
ಶಿರಸಿ, ಫೆಬ್ರವರಿ 24: ಉತ್ತರ ಕನ್ನಡ ಜಿಲ್ಲೆಗೆ ಸದ್ಯ ನದಿ ತಿರುವು ಯೋಜನೆಯ ಭೂತ ಕಾಡುತ್ತಿದೆ. ಇಲ್ಲಿ ಹರಿಯುವ ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಮ್ ಕಟ್ಟಿ, ಉತ್ತರ ಕರ್ನಾಟಕದ ಕಡೆಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯಲು ಸರ್ಕಾರ ಮುಂದಾಗಿದೆ. ಇದರಿಂದ ಪಶ್ಚಿಮಘಟ್ಟದ ನಾಶ ಖಚಿತ ಎಂಬ ಅಭಿಪ್ರಾಯ ತಜ್ಞರದ್ದು. ಆದಾಗ್ಯೂ ನಾವು ಯೋಜನೆ ಮಾಡಿಯೇ ತಿರುತ್ತೇವೆ ಎಂಬ ಹುಂಬುತನ ರಾಜಕಾಣಿಗಳದ್ದು. ಜನವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಯಿತು. 25 ಸಾವಿರಕ್ಕೂ ಅಧಿಕ ಜನರು ಸೇರಿ ಈ ಯೋಜನೆಯನ್ನು ವಿರೋಧಿಸಿದರು. ಈಗ ‘ಗಂಗಾರತಿ’ ಮೂಲಕ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಕರೆ ನೀಡಲಾಗಿದೆ.
ಶಿರಸಿಯ ಮುರೆಗಾರ್ ಜಲಪಾತಕ್ಕೆ (ಪಟ್ಟಣದ ಹಳ್ಳ) ಡ್ಯಾಂ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ. ಈ ಯೋಜನೆಗಳ ವಿರುದ್ಧ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿಶಿಷ್ಟ ಕರೆ ನೀಡಿದ್ದಾರೆ. ಅದುವೇ ನದಿ ಪೂಜೆ ಗಂಗಾರತಿ.
ಮುರೆಗಾರ್ ಜಲಪಾತದಲ್ಲಿ ಫೆಬ್ರವರಿ 23ರ ಸಂಜೆ ನದಿ ಪೂಜೆ ಗಂಗಾರತಿ ಮಾಡಲಾಯಿತು. ಗಂಗಾ ನದಿ ತೀರದಲ್ಲಿ ನಡೆಯುವಂತೆ ಇಲ್ಲಿಯ ನದಿಗಳ ನೀರಿಗೂ ಪೂಜೆ ನಡೆದವು. ಈ ರೀತಿ ಮಾಡುವುದರ ಹಿಂದಿನ ಕಾರಣವನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿವರಿಸಿದರು.
‘ನದಿಗಳ ಬಗ್ಗೆ ವೇದಗಳಲ್ಲಿ ಬರೆಯಲಾಗಿದೆ. ನೀರಲ್ಲಿ ಎಲ್ಲ ದೇವತೆಗಳು ಇರುತ್ತಾರೆ. ನೀರು ಹಾಗೂ ನದಿ ಪೂಜ್ಯವಾದದ್ದು. ಯಾವುದು ಪೂಜ್ಯವೋ ಅದನ್ನು ಮನುಷ್ಯ ಸರಿಯಾಗಿ ಇಟ್ಟುಕೊಳ್ಳುತ್ತಾನೆ. ನದಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಜಾಗೃತ ಮಾಡಲು ಈ ಪೂಜೆ. ನದಿಗಳು ಭಗವಂತನ ಇಚ್ಛೆಯಂತೆ ಹರಿಯುತ್ತಿವೆ. ಆದರೆ, ನದಿಗಳ ದಿಕ್ಕನ್ನು ಬದಲಿಸೋದು ಅಧರ್ಮ. ಪಾಪದ ಕೆಲಸ ಮಾಡಲು ಹೊರಡಲಾಗುತ್ತಿದೆ. ಹೀಗಾಗಿ ಧರ್ಮಪೀಠ ಅದನ್ನು ವಿರೋಧಿಸುತ್ತಿದೆ’ ಎಂದು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಹೇಳಿದರು.
