ಉತ್ತರ ಕನ್ನಡ: ಲೋಕಸಭಾ ಚುನಾವಣೆ ಹೊತ್ತಲ್ಲೇ ಮತ್ತೆ ಮುನ್ನೆಲೆಗೆ ಬಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಗು
ಲೋಕಸಭಾ ಚುನಾವಣೆ ಕಾವು ರಂಗೇರುತ್ತಿದ್ದಂತೆ ಈಗ ಉತ್ತರ ಕನ್ನಡ ಜಿಲ್ಲೆಯ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ಕೂಗು ಮುನ್ನೆಲೆಗೆ ಬಂದಿದೆ. ಸದ್ಯ ಲೋಕಸಭಾ ಚುನಾವಣೆಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಆರೋಪ-ಪ್ರತ್ಯಾರೋಪ ಮಾಡುತ್ತ ಮತಬೇಟೆಗೆ ಮುಂದಾಗಿದ್ದಾರೆ.

ಉತ್ತರ ಕನ್ನಡ, ಏ.24: ರಾಜ್ಯದಲ್ಲಿ ಅತಿದೊಡ್ಡ ಭೌಗೋಳಿಕ ಹಿನ್ನಲೆ ಹೊಂದಿರುವ ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೇ(Multi Speciality Hospital) ಇಲ್ಲದೇ ಪ್ರತಿನಿತ್ಯ ಸಾಕಷ್ಟು ಜನರು ಅಪಘಾತ ಇನ್ನಿತರ ಘಟನೆಗಳ ವೇಳೆ ಸೂಕ್ತ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದಲ್ಲದೇ ಸಣ್ಣಪುಟ್ಟ ಚಿಕಿತ್ಸೆಗೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ನೆರೆಯ ಗೋವಾ, ಮಂಗಳೂರು, ಉಡುಪಿ ಜಿಲ್ಲೆಯ ಆಸ್ಪತ್ರೆಯನ್ನೇ ಜಿಲ್ಲೆಯ ಜನರು ಅವಲಂಬಿಸಿದ್ದಾರೆ. ಇನ್ನು ಇದೇ ವಿಚಾರ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷದವರು ಇದನ್ನೇ ಇಟ್ಟುಕೊಂಡು ಪ್ರಚಾರಕ್ಕೆ ಇಳಿದಿದ್ದರು. ಸದ್ಯ ಲೋಕಸಭಾ ಚುನಾವಣೆ ವೇಳೆಯಲ್ಲೂ ಇದೇ ವಿಚಾರ ಚರ್ಚೆಗೆ ಬಂದಿದೆ.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಚುನಾವಣೆ ವೇಳೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿದ್ದರು. ವರ್ಷವಾದರು ಇನ್ನೂ ಆಸ್ಪತ್ರೆ ನಿರ್ಮಿಸಿಲ್ಲ ಎಂದ ಬಿಜೆಪಿ ನಾಯಕರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕುಮಟಾ ಬಳಿ ಜಾಗವನ್ನು ಗುರುತು ಮಾಡಿ ಅಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ಆಗಿತ್ತು. ಆದ್ರೆ, ಕೆಲವು ತಾಂತ್ರಿಕ ಕಾರಣದಿಂದ ಕಾಮಗಾರಿ ಪ್ರಾರಂಭ ಆಗಿಲ್ಲ. ಆದ್ರೆ, ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಾರ್ವಜನಿಕರು ಹೋರಾಟ ಮಾಡಿದ್ದರು. ಇನ್ನು ಕೊನೆಯದಾಗಿ ಆಸ್ಪತ್ರೆಗಾಗಿ ಜಾಗ ಹುಡುಕಾಡುವ ವೇಳೆ ಸರ್ಕಾರ ಪಥನವಾಗಿ ಹೊಸ ಸರ್ಕಾರ ಬಂದಿತ್ತು. ಇದೇ ವಿಚಾರವನ್ನ ಜಿಲ್ಲೆಯ ಜನರ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇನ್ನೂ ಆಸ್ಪತ್ರೆ ನಿರ್ಮಿಸಿಲ್ಲ ಎನ್ನುವುದು ಬಿಜೆಪಿಗರ ಆರೋಪ. ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರ ಬಳಿ ಕೇಳಿದರೆ, ‘ಆಸ್ಪತ್ರೆ ನಿರ್ಮಿಸಿ ವೈದ್ಯರೇ ಇಲ್ಲದಿದ್ದರೇ ನಾಯಿಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವೇ. ಸೂಕ್ತ ಸ್ಥಳ, ಸೂಕ್ತ ಸಂದರ್ಭದಲ್ಲಿ ಆಸ್ಪತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ.
ಸದ್ಯ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಾನು ಸಹ ವೈದ್ಯೆಯಾಗಿದ್ದು, ತಾನು ಗೆದ್ದು ಬಂದರೆ ಏಮ್ಸ್ ಮಾದರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಮಾಡುತ್ತೇನೆ. ಈ ಹಿಂದೆ ಖಾನಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಹಲವು ದಿನಗಳ ಬೇಡಿಕೆಯನ್ನು ನಾನು ಪೂರ್ಣ ಮಾಡುತ್ತೇನೆ ಎನ್ನುವ ವಿಷಯ ವಸ್ತು ಇಟ್ಟುಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದ್ದಿದ್ದರೆ, ಇತ್ತ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಆಸ್ಪತ್ರೆಗಾಗಿ ಹಕ್ಕೋತ್ತಾಯ ಮಾಡುವುದಾಗಿ ಹೇಳುತ್ತಿದ್ದಾರೆ. ಜಿಲ್ಲೆಯ ಜನರು ಈ ಬಾರಿ ಯಾರಿಗೆ ತನ್ನ ಒಲವನ್ನ ತೋರಿಸುತ್ತಾರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ ಎಷ್ಟರ ಮಟ್ಟಿಗೆ ಎಫೆಕ್ಟ್ ಆಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Wed, 24 April 24