KED Solarization: ವಿದ್ಯುತ್​ ಸಮಸ್ಯೆ ಸಮ್ಮುಖದಲ್ಲಿ ಕರ್ನಾಟಕದಲ್ಲಿ ಲಕ್ಷಗಟ್ಟಲೆ ನೀರಾವರಿ ಪಂಪ್‌ಗಳಿಗೆ ಶಕ್ತಿ ತುಂಬಲಿದೆ ಸೌರಶಕ್ತಿ!

Solarization of irrigation pumps: ಕರ್ನಾಟಕ ಸರ್ಕಾರವು 34 ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪ್‌ಗಳಿಗೆ ವಿದ್ಯುತ್ ಸಬ್ಸಿಡಿಯಾಗಿ ವರ್ಷಕ್ಕೆ 15,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಇದರಿಂದ ಪ್ರತಿ ವರ್ಷ 1 ಲಕ್ಷ ಪಂಪ್‌ಗಳನ್ನು ಸೋಲಾರ್‌ ಪವರ್​ಗೆ ಪರಿವರ್ತಿಸಲು ಸಾಧ್ಯವಾಗುತ್ತದೆ. ಯೋಜನೆಯಡಿ ಸೌರ ಫಲಕಗಳನ್ನು ಸ್ಥಾಪಿಸಲು ಪ್ಲಾಟ್‌ಗಳನ್ನು (plots -ಖಾಲಿ ಜಾಗ) ಗುರುತಿಸಲಿದೆ.

KED Solarization: ವಿದ್ಯುತ್​ ಸಮಸ್ಯೆ ಸಮ್ಮುಖದಲ್ಲಿ ಕರ್ನಾಟಕದಲ್ಲಿ ಲಕ್ಷಗಟ್ಟಲೆ ನೀರಾವರಿ ಪಂಪ್‌ಗಳಿಗೆ ಶಕ್ತಿ ತುಂಬಲಿದೆ ಸೌರಶಕ್ತಿ!
ಕರ್ನಾಟಕದಲ್ಲಿ ಲಕ್ಷಗಟ್ಟಲೆ ನೀರಾವರಿ ಪಂಪ್‌ಗಳಿಗೆ ಶಕ್ತಿ ತುಂಬಲಿದೆ ಸೌರಶಕ್ತಿ!
Follow us
|

Updated on:Oct 31, 2023 | 10:24 AM

ಬೆಂಗಳೂರು: ಕರ್ನಾಟಕ ಇಂಧನ ಇಲಾಖೆಯು (Karnataka energy department) ಪ್ರತಿ ವರ್ಷ ಸಬ್ಸಿಡಿಯಾಗಿ ( subsidy) ಖರ್ಚು ಮಾಡುವ ಗಣನೀಯ ಪ್ರಮಾಣದ ಹಣವನ್ನು ಉಳಿಸಲು ಲಕ್ಷಾಂತರ ನೀರಾವರಿ ಪಂಪ್‌ಗಳನ್ನು (irrigation pumps) ಸೌರಶಕ್ತಿಗೆ ಪರಿವರ್ತಿಸುವ ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ. ಸೋಲಾರೈಸೇಶನ್ ಯೋಜನೆಯಡಿ (solarization scheme), ಮುಖ್ಯವಾಗಿ ನೀರಾವರಿ ಪಂಪ್‌ಗಳಿಗೆ ವಿದ್ಯುತ್ ಪೂರೈಸುವ ಉಪ-ಕೇಂದ್ರಗಳ ಬಳಿ ಸೌರ ಫಲಕಗಳನ್ನು ಸ್ಥಾಪಿಸಲು ಪ್ಲಾಟ್‌ಗಳನ್ನು ಗುರುತಿಸಲು ಪ್ರಾರಂಭಿಸಿದೆ. ಕಂದಾಯ ಭೂಮಿಯನ್ನು 1 ಎಕರೆಗೆ ಗುತ್ತಿಗೆ ಆಧಾರದ ಮೇಲೆ ಮತ್ತು ಖಾಸಗಿ ಭೂಮಿಯನ್ನು ಮಾರುಕಟ್ಟೆ ದರದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುವುದು.

