ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಶಬರಿ ಕಾಲೋನಿಯ ನಿವಾಸಿ ಶಿವಾನಂದ ಯಮ್ಮಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಸಾರ್ಥಕ ಸೇವೆ ಸಲ್ಲಿಸಿದ ಶಿವಾನಂದ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅರವತ್ತೆರಡು ವರ್ಷದ ಶಿವಾನಂದ ಸದ್ಯ ಮೃತಪಟ್ಟಿದ್ದಾರೆ.
ತಮ್ಮ ತಂದೆ ಬದುಕಿನುದ್ದಕ್ಕೂ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಅನೇಕ ಜನರಿಗೆ ಬೇಕಾಗಿದ್ದವರು. ಹೀಗಾಗಿ ಅವರ ಸಾವಿನಲ್ಲೂ ನಾವು ಸಾರ್ಥಕ ಸೇವೆ ಮಾಡಬೇಕು ಎಂದು ನಿರ್ಧರಿಸಿ, ಕುಟುಂಬಸ್ಥರೆಲ್ಲ ಚರ್ಚಿಸಿ ನೇತ್ರದಾನ ಮಾಡುವ ನಿರ್ಧಾರಕ್ಕೆ ಬಂದೆವು ಎಂದು ಶಿವಾನಂದ ಅವರ ಮಗಳು ಸೌಮ್ಯ ಹೇಳಿದ್ದಾರೆ .
ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ನಗರದ ವೈದ್ಯ ಡಾ.ಚಂದ್ರಶೇಖರ ಕೇಲಗಾರ ನೇತೃತ್ವದಲ್ಲಿ ಮೃತ ಶಿವಾನಂದರ ಎರಡು ಕಣ್ಣುಗಳನ್ನು ಸಂಗ್ರಹಿಸಲಾಯಿತು. ನಂತರ ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ಮೃತ ಶಿವಾನಂದ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಮೃತರ ಕುಟುಂಬದವರು ಹಾಗೂ ಸಂಬಂಧಿಕರು ಮೃತರ ಸಾವಿನ ದುಃಖ ಮರೆತು ಕಣ್ಣಿಲ್ಲದವರಿಗೆ ಕಣ್ಣಾಗುವ ಕೆಲಸ ಮಾಡಿದರು. ಇನ್ನು ಕುಟುಂಬದ ಈ ಕಾರ್ಯಕ್ಕೆ ಮೃತರ ದರ್ಶನಕ್ಕೆ ಬಂದಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾವಿನ ನಂತರ ನೇತ್ರದಾನ ಮಾಡಲು ಬದುಕಿದ್ದಾಗಲೆ ಪತಿ ಇಚ್ಛೆ ವ್ಯಕ್ತಪಡಿಸಿದ್ದರು. ಇದರಿಂದ ಅಂದರಿಗೆ ದೃಷ್ಟಿ ಬರಲಿ. ಕತ್ತಲಲ್ಲಿ ಇರುವ ಅಂದರಿಗೆ ಒಳ್ಳೆಯದಾಗಲಿ ಎಂದು ಪತಿಯ ಇಚ್ಛೆಯಂತೆ ಈ ಕಾರ್ಯ ಮಾಡಿದ್ದೇವೆ ಎಂದು ಮೃತ ಶಿವಾನಂದ ಅವರ ಪತ್ನಿ ಪುಷ್ಪಾವತಿ ಹೇಳಿದ್ದಾರೆ.
ಸಾವಿನ ನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ಮೂಡನಂಬಿಕೆಗಳಿಂದಾಗಿ ಅಥವಾ ಇನ್ನೀತರ ಕಾರಣಗಳಿಂದಾಗಿ ದಾನ ಮಾಡಲು ಹಿಂಜರಿಯುವ ಈ ಕಾಲದಲ್ಲಿ ನೇತ್ರದಾನದಿಂದ ಇಬ್ಬರು ಅಂದರಿಗೆ ದೃಷ್ಟಿ ನೀಡಬಹುದು. ಈ ನಿಟ್ಟಿನಲ್ಲಿ ಶಿವಾನಂದ ಯಮ್ಮಿಯವರ ಕುಟುಂಬದವರು ಮಾಡಿರುವುದು ನಿಜಕ್ಕೂ ಮಾದರಿಯ ಕೆಲಸ.
ಇದನ್ನೂ ಓದಿ: