ ಜ.16ರಂದು ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ರೋಗಿಯ ಬಿಪಿ ಕಡಿಮೆಯಾಗಿದೆ ಎಂದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ರೋಗಿಯ ಸ್ಥಳಾಂತರಕ್ಕೆ ಸುಮಾರು 1 ಗಂಟೆ ಕಾದರೂ ಆ್ಯಂಬುಲೆನ್ಸ್ ಸಿಕ್ಕಿಲ್ಲ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ರೂ ಚಾಲಕನಿಲ್ಲ ಎನ್ನಲಾಗಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ತಮ್ಮ ಸಹೋದರ ಮೃತಪಟ್ಟಿದ್ದಾನೆ ಎಂಬುದು ನಯಾಜ್ ಆರೋಪ.
ಇದನ್ನೂ ಓದಿ: ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?
ಇನ್ನು ಈ ಆಸ್ಪತ್ರೆಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದಿದ್ದು ಮೃತ ಸೈಯ್ಯದ್ ತಂದೆ. ಜನರ ಜೀವ ಉಳಿಸಲು ಆಸ್ಪತ್ರೆಯ ಅಗತ್ಯ ಮನಗಂಡಿದ್ದ ಅವರು, ಕೋಟ್ಯಂತರ ಮೌಲ್ಯದ ಒಂದೂವರೆ ಎಕರೆ ಭೂಮಿಯನ್ನು ನೀಡಿದ್ದರು. ಆದರೆ ದುರ್ದೈವ ಎಂಬಂತೆ ಅದೇ ಜಾಗದಲ್ಲೀಗ ಅವರ ಮಗ ಸರಿಯಾಗಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ. ನನ್ನ ಸಹೋದರನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಗೆ ಕೂಡಲೇ ಅಗತ್ಯ ತಜ್ಞ ವೈದ್ಯರು, ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಮೂಲಕ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ನಯಾಜ್ ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.