“ಸರ್ಕಾರವು ಎರಡು ಹಂತಗಳಲ್ಲಿ ಸೋಲಾರೈಸೇಶನ್‌ನಲ್ಲಿ ಕೆಲಸ ಮಾಡುತ್ತಿದೆ. ಒಂದು, ರೈತರ ಒಡೆತನದ ಸ್ವತಂತ್ರ ನೀರಾವರಿ ಪಂಪ್ ಸೆಟ್‌ಗಳು (ಐಪಿ irrigation pump sets -IP) ಮತ್ತು ಇನ್ನೊಂದು ಸಬ್‌ಸ್ಟೇಷನ್‌ಗಳ ಸ್ಥಾಪನೆ ಮೂಲಕ. ಐಪಿ ಸೆಟ್‌ಗಳಿಗೆ 70-80% ವಿದ್ಯುತ್ ಪೂರೈಸುವ ಸಬ್‌ಸ್ಟೇಷನ್‌ಗಳನ್ನು ಮಾತ್ರ ಇದಕ್ಕಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ರಾಜ್ಯದಲ್ಲಿ 34 ಲಕ್ಷಕ್ಕೂ ಅಧಿಕ ಐಪಿ ಸೆಟ್‌ಗಳಿದ್ದು, ಇವುಗಳಿಗೆ ಸರ್ಕಾರ ಪ್ರತಿ ವರ್ಷ 15 ಸಾವಿರ ಕೋಟಿ ರೂ.ಗಳನ್ನು ವಿದ್ಯುತ್ ಸಬ್ಸಿಡಿಯಾಗಿ ವ್ಯಯಿಸುತ್ತದೆ. “ವಾರ್ಷಿಕವಾಗಿ ಒಂದು ಲಕ್ಷ ಐಪಿ ಸೆಟ್‌ಗಳನ್ನು ಸೋಲಾರೈಸ್ ಮಾಡುವುದು ಗುರಿಯಾಗಿದೆ. ಈ ವರ್ಷ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ 30,000 ಐಪಿ ಸೆಟ್‌ಗಳ ಗುರಿ ಹೊಂದಲಾಗಿದೆ. ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಮೀಸಲಾದ ಸಾಫ್ಟ್‌ವೇರ್ ಅನ್ನು ಸಹ ರಚಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೌರ ವಿದ್ಯುತ್ ಉತ್ಪಾದನೆಯನ್ನು ವಿಕೇಂದ್ರೀಕರಿಸುವುದು ಮತ್ತು ಉಷ್ಣ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಮೂಲಕ ಒಟ್ಟಾರೆ ವಿದ್ಯುತ್ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಯೋಜನೆಯ ಎರಡನೇ ಗುರಿಯಾಗಿದೆ. ಈ ಪ್ರಯತ್ನದ ಅಂಗವಾಗಿ ಪಾವಗಡ ಸೋಲಾರ್ ಪಾರ್ಕ್‌ನತ್ತ ಗಮನ ಹರಿಸಲಿದೆ.

ಪ್ರಸ್ತುತ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಗೆ ಪ್ರತಿ ಯೂನಿಟ್‌ಗೆ 5 ರೂ. ದರವಿದೆ. ಆದರೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪ್ರಕಾರ ಸೌರಶಕ್ತಿ ಪ್ರತಿ ಯೂನಿಟ್‌ಗೆ ಕೇವಲ 3.17 ರೂ. ಮಾತ್ರ.

ಸ್ವಾಧೀನಪಡಿಸಿಕೊಳ್ಳಲು ಜಮೀನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಯ್ಕೆಯ ಮಾನದಂಡವೆಂದರೆ ಕಂದಾಯ ಭೂಮಿ ಯಾರದೇ ಅಧೀನಕ್ಕೆ ಒಳಪಟ್ಟಿರಬಾರದು. ಅಕ್ರಮ ಸಕ್ರಮ ಜಾಗವೂ ಆಗಿರಬಾರದು, ಫಲವತ್ತಾಗಿ ಇರಬಾರದು ಮತ್ತು ಗ್ರಿಡ್‌ನಿಂದ 500 ಮೀಟರ್ ಒಳಗೆ ಇರಬೇಕು ಎಂದು ಅವರು ಹೇಳಿದರು.

ಮೊದಲ ಹಂತದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಜಮೀನು ಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿ ತಿಳಿಸಿದರು.

ಅದರಂತೆ ಬೆಸ್ಕಾಂ ವ್ಯಾಪ್ತಿಯ 240 ಉಪಕೇಂದ್ರಗಳಿಗೆ 1300 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು ಇಲಾಖೆ ಟೆಂಡರ್ ಕರೆದಿದ್ದು, ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉತ್ಪಾದನೆ ಆರಂಭಿಸಲು ಡಿಸೆಂಬರ್ ಗುರಿ ನಿಗದಿಪಡಿಸಿದೆ.

ರೈತರಿಗೆ ಅರಿವು ಮೂಡಿಸಲು ಮತ್ತು ಸ್ವತಂತ್ರ ಸೋಲಾರ್ ಐಪಿ ಸೆಟ್‌ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲು ಇಲಾಖೆಯು ಮೊದಲ ಬಾರಿಗೆ ಕಾರ್ಯಾಗಾರವನ್ನು ಸಹ ಆಯೋಜಿಸುತ್ತಿದೆ.

ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ Gandhi Krishi Vignana Kendra GKVK Bengaluru) ಕಾರ್ಯಾಗಾರ ನಡೆಯಲಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ಸೌರಶಕ್ತಿ ಹೊಂದಿದ ಐಪಿ ಸೆಟ್‌ಗಳನ್ನು ಅಳವಡಿಸುವ ಪರಿಕಲ್ಪನೆಯ ಕುರಿತು ಕರ್ನಾಟಕದ ರೈತರಿಗೆ ಶಿಕ್ಷಣ ನೀಡಲು ಮಹಾರಾಷ್ಟ್ರದ ರೈತರನ್ನು ಆಹ್ವಾನಿಸಲಾಗಿದೆ.

ಸರ್ಕಾರಿ ಅಧಿಕಾರಿಗಳು ವಿವರಿಸುವ ಬದಲು ಸೌರಶಕ್ತಿ ಹೊಂದಿದ ಐಪಿ ಸೆಟ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಪರಿಣಾಮಕಾರಿ ಸಂವಹನವು ನೆರವಾಗುತ್ತದೆ. ಇನ್ನಿತರ ಮೂಲಗಳ ಮೂಲಕವೂ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ನಾವು ಎಲ್ಲಾ ವಿಧಾನಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:24 am, Tue, 31 October 23