Pogaru | ಬ್ರಾಹ್ಮಣ ಸಮುದಾಯಕ್ಕೆ ನೋವುಂಟುಮಾಡಿರುವ ದೃಶ್ಯವನ್ನು ನಾಳೆಯೊಳಗೆ ತೆಗೆಯುತ್ತೇವೆ: ಪೊಗರು ನಿರ್ದೇಶಕ ನಂದಕಿಶೋರ್​

ರಥ ಸಪ್ತಮಿ ದಿನದಂದು (ಫೆ.19) ಅದ್ದೂರಿಯಾಗಿ ತೆರೆ ಕಂಡ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ  ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡೋ ದೃಶ್ಯ ಇದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ‌ಮೂರ್ತಿ ಆರೋಪ ಮಾಡಿದ್ದರು.

Pogaru | ಬ್ರಾಹ್ಮಣ ಸಮುದಾಯಕ್ಕೆ ನೋವುಂಟುಮಾಡಿರುವ ದೃಶ್ಯವನ್ನು ನಾಳೆಯೊಳಗೆ ತೆಗೆಯುತ್ತೇವೆ: ಪೊಗರು ನಿರ್ದೇಶಕ ನಂದಕಿಶೋರ್​
ನಿರ್ದೇಶಕ ನಂದಕಿಶೋರ್​

Updated on: Feb 23, 2021 | 4:54 PM

ಬೆಂಗಳೂರು: ಕೊನೆಗೂ ಪೊಗರು (Pogaru) ವಿವಾದಕ್ಕೆ ಒಂದು ಅಂತ್ಯ ಸಿಕ್ಕಿದೆ. ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿದ ದೃಶ್ಯವನ್ನು ತೆಗೆದುಹಾಕಲು ಈಗಾಗಲೇ ಎಡಿಟಿಂಗ್​ ಶುರುವಾಗಿದ್ದು, ನಾಳೆಯೊಳಗೆ ಅದನ್ನು ಸಿನಿಮಾದಿಂದ ತೆಗೆಯುತ್ತೇವೆ ಎಂದು ಪೊಗರು ನಿರ್ದೇಶಕ ನಂದಕಿಶೋರ್​ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಾಗೇ, ಮತ್ತೊಮ್ಮೆ ಬ್ರಾಹ್ಮಣರ ಕ್ಷಮೆಯಾಚಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತೇವೆ.. ತಾಂತ್ರಿಕತೆ ದೃಷ್ಟಿಯಿಂದ ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದಾರೆ.

ರಥ ಸಪ್ತಮಿ ದಿನದಂದು (ಫೆ.19) ಅದ್ದೂರಿಯಾಗಿ ತೆರೆ ಕಂಡ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ  ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡೋ ದೃಶ್ಯ ಇದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ‌ಮೂರ್ತಿ ಆರೋಪ ಮಾಡಿ, ಕೂಡಲೇ ಚಿತ್ರತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.

ಇಂದು ಕೂಡ ಸುದ್ದಿಗೋಷ್ಠಿ ನಡೆಸಿದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಸಿನಿಮಾದಲ್ಲಿರುವ ಹಲವು ಭಾಗ ನಮ್ಮ ಸಮುದಾಯಕ್ಕೆ ನೋವುಂಟು ಮಾಡುವಂಥವಾಗಿವೆ. ಬ್ರಾಹ್ಮಣರು, ಅರ್ಚಕರಿಗೆ ಅವಮಾನವಾಗುವ 12-14ದೃಶ್ಯಗಳನ್ನು ತೆಗೆಯುವಂತೆ ನಿರ್ದೇಶಕರಿಗೆ ತಿಳಿಸಿದ್ದೇವೆ. ಚಿತ್ರದಲ್ಲಿ ಮತ್ತೆ ಇಂಥ ದೃಶ್ಯಗಳನ್ನು ಪ್ರಸಾರ ಮಾಡಬಾರದು ಎಂದೂ ಹೇಳಿದ್ದೇವೆ. ನಾಳೆ ಸಂಜೆಯೊಳಗೆ ವಿವಾದಿತ ದೃಶ್ಯಗಳನ್ನು ತೆಗೆಯಬೇಕು. ಮುಂದೆ ಇದೇ ರೀತಿಯಾದರೆ ಬೀದಿಗಳಿದು ಹೋರಾಟ ಮಾಡುತ್ತೇವೆ. ಕಾನೂನು ಹೋರಾಟವನ್ನೂ ಕೈಗೆತ್ತಿಕೊಳ್ಳುತ್ತೇವೆ. ಯಾವುದೇ ಸಮಾಜಕ್ಕೂ ನೋವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಇನ್ನು ತಮ್ಮ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಕ್ಕೆ ಹಿಂದೆಯೇ ಕ್ಷಮೆ ಕೇಳಿದ್ದ ನಿರ್ದೇಶಕ ನಂದಕಿಶೋರ್​, ನಮಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಬ್ರಾಹ್ಮಣರ ಬಗ್ಗೆ ತುಂಬ ಗೌರವ ಇದೆ ಎಂದೂ ಹೇಳಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ವಿವಾದಿತ ದೃಶ್ಯಗಳನ್ನು ಕತ್ತರಿಸುವುದಾಗಿ ತಿಳಿಸಿದ್ದಾರೆ.

ಚಿತ್ರದಲ್ಲೇನಿತ್ತು?  

ಸಿನೆಮಾದ ದೃಶ್ಯವೊಂದರಲ್ಲಿ ಹೋಮ ಮಾಡುತ್ತಿರುವ ಅರ್ಚಕರ ಹೆಗಲ ಮೇಲೆ ಖಳನಟ ಕಾಲಿಟ್ಟು ಹೊಡೆಯುವ ದೃಶ್ಯ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿಯೂ  ಸಚ್ಚಿದಾನಂದ‌ಮೂರ್ತಿ ತಿಳಿಸಿದ್ದರು.

ಇದನ್ನೂ ಓದಿ: ಪೊಗರು ಸಿನಿಮಾದ ವಿರುದ್ಧ ಆರೋಪ: ಚಿತ್ರದಲ್ಲಿ ಬ್ರಾಹ್ಮಣರನ್ನ ಅವಹೇಳನ ಮಾಡಲಾಗಿದೆ ಎಂದ ಸಚ್ಚಿದಾನಂದ‌ಮೂರ್ತಿ

Published On - 3:23 pm, Tue, 23 February 21

Lakshmi Hegde
Follow Us