ಸುಮನಹಳ್ಳಿ ಚಿತಾಗಾರದಲ್ಲಿ ಒಂದೇ ದಿನ 27 ಶವಗಳ ಅಂತ್ಯಕ್ರಿಯೆ… ಏರುತ್ತಿದೆ ಸಾವಿನ ಪ್ರಮಾಣ

ಸುಮನಹಳ್ಳಿ ಚಿತಾಗಾರದಲ್ಲಿ ನಿನ್ನೆ ಒಂದೇ ದಿನ 27 ಶವಗಳ ಅಂತ್ಯಕ್ರಿಯೆ ನಡೆದಿದೆ. 22 ಕೊವಿಡ್ ಸೋಂಕಿತರ ಮೃತದೇಹ ಸೇರಿದಂತೆ 27 ಮೃತದೇಹ ಅಂತ್ಯಕ್ರಿಯೆ ನಡೆಸಿರುವುದಾಗಿ ಚಿತಾಗಾರ ಸಿಬ್ಬಂದಿ ತಿಳಿಸಿದ್ದಾರೆ.

ಸುಮನಹಳ್ಳಿ ಚಿತಾಗಾರದಲ್ಲಿ ಒಂದೇ ದಿನ 27 ಶವಗಳ ಅಂತ್ಯಕ್ರಿಯೆ... ಏರುತ್ತಿದೆ ಸಾವಿನ ಪ್ರಮಾಣ
ಸಂಗ್ರಹ ಚಿತ್ರ
ಆಯೇಷಾ ಬಾನು

Updated on: Apr 18, 2021 | 1:47 PM

ಬೆಂಗಳೂರು: ಕಿಲ್ಲರ್ ಕೊರೊನಾ ಜನರ ದೇಹ ಸೇರಿ ಜನರ ಜೀವ ತೆಗೆಯುತ್ತಿದೆ. ದಿನದಿಂದ ದಿನಕ್ಕೆ ಕೊರೊನಾಗೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸುಮನಹಳ್ಳಿ ಚಿತಾಗಾರದಲ್ಲಿ ನಿನ್ನೆ ಒಂದೇ ದಿನ 27 ಶವಗಳ ಅಂತ್ಯಕ್ರಿಯೆ ನಡೆದಿದೆ. 22 ಕೊವಿಡ್ ಸೋಂಕಿತರ ಮೃತದೇಹ ಸೇರಿದಂತೆ 27 ಮೃತದೇಹ ಅಂತ್ಯಕ್ರಿಯೆ ನಡೆಸಿರುವುದಾಗಿ ಚಿತಾಗಾರ ಸಿಬ್ಬಂದಿ ತಿಳಿಸಿದ್ದಾರೆ. ನಿನ್ನೆ ತಡರಾತ್ರಿ 1.30ರವರೆಗೂ ಶವಗಳ ಅಂತ್ಯಕ್ರಿಯೆ ನಡೆದಿದೆ.

