
ಬೆಂಗಳೂರು, ಅಕ್ಟೋಬರ್ 16: 2017ರಲ್ಲಿ ವೈದ್ಯರ ಮೇಲೆ ಹಲ್ಲೆ (Attack) ಮಾಡಿದ್ದ ಪ್ರಕರಣವನ್ನು ರದ್ಧು ಕೋರಿ ಬಿಜೆಪಿ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ (Ananth Kumar Hegde) ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಪರ ವಕೀಲರು ಸತತ ಗೈರು ಹಾಜರಿ ಹಿನ್ನೆಲೆ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚಿಸಿದ್ದರೂ ಸರ್ಕಾರಿ ವಕೀಲರಿಗೆ ಅರ್ಜಿ ಪ್ರತಿ ಸಲ್ಲಿಸದ ಹಿನ್ನೆಲೆ ಅನಂತ ಕುಮಾರ್ ಹೆಗಡೆ ಅರ್ಜಿವನ್ನು ಹೈಕೋರ್ಟ್ ವಜಾಗೊಳಿಸಿದೆ.
ತಾಯಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲವೆಂದು ಬಿಜೆಪಿ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ರೋಡ್ ರೇಜ್ ಪ್ರಕರಣ: ಬಂಧಿತರಿಗೆ ಜಾಮೀನು ಮಂಜೂರು
ಸೆರೆಯಾಗಿದ್ದ ವಿಡಿಯೋದಲ್ಲಿ, ಅನಂತ ಕುಮಾರ್ ಹೆಗಡೆ ಓರ್ವ ವೈದ್ಯರ ಕುತ್ತಿಗೆ ಹಿಡಿದು ಆಸ್ಪತ್ರೆಯ ಕಾರಿಡಾರ್ಗೆ ಎಳೆದುಕೊಂಡು ಹೋಗುತ್ತಾರೆ. ಈ ವೇಳೆ ಓರ್ವ ನರ್ಸ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು. ಬಳಿಕ ಅನಂತ ಕುಮಾರ್ ಹೆಗಡೆ ವೈದ್ಯನಿಗೆ ಹಲ್ಲೆ ಮಾಡಿದ್ದರು.
ಇದನ್ನೂ ಓದಿ: ನೆಲಮಂಗಲ: ಗಲಾಟೆ-ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ, ಗನ್ಮ್ಯಾನ್, ಚಾಲಕನ ವಿರುದ್ಧ ಎಫ್ಐಆರ್
ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಡಾ. ಮಧುಕೇಶ್ವರ ಜೀವಿ, ಡಾ. ಬಾಲಚಂದ್ರ ಮತ್ತು ಡಾ. ರಾಹುಲ್ ಮಾರ್ಷಕರ್ ಅವರ ಮೇಲೆ ಹಲ್ಲೆ ಮಾಡಿದ್ದರು. ಮೂವರು ವೈದ್ಯರಿಗೆ ಗಾಯಗಳಾಗಿದ್ದವು. ಈ ಘಟನೆಗೆ ಸಂಬಂಧಿಸಿದಂತೆ 2017ರಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಬಳಿಕ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Thu, 16 October 25