
ಮೈಸೂರು: ಮರಾಠ ಪ್ರಾಧಿಕಾರ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ ಗೋವಿಂದ್ ನೇತೃತ್ವದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕೊಲಂಬಿಯಾ ಏಷ್ಯಾ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಭಾಗಿಯಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಡಿಸೆಂಬರ್ 5ರ ಬಂದ್ ಕುರಿತು ಹೇಳಿಕೆ ನೀಡಿದ್ದ ಶಾಸಕರಾದ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಈ ಸಂದರ್ಭದಲ್ಲಿ ಆಕ್ರೋಶ ಹೊರಹಾಕಿದ ವಾಟಾಳ್ ನಾಗರಾಜ್ ಅವರಿಬ್ಬರು ಯಾರು ಎಂದು ಅರ್ಥ ಆಗಿಲ್ಲ. ಮಂತ್ರಿಗಳು ಹಾಗೂ MPಗಳೇ ಈ ಬಗ್ಗೆ ಏನೂ ಮಾತಾಡುತ್ತಿಲ್ಲ. ಹಾಗಿರುವಾಗ ಇವರು ಯಾರು ಮಾತನಾಡೋಕೆ? ಎಂದು ತಮ್ಮ ಸಿಟ್ಟು ಹೊರಹಾಕಿದರು.
ಇವರಿಬ್ಬರು ಯಾರು ಅಂತಾ ನನಗೆ ಗೊತ್ತಿಲ್ಲ. ಅದಕ್ಕೆ ಇವರಿಗೆ ನಾಯಿಗಳು ಅಂತಾ ಹೆಸರಿಟ್ಟಿದ್ದೀನಿ ಎಂದು ವಾಟಾಳ್ ನಾಗರಾಜ್ ಕಿಡಿ ಕಾರಿದರು. ನಾಯಿಗಳು ಬೊಗಳಿದರೆ ಜನರು ಉತ್ತರ ಕೊಡುತ್ತಾರೆ. ನಾವು ನಾಯಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದರು.
ಅಂತೆಯೇ, ಯಡಿಯೂರಪ್ಪ ಅವರೇ ನೀವೂ ಸರ್ವಾಧಿಕಾರಿ ಮುಖ್ಯಮಂತ್ರಿ. ಇದುವರೆಗೂ ನಿಮ್ಮಂಥ ಸರ್ವಾಧಿಕಾರಿ ಯಾರೂ ಬಂದಿಲ್ಲ. ನಿಮಗೆ ಕನ್ನಡದ ಬಗ್ಗೆ ಯಾವುದೇ ಅಭಿಮಾನವಿಲ್ಲ ಎಂದು ಹೇಳಿದ ವಾಟಾಳ್ ನಾಗರಾಜ್ ಸಿ.ಎಂ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ಅನಿವಾರ್ಯ ಎಂದು ಹೇಳಿದರು. ಜೊತೆಗೆ, ನಾಳೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕರಾಳ ದಿನ ಆಚರಣೆ ಮಾಡುತ್ತೇವೆ. ಬೃಹತ್ ಕರಾಳ ದಿನಾಚರಣೆ ಆಚರಣೆಗೆ ಕನ್ನಡಪರ ಸಂಘಟನೆಗಳು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
Published On - 2:49 pm, Sun, 29 November 20