Narendra Modi: ಕಲ್ಯಾಣ ಕರ್ನಾಟಕದಲ್ಲಿಂದು ಮೋದಿ ಹವಾ, ಕನ್ನಡದಲ್ಲೇ ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ನಮೋ

| Updated By: ಆಯೇಷಾ ಬಾನು

Updated on: Jan 19, 2023 | 9:15 AM

ಪ್ರಧಾನಿ ಮೋದಿಯವರು ಕರ್ನಾಟಕ ಭೇಟಿ ಸಂಬಂಧ ಕನ್ನಡದಲ್ಲೇ ಬರೆದು ಟ್ವೀಟ್ ಮಾಡಿದ್ದಾರೆ. ಮೋದಿ ಅವರ ಟ್ವೀಟ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Narendra Modi: ಕಲ್ಯಾಣ ಕರ್ನಾಟಕದಲ್ಲಿಂದು ಮೋದಿ ಹವಾ, ಕನ್ನಡದಲ್ಲೇ ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ನಮೋ
ಪ್ರಧಾನಿ ಮೋದಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ(Karnataka Assembly Election). ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು(ಜ.19) ಕಲ್ಯಾಣ ಕರ್ನಾಟಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ರಾಜ್ಯ ಗಡಿ ಜಿಲ್ಲೆಯಾಗಿರುವ ಯಾದಗಿರಿಗೆ ಆಗಮಿಸಲಿದ್ದಾರೆ. ಬಳಿಕ ಮಧ್ಯಾಹ್ನ 2ಗಂಟೆಗೆ ಕಲಬುರಗಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಪ್ರಧಾನಿ ಕರ್ನಾಟಕ ಭೇಟಿ ಕಾರ್ಯಕ್ರಮದಲ್ಲಿ ಮೋದಿ ಅವರು ಸಾವಿರಾರು ಕೋಟಿ ಯೋಜನೆಗಳಿಗೆ ಇಂದು ಚಾಲನೆ ನೀಡಲಿದ್ದಾರೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ನರೇಂದ್ರ ಮೋದಿಯವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರು ಕರ್ನಾಟಕ ಭೇಟಿ ಸಂಬಂಧ ಕನ್ನಡದಲ್ಲೇ ಬರೆದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಕನ್ನಡದಲ್ಲಿ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಯಾದಗಿರಿ ಮತ್ತು ಕಲಬುರಗಿಯಲ್ಲಿ ಮೋದಿ ಕೈಗೊಳ್ಳಲಿರುವ ಯೋಜನೆಗಳು

ಬೆಳಗ್ಗೆ 9ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಹೊರಡಲಿದ್ದಾರೆ. ಬೆಳಗ್ಗೆ 11.05ಕ್ಕೆ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಮೋದಿ ಲ್ಯಾಂಡ್‌ ಆಗಲಿದ್ದಾರೆ. ಕಲಬುರಗಿ ಏರ್‌ಪೋರ್ಟ್‌ನಿಂದ ಹೆಲಿಕಾಪ್ಟರ್‌ನಲ್ಲಿ ಯಾದಗಿರಿಗೆ ಮೋದಿ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಯಾದಗಿರಿ ಜಿಲ್ಲೆಯ ಕೊಡೆಕಲ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಕೊಡೆಕಲ್‌ ಗ್ರಾಮದಲ್ಲಿ ಬಸವಸಾಗರ ಡ್ಯಾಂನ ಸ್ವಯಂಚಾಲಿತ ಕ್ರಸ್ಟ್‌ಗೇಟ್‌ಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 1.15ಕ್ಕೆ ಕೊಡೆಕಲ್‌ನಿಂದ ಕಲಬುರಗಿ ಜಿಲ್ಲೆಯ ಮಳಖೇಡದತ್ತ ಮೋದಿ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಮಳಖೇಡ ಹೆಲಿಪ್ಯಾಡ್‌ಗೆ ಮೋದಿ ಎಂಟ್ರಿಯಾಗಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಕಂದಾಯ ಹಕ್ಕುಪತ್ರಗಳನ್ನ ವಿತರಿಸಲಿದ್ದಾರೆ. 51 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಹಸ್ತಾಂತರಿಸಲಿದ್ದಾರೆ. ಬಳಿಕ ಲಂಬಾಣಿ ತಾಂಡಾಗಳನ್ನ ಕಂದಾಯ ಗ್ರಾಮ ಎಂದು ಮೋದಿ ಘೋಷಿಸ್ತಾರೆ. ಮಧ್ಯಾಹ್ನ 3.10ಕ್ಕೆ ಮಳಖೇಡ ಹೆಲಿಪ್ಯಾಡ್‌ನಿಂದ ವಾಪಸ್ ತೆರಳುವ ಮೋದಿ ಕಲಬುರಗಿ ಏರ್‌ಪೋರ್ಟ್‌ನಿಂದ ಮುಂಬೈಗೆ ವಾಪಸಾಗಲಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:44 am, Thu, 19 January 23