
ಕಾರವಾರ, ಜನವರಿ 12: ಖದೀಮರು ಶೌಚಾಲಯದ (Toilet) ಗೋಡೆ ಕೊರೆದು ಬ್ಯಾಂಕ್ ದರೋಡೆಗೆ (Bank Robbery) ಯತ್ನಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನಡೆದಿದೆ. ಸದ್ಯ ಸ್ಥಳಕ್ಕೆ ಉತ್ತರ ಕನ್ನಡ ಎಸ್ಪಿ ದೀಪನ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶ್ವಾನ ದಳ ಸೇರಿದಂತೆ ತಜ್ಞರ ತಂಡ ಕಾರ್ಯಾಚರಣೆ ಮಾಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲೇ ಬ್ಯಾಂಕ್ ಆಫ್ ಬರೋಡಾ ಇದೆ. ಶೌಚಾಲಯ ಪ್ರದೇಶ ಬಿಟ್ಟು ಬೇರೆ ಕಡೆ ಸಿಸಿ ಕ್ಯಾಮರಾ ಇರುವುದನ್ನು ತಿಳಿದ ಖದೀಮರು ಶೌಚಾಲಯದ ಹಿಂಭಾಗದ ಗೋಡೆಯನ್ನು ಕೊರೆದು ಒಳಹೊಕ್ಕಿದ್ದಾರೆ. ಬ್ಯಾಕ್ನ ಸ್ಟ್ರಾಂಗ್ ರೂಮ್ ಗೋಡೆ ಒಡೆಯಲು ಯತ್ನಿಸಿದ್ದಾರೆ, ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಕಳ್ಳರು ಖಾಲಿ ಕೈಯಲ್ಲಿ ಹಿಂತಿರುಗಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಲಕ್ಷ ರೂ ಬೆಲೆ ಬಾಳುವ ಡ್ಯೂಕ್ ಬೈಕ್ ಕಳ್ಳತನ ನಡೆದಿರುವಂತಹ ಘಟನೆ ನೆಲಮಂಗಲದ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ನಡೆದಿದೆ. ರಾಜೇಶ್ ಎಂಬುವವರಿಗೆ ಸೇರಿದ್ದ ಡ್ಯೂಕ್ ಬೈಕ್ ಕಳ್ಳತನವಾಗಿದೆ.
ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ಕಳ್ಳತನ: ಪೊಲೀಸ್ರು ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗಡೆ ತೂರಿದ ದರೋಡೆಕೋರರು
ರಾಜೇಶ್ ಇಂಜಿನಿಯರಿಂಗ್ ಮುಗಿಸಿ ಸ್ಟಾರ್ಟಪ್ ಕಂಪನಿ ನಡೆಸುತ್ತಿದ್ದಾರೆ. ಕೆಲಸ ಮಗಿಸಿ ಮನೆ ಮುಂದೆ ಡ್ಯೂಕ್ ಬೈಕ್ ನಿಲ್ಲಿಸಿದ್ದರು. ಬೆಳಿಗ್ಗೆ ಜಿಮ್ಗೆ ಹೋಗಲು ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬೆಂಗಳೂರು ವಾಯುವ್ಯ ವಿಭಾಗ ಗಂಗಮ್ಮ ಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ.
ಶ್ರೀ ಗಂಧದ ಮರ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಸವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 5 ಲಕ್ಷ ರೂ ಮೌಲ್ಯದ ಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಆಂಜನೇಯ, ಸುಬ್ರಹ್ಮಣ್ಯ ಮತ್ತು ಸಂಜಯ್ ಬಂಧಿತ ಆರೋಪಿಗಳು. ಮೂರು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.