Shivamogga News: 1980 ರಿಂದ ಇಲ್ಲಿಯವರೆಗೆ ಅರಣ್ಯ ಭೂಮಿ ಒತ್ತುವರಿ, ಒಟ್ಟು 2815 ಎಫ್​ಐಆರ್

|

Updated on: Jul 06, 2023 | 8:13 AM

ಅರಣ್ಯ ಸಂರಕ್ಷಣಾ ಕಾಯ್ದೆ 1980 ಜಾರಿಯಾದಾಗಿನಿಂದ ಇಲ್ಲಿಯವರೆಗೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಕ್ಕೆ ಶಿವಮೊಗ್ಗದ 12 ಅರಣ್ಯ ವಿಭಾಗಗಳಲ್ಲಿ 2815 ಎಫ್ಐಆರ್​ಗಳು ದಾಖಲಾಗಿವೆ ಎಂದು ಕರ್ನಾಟಕ ಅರಣ್ಯ ಇಲಾಖೆ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿದೆ.

Shivamogga News: 1980 ರಿಂದ ಇಲ್ಲಿಯವರೆಗೆ ಅರಣ್ಯ ಭೂಮಿ ಒತ್ತುವರಿ, ಒಟ್ಟು 2815 ಎಫ್​ಐಆರ್
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ: ಅರಣ್ಯ ಸಂರಕ್ಷಣಾ ಕಾಯ್ದೆ (Forest Protection Act) 1980 ಜಾರಿಯಾದಾಗಿನಿಂದ ಇಲ್ಲಿಯವರೆಗೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಕ್ಕೆ ಶಿವಮೊಗ್ಗದ (Shivamogga) 12 ಅರಣ್ಯ ವಿಭಾಗಗಳಲ್ಲಿ 2815 ಎಫ್ಐಆರ್​ (FIR) ದಾಖಲಾಗಿವೆ ಎಂದು ಕರ್ನಾಟಕ ಅರಣ್ಯ ಇಲಾಖೆ (Karnataka Forest Department) ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿದೆ. ಆದರೆ ಇಲ್ಲಿಯವರೆಗೆ ಕೇವಲ 130 ಚಾರ್ಜ್‌ಶೀಟ್‌ ಸಲ್ಲಿಕೆಯಾಗಿವೆ.

1980 ರಿಂದ ಶಿವಮೊಗ್ಗ ವ್ಯಾಪ್ತಿಯ 29 ಅರಣ್ಯ ವಿಭಾಗಗಳಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ಗಳ ಸಂಖ್ಯೆಯ ವಿವರಗಳನ್ನು ಕೋರಿ ಕಾರ್ಯಕರ್ತ ಗಿರೀಶ್ ಆಚಾರ್ ಎಂಬುವರು ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ 29 ಅರಣ್ಯ ವಿಭಾಗಗಲ್ಲಿ 12 ವಿಭಾಗಗಳು ಮಾತ್ರ ಉತ್ತರ ನೀಡಿವೆ. ಉಂಬ್ಳಿಲ್ಯು, ತರೀಕೆರೆ, ನಾಗರಾಳ, ಸಾಗರ, ಶಿರಾಳಕೊಪ್ಪ, ಆನವಟ್ಟಿ, ರಿಪ್ಪೇನಪೇಟೆ, ಶಂಕರ್, ಆಗುಂಬಿ, ಮನದಗುದ್ದಿ, ತೀರ್ಥಹಳ್ಳಿ ಮತ್ತು ಕಾರ್ಗಲ್​​​ ರೇಂಜ್​​​ ಅಧಿಕಾರಿಗಳು ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾಗಿರುವ ಎಲ್ಲಾ 29 ರೇಂಜ್‌ಗಳ ರೇಂಜ್ ಫಾರೆಸ್ಟ್ ಆಫೀಸರ್‌ಗಳ (ಆರ್‌ಎಫ್‌ಒ) ವಿರುದ್ಧ ಕ್ರಮ ಕೈಗೊಳ್ಳುವಂತೆ ಜೂನ್ 30 ರಂದು ಆಚಾರ್ ಅವರು ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದರೆ ಸೂಕ್ತ ಕ್ರಮ: ಈಶ್ವರ ಖಂಡ್ರೆ

ಆಚಾರ್ ಪರ ವಾದ ಮಂಡಿಸಿದ ವಕೀಲ ವೀರೇಂದ್ರ ಪಾಟೀಲ್ 1980ರಿಂದ ಇಂದಿನವರೆಗೆ ಕೇವಲ ಶೇ.5ರಷ್ಟು ಆರೋಪಪಟ್ಟಿ ಸಲ್ಲಿಕೆಯಾಗಿದೆ. ಅರಣ್ಯ ಅಧಿಕಾರಿಗಳ ಈ ಕೃತ್ಯವು ಅರಣ್ಯ ಸಂರಕ್ಷಣಾ ಕಾಯಿದೆ, 1980 ರ ಸೆಕ್ಷನ್ 2 ರ ಉಲ್ಲಂಘನೆಯಾಗಿದೆ. ಆದ್ದರಿಂದ ಅತಿಕ್ರಮಣ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ವಿಫಲರಾದ ಸೇವೆಯಲ್ಲಿರುವ ಮತ್ತು ನಿವೃತ್ತ ಆರ್‌ಎಫ್‌ಒಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ 2,04,229.762 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಅದರಲ್ಲಿ ಶಿವಮೊಗ್ಗದಲ್ಲಿ ಅತಿ ಹೆಚ್ಚು 81,502 ಎಕರೆ ಒತ್ತುವರಿಯಾಗಿದೆ ಎಂದು ತಿಳಿದುಬಂದಿದೆ.

ಇನ್ನೋರ್ವ ಕಾರ್ಯಕರ್ತ ಪಾಪೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಸರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು ನಿಗದಿತ ಕಾಲಮಿತಿಯೊಳಗೆ ಆರೋಪಪಟ್ಟಿ ಸಲ್ಲಿಸಲು ಆರ್‌ಎಫ್‌ಒಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. “ಚಾರ್ಜ್‌ಶೀಟ್ ಸಲ್ಲಿಸಲು ವಿಫಲರಾದ ಎಲ್ಲಾ ಆರ್‌ಎಫ್‌ಒಗಳ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಬೇಕು” ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Thu, 6 July 23