ಏನಿದು ಗೃಹ ಆರೋಗ್ಯ ಯೋಜನೆ? ಜನ ಸಾಮಾನ್ಯರಿಗೆ ಏನು ಉಪಯೋಗ? ಇಲ್ಲಿದೆ ವಿವರ

| Updated By: ಗಣಪತಿ ಶರ್ಮ

Updated on: Oct 24, 2024 | 9:25 AM

Gruha Arogya Yojana: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಆರೋಗ್ಯ ಯೋಜನೆ ಇಂದಿನಿಂದ ರಾಜ್ಯದಾದ್ಯಂತ ಜಾರಿಗೆ ಬರುತ್ತಿದೆ. ಗ್ರಾಮೀಣ ಜನರ ಆರೋಗ್ಯ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಗೃಹ ಆರೋಗ್ಯ ಯೋಜನೆಯ ಕುರಿತಾದ ವಿವರ ಇಲ್ಲಿದೆ.

ಏನಿದು ಗೃಹ ಆರೋಗ್ಯ ಯೋಜನೆ? ಜನ ಸಾಮಾನ್ಯರಿಗೆ ಏನು ಉಪಯೋಗ? ಇಲ್ಲಿದೆ ವಿವರ
ಬಿಪಿ, ಶುಗರ್ ಇದ್ದವರಿಗೆ ಉಚಿತವಾಗಿ ಮನೆ ಬಾಗಿಲಿಗೆ ಬರಲಿದೆ ಔಷಧ! ಇಂದಿನಿಂದ ಗೃಹ ಆರೋಗ್ಯ ಯೋಜನೆ ಜಾರಿ
Follow us on

ಕೊಪ್ಪಳ, ಅಕ್ಟೋಬರ್ 24: ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಧುನಿಕ ಜೀವನ ಶೈಲಿ ಸೇರಿದಂತೆ ಅನೇಕ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಗಂಭೀರವಾಗುತ್ತಿವೆ. ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಪ್ರಮುಖ ಕಾರಣವಾಗಿವೆ. ಆದರೆ ಹೆಚ್ಚಿನ ಜನರು ತಮಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ, ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆ, ರಾಜ್ಯದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಇಂದಿನಿಂದ ರಾಜ್ಯದಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಏನಿದು ಗೃಹ ಆರೋಗ್ಯ ಯೋಜನೆ?

ಹಳ್ಳಿ ಪ್ರದೇಶಗಳ ಜನರ ಆರೋಗ್ಯದ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಯೋಜನೆಯೇ ಗೃಹ ಆರೋಗ್ಯ ಯೋಜನೆ. ಗೃಹ ಆರೋಗ್ಯ ಯೋಜನೆ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಬಿಪಿ, ಶುಗರ್ ಇದ್ದವರಿಗೆ ಇನ್ನು ಮುಂದೆ ಮನೆಗೆ ಔಷಧಗಳನ್ನು ಉಚಿತವಾಗಿ ತಲುಪಿಸಲಾಗುತ್ತದೆ.

ಈ ಮೊದಲು ರಕ್ತದೊತ್ತಡ, ಸಕ್ಕರೆ ಕಾಯಿಲೆ ಅಂದರೆ ಅದು ಶ್ರೀಮಂತರ ಕಾಯಿಲೆ ಅಂತ ಹೇಳುತ್ತಿದ್ದರು. ಆದರೆ ಇದೀಗ ಬಿಪಿ, ಶುಗರ್ ಜಾತಿ, ಮತ, ಧರ್ಮವೆನ್ನದೆ, ವಯಸ್ಸಿನ ಮಿತಿಯೂ ಇಲ್ಲದೇ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಆಧುನಿಕ ಜೀವನ ಶೈಲಿ, ಅತಿಯಾದ ಒತ್ತಡದಲ್ಲಿ ಕೆಲಸ ಮಾಡೋದು, ಆರೋಗ್ಯದ ಬಗ್ಗೆ ಹೆಚ್ಚಿನ ಜನರು ಕಾಳಜಿ ವಹಿಸದೇ ಇರೋದು, ನಿಯಮಿತವಾಗಿ ವ್ಯಾಯಾಮ, ಉತ್ತಮ ಆಹಾರ ಪದ್ದತಿಯನ್ನು ಅನುಸರಿಸದೇ ಇರೋದರಿಂದ ಹೆಚ್ಚಿನ ಜನರಿಗೆ ಬಿಪಿ, ಶುಗರ್ ಬರಲು ಕಾರಣವಾಗುತ್ತಿದೆ. ಅನೇಕರು ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಂಡು, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಗ್ರಾಮೀಣ ಜನರ ಆರೋಗ್ಯ ಕಾಳಜಿಗಾಗಿ ಕ್ರಮ