ಇಂದು ಮತ್ತೆ ಮೃತರ ಅಂತ್ಯಕ್ರಿಯೆಗೆ ಚಿತಾಗಾರದ ಬಳಿ ಕ್ಯೂ ಕಾಣಿಸುತ್ತಿದೆ. ಕೊರೊನಾಗೆ ಬಲಿಯಾದವರ ಮೃತದೇಹಗಳು ಚಿತಾಗಾರ ಬಳಿ ಬರುವ ಮಾಹಿತಿ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಚಿತಾಗಾರ ಬಳಿ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ನು ತಾಯಿಯ ಮೃತದೇಹಕ್ಕಾಗಿ ಮಗ ಕಾದುಕುಳಿತಿದ್ದಾರೆ. ಏಪ್ರಿಲ್ 10ರಂದು ಎದೆ ನೋವು ಎಂದು ದಾಖಲಾಗಿದ್ದ ತಾಯಿಗೆ ಏಪ್ರಿಲ್ 11ರಂದು ಕೊರೊನಾ ಇರುವುದು ದೃಢಪಟ್ಟಿತ್ತು. ಬಳಿಕ ನೆನ್ನೆ ಸಂಜೆ ಇದ್ದಕಿದ್ದಂತೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ವೈದ್ಯರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಈಗ ತಾಯಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅಮ್ಮ ಇಲ್ಲಿಗೆ ಬರ್ತಾರಂತೆ ಎಂದು ತಾಯಿಯ ಶವಕ್ಕಾಗಿ ಕಾಯುತ್ತಿರುವ ವ್ಯಕ್ತಿ ದುಃಖದಿಂದ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ ಮತ್ತೆ ಸುಮನಹಳ್ಳಿ ಚಿತಾಗಾರಕ್ಕೆ 6 ಶವಗಳು ಬಂದಿವೆ. ಬೆಳಗ್ಗೆಯಿಂದ 2 ಮೃತದೇಹಗಳ ಅಂತ್ಯಕ್ರಿಯೆಯಾಗಿದೆ ಕೊರೊನಾ ಸೋಂಕಿನಿಂದ ಮೃತಪಟ್ಟ 6 ಜನರ ಅಂತ್ಯಕ್ರಿಯೆ ಭಾಕಿ ಇದೆ. ಇನ್ನು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನಿನ್ನೆ 19 ಶವಸಂಸ್ಕಾರ ಮಾಡಲಾಗಿದೆ. ಇಂದು ಬೆಳಗ್ಗೆ 2 ಮೃತದೇಹ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಚಿತಾಗಾರದಲ್ಲಿ ಮೃತರ ಕುಟುಂಬಸ್ಥರ ಅಳಲು ನೋಡಲು ಆಗುತ್ತಿಲ್ಲ. ವೈದ್ಯರು, ಸಿಬ್ಬಂದಿ, ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಎಂಬ ಮಹಾಮಾರಿ ಜನರ ಜೊತೆ ಆಟವಾಡಲು ಶುರು ಮಾಡಿದೆ. ಜನ ಕೊರೊನಾ ಸೋಂಕಿನ ಲಕ್ಷಣ ತಿಳಿಯದೆ ಮೋಸ ಹೋಗುತ್ತಿದ್ದಾರೆ. ಸಾವಿನ ಸನಿಹಕ್ಕೆ ಹೋಗುತ್ತಿದ್ದಾರೆ.

ಅನಾಥವಾದ ಶವ
ಇನ್ನು ಬೆಂಗಳೂರಲ್ಲಿ ಸೋಂಕಿತರ ಶವ ಪಡೆಯಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಸೋಂಕು ತಮಗೂ ಸೋಂಕು ಹರಡಬಹುದು ಎಂಬ ಭಯಕ್ಕೆ ಶವದ ಅಂತ್ಯಸಂಸ್ಕಾರದ ಬಳಿಕ ಚಿತಭಸ್ಮ ಪಡೆಯಲೂ ಚಿತಾಗಾರ ಬಳಿ ಬರುತ್ತಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏಪ್ರಿಲ್ 5ರಿಂದ ಅನಾಥವಾಗಿ ಸೋಂಕಿತನ ಮೃತದೇಹ ಇರಿಸಲಾಗಿದೆ. ಇದುವರೆಗೂ ಮೃತ ಸೋಂಕಿತನ ಸಂಬಂಧಿಕರು ಯಾರು ಬಂದಿಲ್ಲ. ಶವಾಗಾರದ ಕೋಲ್ಡ್ ಸ್ಟೋರೇಜ್​ನಲ್ಲಿ ಸೋಂಕಿತನ ಶವ ಇರಿಸಲಾಗಿದೆ. ತುಂಬಾ ದಿನ ಇಟ್ಟಿದ್ದ ಹಿನ್ನೆಲೆಯಲ್ಲಿ ಶವ ಡಿ-ಕಂಪೋಸ್ ಆಗಿದೆ. ಪೇಷಂಟ್ ಜೀವಂತವಿದ್ದಾಗ ಕುಟುಂಬಸ್ಥರ ಫೋನ್ ಆನ್ ಇತ್ತು. ಆದ್ರೆ ಸೋಂಕಿತ ಮೃತಪಟ್ಟ ಸುದ್ದಿ ಕೇಳ್ತಿದ್ದಂಗೆ ಫೋನ್​ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗ್ತಿದೆ, ದಿನಕ್ಕೆ 20-22 ಶವ ಬರ್ತಿದೆ ಎಂದ ಚಿತಾಗಾರ ಸಿಬ್ಬಂದಿ

Published On - 11:07 am, Sun, 18 April 21

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us