
ವಿಜಯಪುರ ಸೆ.5: ವಿಜಯಪುರ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಯಶವಂತಪುರ ಎಕ್ಸ್ಪ್ರೆಸ್ ರೈಲಿನ ಇಂಜಿನ್ ದಿಢೀರ್ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ನೂರಾರು ಪೋಲಿಸ್ ಉದ್ಯೋಗಾಕಾಂಕ್ಷಿಗಳು ಹಾಗೂ ಪ್ರಯಾಣಿಕರು ತೀವ್ರ ಅಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದಲ್ಲಿ ನಡೆದಿದೆ. ಸಕಾಲಕ್ಕೆ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗುವುದಿಲ್ಲ ಎಂಬ ಭೀತಿಯಿಂದ ಪರೀಕ್ಷಾರ್ಥಿಗಳು ಪಕ್ಕದ ಹಳಿಯಲ್ಲಿ ಬಂದ ಮತ್ತೊಂದು ರೈಲನ್ನು ತಡೆದು ಕಲ್ಲು ತೂರಾಟ ನಡೆಸಿದ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ವಿಜಯಪುರದಿಂದ ಮಧ್ಯಾಹ್ನ 2:50ಕ್ಕೆ ಹೊರಟಿದ್ದ ವಿಜಯಪುರ – ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16548) ರೈಲು ಕೇವಲ 4 ಕಿಲೋಮೀಟರ್ ಸಂಚರಿಸುತ್ತಿದ್ದಂತೆಯೇ ಇಂಜಿನ್ ತಾಂತ್ರಿಕ ದೋಷದಿಂದ ಬಂದ್ ಆಗಿದೆ. ಈ ರೈಲಿನಲ್ಲಿ ಭಾನುವಾರ ಬೆಳಿಗ್ಗೆ10 ಗಂಟೆಗೆ ನಡೆಯಲಿರುವ ಸಿಟಿ ಆರ್ಮ್ಡ್ ಹಾಗೂ ಡಿಸ್ಟ್ರಿಕ್ಟ್ ಆರ್ಮ್ಡ್ ಮೀಸಲು ಪೊಲೀಸ್ ಪಡೆ ಹುದ್ದೆಗಳ ಪರೀಕ್ಷೆಗೆ ಹಾಜರಾಗಲು ಬೆಂಗಳೂರು ಹಾಗೂ ತುಮಕೂರು ಭಾಗಗಳಿಗೆ ತೆರಳುತ್ತಿದ್ದ ಸುಮಾರು 500 ರಿಂದ 1000 ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದರು.
ಈ ರೈಲು ನಾಳೆ ಬೆಳಿಗ್ಗೆ 5 ಗಂಟೆಗೆ ಯಶವಂತಪುರ ತಲುಪಬೇಕಿತ್ತು. ಅಭ್ಯರ್ಥಿಗಳು ಬೆಳಿಗ್ಗೆ 9:30ರ ವೇಳೆಗೆ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಇರಬೇಕಾಗಿದ್ದರಿಂದ, ಸುಮಾರು 5 ಗಂಟೆಗಳ ಕಾಲ ರೈಲು ಒಂದೇ ಕಡೆ ನಿಂತಿದ್ದರಿಂದ ಉದ್ವಿಗ್ನಗೊಂಡರು.
ರೈಲಿನಿಂದ ಕೆಳಗಿಳಿದ ಅಭ್ಯರ್ಥಿಗಳು ರೈಲ್ವೇ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಪಕ್ಕದ ಹಳಿಯ ಮೇಲೆ ಬಂದ ಬಾಗಲಕೋಟೆ-ಸೋಲಾಪುರ-ಮೈಸೂರು ಮಾರ್ಗದ ‘ಬಸವ ಎಕ್ಸ್ಪ್ರೆಸ್’ ರೈಲನ್ನು ತಡೆದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಕೆಲ ಯುವಕರು ಆಕ್ರೋಶದಿಂದ ರೈಲಿನ ಮೇಲೆ ಕಲ್ಲು ತೂರಿದ್ದು, ಚಲಿಸುತ್ತಿದ್ದ ರೈಲಿಗೆ ತಡೆಯೊಡ್ಡಲು ಯತ್ನಿಸಿದರು.
ಸ್ಥಳಕ್ಕೆ ಧಾವಿಸಿದ ರೈಲ್ವೇ ಪೊಲೀಸರು (RPF) ಆಕ್ರೋಶಗೊಂಡ ಯುವಕರನ್ನು ಸಮಾಧಾನಪಡಿಸಿ ವಾತಾವರಣವನ್ನು ತಿಳಿಗೊಳಿಸಿದರು.
ಇದನ್ನೂ ಓದಿ: ಸವದತ್ತಿಯಲ್ಲಿ ಪತ್ತೆಯಾಯ್ತು ಪ್ರಾಚೀನ ಚಿನ್ನದ ನಾಣ್ಯಗಳ ನಿಧಿ
ಬಳಿಕ ರೈಲ್ವೇ ಅಧಿಕಾರಿಗಳು ತಕ್ಷಣವೇ ಮತ್ತೊಂದು ಪರ್ಯಾಯ ಇಂಜಿನ್ ತಂದು ವಿಜಯಪುರ-ಯಶವಂತಪುರ ರೈಲಿಗೆ ಜೋಡಿಸಿದರು. ರೈಲು ಪುನಃ ಚಲಿಸಲು ಪ್ರಾರಂಭಿಸುತ್ತಿದ್ದಂತೆ ಪರೀಕ್ಷಾರ್ಥಿಗಳು ಸಮಾಧಾನಗೊಂಡು ಪಯಣ ಮುಂದುವರಿಸಿದರು. “ಒಂದು ವೇಳೆ ನಾಳೆ ಪರೀಕ್ಷೆಗೆ ವಿಳಂಬವಾಗಿ ನಮಗೆ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದರೆ ಅದಕ್ಕೆ ಸಂಪೂರ್ಣವಾಗಿ ರೈಲ್ವೇ ಇಲಾಖೆಯ ನಿರ್ಲಕ್ಷ್ಯವೇ ಕಾರಣ,” ಎಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ರೈಲು ವಿಳಂಬವಾದರೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗುವುದಿಲ್ಲ. ಜೀವನದ ಪ್ರಮುಖ ಪರೀಕ್ಷೆ ಕೈ ತಪ್ಪುವ ಭೀತಿ ಎದುರಾಗಿದೆ. ಆದ್ದರಿಂದ ಕೂಡಲೇ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪರೀಕ್ಷಾರ್ಥಿಗಳು ಆಗ್ರಹಿಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ರೈಲ್ವೇ ಅಧಿಕಾರಿಗಳು, “ವಿಜಯಪುರ ಬಳಿ ಇಂಜಿನ್ ತಾಂತ್ರಿಕ ತೊಂದರೆಗೊಳಗಾಗಿದ್ದರಿಂದ ರೈಲು ವಿಳಂಬವಾಗಿದೆ. ಇದೀಗ ಪರ್ಯಾಯ ಇಂಜಿನ್ ಅಳವಡಿಸಿ ರೈಲನ್ನು ರವಾನಿಸಲಾಗಿದ್ದು, ಇನ್ನು ಅರ್ಧ ಗಂಟೆಯಲ್ಲಿ ಬಾಗಲಕೋಟೆ ನಿಲ್ದಾಣಕ್ಕೆ ರೈಲು ಆಗಮಿಸಲಿದೆ,” ಎಂದು ಮಾಹಿತಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sat, 5 September 26