‘ಈ ಪೂಜೆ ಹೊಸ ರೀತಿಯ ಸತ್ಯಾಗ್ರಹ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಅವರು ಉಪವಾಸ ಸತ್ಯಾಗ್ರಹ ಮಾಡಿದರು. ಅದೇ ರೀತಿ ಈಗ ಪೂಜೆ ಮೂಲಕ ನಮ್ಮ ಸತ್ಯಾಗ್ರಹ ಆರಂಭಿಸಿದ್ದೇವೆ. ಮತ್ತೆ ಮತ್ತೆ ಪೂಜೆ ಮಾಡಿ ಯೋಜನೆಗೆ ವಿರೋಧ ಹೊರಹಾಕಬೇಕಿದೆ. ಇದು ನಮ್ಮ ಜನರಿಗೆ ಜಾಗೃತಿ ಹಾಗೂ ಯೋಜನೆ ಮಾಡುವವರಿಗೆ ವಿರೋಧವೂ ಹೌದು. ಎರಡನ್ನೂ ಒಟ್ಟಿಗೆ ಮಾಡುವ ಅಹಿಂಸಾತ್ಮಕ ಯೋಜನೆಯೇ ನದಿ ಪೂಜೆ’ ಎಂದರು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ.
ಇದನ್ನೂ ಓದಿ: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ; ರಾಜಕಾರಣಿಗಳ ಆಸೆಗೆ ಪಶ್ಚಿಮ ಘಟ್ಟ ಬಲಿ?
‘ಉತ್ತರ ಭಾರತವನ್ನು ನೋಡಿ ನಾವು ಕಲಿಯಬೇಕಿದೆ. ಗಂಗಾರತಿ ಬಂದಿರೋದು ಉತ್ತರ ಭಾರತದಿಂದ. ಉತ್ತರ ಭಾರತದವರು ನದಿಯನ್ನು ಬಹುವಚನ ಕೊಟ್ಟು ಕರೆಯುತ್ತಾರೆ. ನದಿಗಳ ಬಗ್ಗೆ ಇರುವ ಶ್ರದ್ಧೆ ಹಾಗೂ ಗೌರವವನ್ನು ಇದು ತೋರಿಸುತ್ತದೆ’ ಎಂದರು ಅವರು.
ಇನ್ನು, ಪತ್ರಕ್ಕೆ ಸಹಿ ಮಾಡಿ ನದಿ ತಿರುವು ಯೋಜನೆಗೆ ವಿರೋಧ ಹೊರಹಾಕುವ ಚಳುವಳಿಗೂ ಚಾಲನೆ ಕೊಡಲಾಯಿತು. ಈ ಪತ್ರಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಆಗಲಿದೆ. ಈ ಮೂಲಕ ಸರ್ಕಾರಕ್ಕೆ ತಮ್ಮ ವಿರೋಧ ತೋರಿಸಬೇಕು ಎಂಬ ಆಶಯವನ್ನು ಇದು ಹೊಂದಿದೆ. ಈ ವೇಳೆ ಮಾತನಾಡಿದ ಅನಂತ್ ಹೆಗಡೆ ಅಶೀಸರ, ನೀರವಾರಿ ತಜ್ಞರ ಜೊತೆ ತೆರಳಿ ರಾಜ್ಯ ನೀರಾವರಿ ಇಲಾಖೆಯ ಅಧಿಕಾರಗಳ ಜೊತೆ ಮಾತನಾಡುವ ಆಲೋಚನೆ ಇದೆ ಎಂದು ಹೇಳಿದರು.
ಮತ್ತಷ್ಟು ಕರ್ನಾಟಕ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
Published On - 1:35 pm, Tue, 24 February 26