ಕರಾವಳಿಯಲ್ಲಿ ಗುಪ್ತವಾಗಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದೆ: ಶಾಸಕ ರಘುಪತಿ ಭಟ್ ಗಂಭೀರ ಆರೋಪ
ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದರು.

ಉಡುಪಿ: ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು (Terrorist activities) ನಡೆಯುತ್ತಿವೆ. ಇದಕ್ಕೆ ಸಿಎಫ್ಐ, ಪಿಎಫ್ಐ ಸಂಘಟನೆಗಳು ಉಗ್ರರಿಗೆ ಸಹಕಾರ ಕೊಡುತ್ತಿವೆ. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದರು. ನಗರದಲ್ಲಿ ಮಾತನಾಡಿದ ಅವರು, ಬಾಬರ್ನ ಕಾಲದಿಂದಲೂ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ. ಸಾವಿರಾರು ವರ್ಷದಿಂದ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಒದ್ದಾಡುತ್ತಿದ್ದಾರೆ. ಭಾರತ ಒಂದು ಜಾತ್ಯತೀತ ರಾಷ್ಟ್ರ, ಅದು ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯುತ್ತದೆ. ಯಾವುದೇ ಕಾರಣಕ್ಕೂ ಭಾರತವನ್ನ ಮುಸ್ಲಿಂ ರಾಷ್ಟ್ರ ಮಾಡಲು ಬಿಡಲ್ಲ ಎಂದು ಶಾಸಕ ರಘುಪತಿ ಭಟ್ ಖಡಕ್ ಆಗಿ ಹೇಳಿದರು.
ಯುಪಿ, ಕೋಲ್ಕತ್ತಾದಿಂದ ಪ್ರವಚನ ಮಾಡಲು ಕೆಲವರು ಬರುತ್ತಿದ್ದಾರೆ. ಹೀಗೆ ಪ್ರವಚನಕ್ಕೆಂದು ಬಂದವರು ಬೇರೆ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂಗಳೂರಿನಲ್ಲಿ ಎನ್ಐಎಯ ಒಂದು ಘಟಕ ಸ್ಥಾಪನೆ ಆಗಬೇಕು. ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಿದ್ದರಿಂದ ದೊಡ್ಡ ಅವಘಡ ಸಂಭವಿಸಿಲ್ಲ. ಕರಾವಳಿ ಭಾಗಕ್ಕೆ ಈ ಬೆಳವಣಿಗೆ ಬಹಳ ಆತಂಕಕಾರಿ. ಸಂಶಯಾಸ್ಪದ ಚಟುವಟಿಕೆ ಕಂಡು ಬಂದರೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು. ನಾವು ಎಚ್ಚೆತ್ತುಕೊಳ್ಳುವಂತಹ ಕಾಲ ಬಂದಿದೆ ಎಂದು ಹೇಳಿದರು.
ಹಿಂದೂ, ಮುಸಲ್ಮಾನ, ಕ್ರೈಸ್ತರು ಎಲ್ಲರೂ ಜಾಗೃತರಾಗಬೇಕು. ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಭಯೋತ್ಪಾದಕ ಚಟುವಟಿಕೆ ನಡೆಸುವ ಸಮುದಾಯದವರೇ ಪೊಲೀಸರಿಗೆ ಮಾಹಿತಿ ಕೊಡಬೇಕು. ಸಂಶಯಾಸ್ಪದ ಚಟುವಟಿಕೆ ಮಾಡುವವರ ಪಟ್ಟಿ ಪೊಲೀಸರ ಬಳಿ ಇದೆ. ಆ ಪಟ್ಟಿ ಆಧರಿಸಿ ತೀವ್ರ ವಿಚಾರಣೆ ಮಾಡಬೇಕು.
ಶರೀಫ್ ಹಿಂದು ಭಯೋತ್ಪಾದಕ ಎಂದು ಬಿಂಬಿಸಲು ಯತ್ನಿಸಿದ್ದ. ಚುನಾವಣೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ಗೂಬೆಕೂರಿಸುವ ಪ್ರಯತ್ನ ನಡೆದಿತ್ತು. ಜೀವ ಹಾನಿ ಮಾಡಿಕೊಂಡು ಭಯೋತ್ಪಾದನೆ ಮಾಡುವುದು ಯಾವ ಧರ್ಮದ ಪ್ರಚೋದನೆಯು ನನಗೆ ಗೊತ್ತಾಗುತ್ತಿಲ್ಲ. ತಲೆಗೆ ಅಂದ ಶ್ರದ್ಧೆ ತುಂಬಿಸುವವರನ್ನು ಮೊದಲು ಟಾರ್ಗೆಟ್ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Wed, 23 November 22