ರಾಜ್ಯದ ಗ್ರಾಮೀಣ ಭಾಗ ಸೇರಿದಂತೆ ಅನೇಕರು ತಮಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯ ಲಕ್ಷಣಗಳು ಇದ್ದರು ಕೂಡಾ ತಪಾಸಣೆ ಮಾಡಿಸಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದೇ ಅನೇಕರ ಜೀವಕ್ಕೆ ಕುತ್ತು ತರುತ್ತಿದೆ. ಸಕ್ಕರೆ ಕಾಯಿಲೆ, ಮತ್ತು ರಕ್ತದೊತ್ತಡಿಂದ ಹೃದಯಾಘಾತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯೇ ಪ್ರಮುಖವಾಗಿ ಕಾರಣವಾಗಿದೆ. ಇದನ್ನು ಮನಗಂಡೇ ಇದೀಗ ರಾಜ್ಯ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಹೊಸದೊಂದು ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಯೋಜನೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಿಷ್ಟು…

ಅದುವೇ ಗೃಹ ಆರೋಗ್ಯ ಯೋಜನೆ ಬಗ್ಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಹೊಸ ಯೋಜನೆಗೆ ಇಂದು ಚಾಲನೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಗೃಹ ಆರೋಗ್ಯ ಯೋಜನೆಯಡಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ರಾಜ್ಯದ ಪ್ರತಿಯೊಬ್ಬರ ಮನೆಗೆ ಹೋಗಿ, ಅವರ ಆರೋಗ್ಯ ತಪಾಸಣೆ ನಡೆಸಲಿದೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಕೆಲ ದಿನಗಳ ಕಾಲ ಮನೆಮನೆಗೆ ಹೋಗಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವದು, ತಪಾಸಣೆ ಮಾಡುತ್ತಾರೆ. ಪ್ರಮುಖವಾಗಿ ಬಿಪಿ, ಶುಗರ್ ಇದೆಯಾ ಎಂಬುದನ್ನು ತಪಾಸಣೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಯಾರಿಗೆಲ್ಲಾ ಬಿಪಿ, ಶುಗರ್ ಇದೆಯೋ ಅವರ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಅವರು ತಗೆದುಕೊಳ್ಳಬೇಕಾದ ಔಷಧಿಗಳನ್ನು ಮನೆ ಬಾಗಿಲಿಗೆ ಹೋಗಿ ತಲುಪಿಸಲಿದ್ದಾರೆ. ಇನ್ನು ಔಷಧಗಳನ್ನು ಉಚಿತವಾಗಿ ಪ್ರತಿ ತಿಂಗಳು ನಿರಂತರವಾಗಿ ಮನೆಗೆ ಕಳುಹಿಸುವ ವ್ಯವಸ್ಥೆಯನ್ನು ಯೋಜನೆಯಡಿ ಮಾಡಲಾಗಿದೆ. ಅನೇಕರು ಸರ್ಕಾರಿ ಆಸ್ಪತ್ರೆಗೆ ಬಂದು ತಗೆದುಕೊಂಡು ಹೋಗಬಹುದಾಗಿದೆ. ತಗೆದುಕೊಂಡು ಹೋಗಲಿಕ್ಕಾಗದೇ ಇದ್ದವರಿಗೆ, ಮನೆಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ತಲುಪಿಸುವ ಕೆಲಸವನ್ನು ಯೋಜನೆ ಮೂಲಕ ಮಾಡಲಾಗುತ್ತದೆ.

ಇನ್ನು ಆರೋಗ್ಯ ತಪಾಸಣೆಯಲ್ಲಿ ಕ್ಯಾನ್ಸರ್, ಮಾನಸಿಕ ಖಾಯಿಲೆ, ಸ್ತನ ಕ್ಯಾನ್ಸರ್ ಸೇರಿದಂತೆ ಇನ್ನಿತರ ಖಾಯಿಲೆಗಳು ಇದ್ದರೂ ಕೂಡಾ, ಅವರಿಗೆ ಸರ್ಕಾರದ ಅನೇಕ ಯೋಜನೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಕೂಡಾ ಮಾಡುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆ: ಮನೆ ಮನೆಗೆ ಬರಲಿದೆ ಕ್ಲಿನಿಕ್, ಚಿಕಿತ್ಸೆ ಜೊತೆ ಮನೆ ಬಾಗಿಲಿಗೆ ಉಚಿತ ಔಷಧಿ

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುವದು ಉತ್ತಮ. ಅದರಲ್ಲೂ ಆರಂಭದಲ್ಲಿಯೇ ರೋಗ ಪತ್ತೆಯಾದ್ರೆ, ರೋಗ ನಿಯಂತ್ರಣವನ್ನು ಮಾಡಬಹುದುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೀಗ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದು ಸಮರ್ಪಕವಾಗಿ ಅನುಷ್ಠಾನವಾದರೆ, ಹೆಚ್ಚಿನ ಜನರಿಗೆ ಅನಕೂಲವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