ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್

ಮನೆಯ ಸುತ್ತಲಿನ ಗಿಡ ಮರಗಳ ತರಗಲೆಗಳನ್ನು ಬಳಸಿ, ಸಾವಯವ ಗೊಬ್ಬರ ತಯಾರಿಸಿದ್ದು, ಪೂರ್ತಿ ತರಕಾರಿ ಕೃಷಿಯನ್ನು ಸಾವಯವ ‌ರೀತಿಯಲ್ಲಿ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್
ಕೃಷಿ ಕಾರ್ಯದಲ್ಲಿ ತೊಡಗಿರುವ ಉಡುಪಿ ಜಿಲ್ಲಾಧಿಕಾರಿ
Edited By:

Updated on: Mar 28, 2021 | 10:05 PM

ಉಡುಪಿ: ವೃತ್ತಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು, ಪ್ರವೃತ್ತಿಯಾಗಿ ಕೃಷಿ ಮಾಡುವುದರಲ್ಲಿ ಮುಂದಾಗಿರುವ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯ ಉತ್ಸಾಹ ನಿಜಕ್ಕೂ ಇತರರಿಗೆ ಮಾದರಿ. ತಾನೋರ್ವ ಐಎಎಸ್ ಅಧಿಕಾರಿ ಎಂದು ಹಮ್ಮು ಬಿಮ್ಮಿಲ್ಲದೇ ತನ್ನ ಬಂಗ್ಲೆಯ ಸುತ್ತಲೂ ಸಾವಯವ ತರಕಾರಿ ಕೃಷಿ ಮಡುತ್ತಿದ್ದಾರೆ ಕೃಷ್ಣನೂರಿನ ಜಿಲ್ಲಾಧಿಕಾರಿಗಳು.

ಒಬ್ಬ ರೈತ ಯಾವ ರೀತಿ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಾರೋ ಹಾಗೇ ಟಿ ಶರ್ಟ್ ಧರಿಸಿ, ಲುಂಗಿ ಕಟ್ಕೊಂಡು, ತರಕಾರಿ ಗಿಡದ ಮಧ್ಯೆ ಕಳೆ ಕೀಳುತ್ತಾ, ನೀರು ಹಾಯಿಸುತ್ತಾ ಇರುವ ಈ ವ್ಯಕ್ತಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ್. ಕಚೇರಿಯ ಒತ್ತಡದ ಕೆಲಸದ ನಡುವೆಯೇ ತರಕಾರಿ ಕೃಷಿ ಮಾಡುವುದು ಎಂದರೆ ಇವರಿಗೆ ಪಂಚ ಪ್ರಾಣ.

ಹೀಗಾಗಿ ತಮ್ಮ ಬಂಗ್ಲೆ ಸುತ್ತಲೂ ಇವರು ಹೂವಿನ ಗಿಡಗಳ ಮಧ್ಯೆಯೇ ತೊಂಡೆ, ಬೆಂಡೆ, ಟೊಮೆಟೊ, ಬಸಲೆ, ಮಟ್ಟು ಗುಳ್ಳ ಹೀಗೆ ನಾನಾ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಮನೆಯ ಸುತ್ತಲಿನ ಗಿಡ ಮರಗಳ ತರಗಲೆಗಳನ್ನು ಬಳಸಿ, ಸಾವಯವ ಗೊಬ್ಬರ ತಯಾರಿಸಿದ್ದು, ಪೂರ್ತಿ ತರಕಾರಿ ಕೃಷಿಯನ್ನು ಸಾವಯವ ‌ರೀತಿಯಲ್ಲಿ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಗೀಡಗಳಿಗೆ ನೀರು ಹಾಕುತ್ತಿರುವ ಜಿಲ್ಲಾಧಿಕಾರಿ ಜಿ. ಜಗದೀಶ್

ಕೃಷಿ ಕುಟುಂಬದಿಂದ ಬಂದ ಇವರು ಶಾಲಾ ದಿನಗಳಲ್ಲಿ ಕೃಷಿ ಕೆಲಸಗಳನ್ನು ಮುಗಿಸಿ ಶಾಲೆಗೆ ತೆರಳುತ್ತಿದ್ದರಂತೆ. ಹೀಗಾಗಿ ಬಾಲ್ಯದಿಂದಲೂ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಕೃಷಿ ಎಂದರೆ ಇಷ್ಟ. ಉಡುಪಿಗೆ ಬಂದಾಗಿನಿಂದ ಬಂಗ್ಲೆ ಸುತ್ತ ತರಕಾರಿ ಕೃಷಿ ಮಾಡುತ್ತಿರುವ ಇವರು, ಮಾವು, ಚಿಕ್ಕು, ಹಲಸು ಹೀಗೆ ಹಲವು ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಇಷ್ಟೇ ಅಲ್ಲದೇ ಎರಡು ಜೇನುಗೂಡುಗಳನ್ನು ಇಟ್ಟು ಜೇನು ಕೃಷಿಯನ್ನು ಮಾಡುತ್ತಿದ್ದಾರೆ. ಬೆಳಗ್ಗಿನ ಸಮಯದಲ್ಲಿ ಕೃಷಿ ಕಾರ್ಯದಲ್ಲಿ ಜಿಲ್ಲಾಧಿಕಾರಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಬೆಂಡೆ ಗೀಡ

ಒತ್ತಡದ ಕೆಲಸದ ರಿಲ್ಯಾಕ್ಸ್​ಗೆ ಇದು ಸಹಕಾರಿ. ಜೊತೆಗೆ ಮನೆಗೆ ಬೇಕಾದ ಪೌಷ್ಟಿಕಾಂಶ ತರಕಾರಿ ಇಲ್ಲೇ ಸಿಕ್ಕಂತಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಜೇನು ಸೇವನೆ ಬದಲು ನಾವೇ ತಯಾರಿಸಿದ ಜೇನು ಉತ್ತಮ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಡಿಸಿ ಮನೆಯ ಪಕ್ಕದಲ್ಲಿಯೇ ತರಕಾರಿ ಬೆಳೆದಿದ್ದಾರೆ

ಒಟ್ಟಿನಲ್ಲಿ ಹಳ್ಳಿ ಮಂದಿಯೇ ಕೃಷಿಯಿಂದ ವಿಮುಖರಾಗಿ ಪಟ್ಟಣ ಸೇರುವ ಈ ಕಾಲಘಟ್ಟದಲ್ಲಿ ಡಿಸಿಯವರ ಕೃಷಿ ಪ್ರೀತಿ ಮೆಚ್ಚುವಂತದ್ದು. ವೈಟ್ ಕಾಲರ್ ಕೆಲಸ ಬೇಕು ಎಂದು ಕೃಷಿಯನ್ನು ಕೀಳಾಗಿ ಕಾಣುವವರಿಗೆ ಜಿಲ್ಲಾಧಿಕಾರಿಯ ಈ ಕಾರ್ಯ ನಿಜಕ್ಕೂ ಮಾದರಿಯಾಗಲಿದೆ.

ಇದನ್ನೂ ಓದಿ:

ಪರಿಸರ ಕಾಳಜಿಯಿಂದ ಇತರರಿಗೆ ಮಾದರಿಯಾದ ವಿಜಯಪುರದ ಯುವಕರು

Mann Ki Baat: ಜೇನುಕೃಷಿಯನ್ನು ಆದಾಯದ ಮಾರ್ಗವಾಗಿ ರೈತರು ಸದುಪಯೋಗಪಡಿಸಿಕೊಳ್ಳಬೇಕು; ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